ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ಆರ್ಟ್ ಆಫ್ ಲಿವಿಂಗ್ ಮತ್ತು ಕೇಂದ್ರ ಕಾರಾಗೃಹದ ಸಂಯುಕ್ತ ಆಶ್ರಯದಲ್ಲಿ ವಿಶೇಷ ಯೋಗ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯೆ ಶಿಬಿರವನ್ನು ಆಯೋಜಿಸಲಾಯಿತು.
ಏಳು ದಿನಗಳ ಕಾಲ ನಡೆದ ಈ ಸಂತಸದ ಕಾರ್ಯಕ್ರಮ ಮತ್ತು ಸುದರ್ಶನ ಕ್ರಿಯೆ ಶಿಬಿರಕ್ಕೆ ಡಾ. ಬಿ. ಎಂ ಪಾಟೀಲ್ ಗುರೂಜಿ ನೇತೃತ್ವ ವಹಿಸಿದ್ದರು. ಕಾರಾಗೃಹ ಸಿಬ್ಬಂದಿ ಹಾಗೂ ಕೈದಿಗಳಲ್ಲಿ ಮಾನಸಿಕ ನೆಮ್ಮದಿ, ಆತ್ಮವಿಶ್ವಾಸ ಮತ್ತು ಆರೋಗ್ಯಕರ ಜೀವನಶೈಲಿಯ ಅರಿವು ಮೂಡಿಸುವ ಉದ್ದೇಶದಿಂದ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾರಾಗೃಹ ಅಧೀಕ್ಷಕ ಡಾ. ಎಂ. ಎಸ್. ಮಾಳಿ, “ಮನುಷ್ಯನ ಆರೋಗ್ಯಕರ ಬದುಕಿಗೆ ಮನಸ್ಸಿನ ಶಾಂತಿ ಅತ್ಯಗತ್ಯವಾಗಿದೆ. ಮನಸ್ಸು ಶಾಂತವಾಗಿದ್ದಾಗ ವ್ಯಕ್ತಿ ಸದಾ ಕ್ರಿಯಾಶೀಲನಾಗಿರುತ್ತಾನೆ ಮತ್ತು ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ. ನಿಯಮಿತ ಯೋಗಾಭ್ಯಾಸದಿಂದ ಈ ಶಾಂತಿ ಮತ್ತು ಸಮತೋಲನವನ್ನು ಸಾಧಿಸಬಹುದು” ಎಂದು ತಿಳಿಸಿದರು.
ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಡಾ. ರವೀಂದ್ರ ಬೆಳ್ಳಿ ಮಾತನಾಡಿ, “ಯೋಗವು ಮನಸ್ಸನ್ನು ಪ್ರಸನ್ನಚಿತ್ತವಾಗಿಡಲು ಸಹಕಾರಿಯಾಗುತ್ತದೆ. ಕೋಪ ಮತ್ತು ಅಸಹನೆಯಿಂದ ಅನಾಹುತಗಳು ಸಂಭವಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ಯೋಗ ಹಾಗೂ ಪ್ರಾಣಾಯಾಮಕ್ಕೆ ಸಮಯ ಮೀಸಲಿಟ್ಟು ಆರೋಗ್ಯಕರ ಮತ್ತು ಸಂತಸದ ಬದುಕು ನಡೆಸಬೇಕು” ಎಂದು ಸಲಹೆ ನೀಡಿದರು.
ಡಾ. ಬಿ. ಎಂ. ಪಾಟೀಲ್ ಮಾತನಾಡಿ, “ಮನುಷ್ಯ ಸದಾ ಸಂತೋಷದಿಂದ ಇರಲು ಮನಸ್ಸು, ಬುದ್ಧಿ ಮತ್ತು ಭಾವನೆಗಳು ಸಮತೋಲನದಲ್ಲಿರಬೇಕು. ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ನಿಯಮಿತ ಸುದರ್ಶನ ಕ್ರಿಯೆಯಿಂದ ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಸಂಯಮದಿಂದ ಎದುರಿಸುವ ಶಕ್ತಿ ಲಭಿಸುತ್ತದೆ. ಶಿಬಿರದಲ್ಲಿ ಕಲಿತ ಅಭ್ಯಾಸಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕ ಅಭಿಜಿತ್ ಜಾಯಕ್ಕನವರ್, ಜೈಲರ್ಗಳಾದ ಗೋಪಾಲ್ ಕುಲಕರ್ಣಿ, ಸವಿತಾ ಬೆಳ್ಳುಂಡಗಿ, ಭಾಗ್ಯಶ್ರೀ ಕೆ., ಡಿ.ಎಸ್. ದೀಕ್ಷಿತ್, ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಪ್ರಕಾಶ್ ಚೌಹಾಣ್ ಹಾಗೂ ಸ್ವಯಂಸೇವಕರಾದ ಡಾ. ಎಸ್.ಜಿ. ಅಸ್ಕಿ, ಶೃತಿ ಪಾಟೀಲ, ಗೋಪಾಲ ಪಾಟೀಲ ಮತ್ತು ಲೋಕೇಶ್ ಪಾಟೀಲ ಉಪಸ್ಥಿತರಿದ್ದರು.
ಯೋಗ ದಿನಾಚರಣೆಯಲ್ಲಿ 30ಕ್ಕೂ ಹೆಚ್ಚು ಕಾರಾಗೃಹ ಸಿಬ್ಬಂದಿ, 300ಕ್ಕೂ ಹೆಚ್ಚು ಪುರುಷ ಬಂದಿಗಳು ಹಾಗೂ 30ಕ್ಕೂ ಹೆಚ್ಚು ಮಹಿಳಾ ಬಂದಿಗಳು ಉತ್ಸಾಹದಿಂದ ಭಾಗವಹಿಸಿ ಯೋಗಾಭ್ಯಾಸ ಮತ್ತು ಸುದರ್ಶನ ಕ್ರಿಯೆಯ ಪ್ರಯೋಜನಗಳನ್ನು ಪಡೆದರು. ಕಾರ್ಯಕ್ರಮವು ಆರೋಗ್ಯ, ಮಾನಸಿಕ ನೆಮ್ಮದಿ ಮತ್ತು ಆತ್ಮವಿಕಾಸದ ಮಹತ್ವವನ್ನು ಸಾರುವ ಮೂಲಕ ಯಶಸ್ವಿಯಾಗಿ ನೆರವೇರಿತು.




