ನಳಂದಾ ಜಿಲ್ಲೆಯ ಆಸ್ಪತ್ರೆಯೊಂದರಿಂದ ನವಜಾತ ಶಿಶು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲು ಸುಮಾರು ಎರಡು ತಿಂಗಳು ವಿಳಂಬ ಮಾಡಿದ ಪೊಲೀಸ್ ಹಾಗೂ ಜಿಲ್ಲಾಡಳಿತದ ನಡೆಗೆ ಪಾಟ್ನಾ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರೊಂದಿಗೆ, ಬಿಹಾರ ರಾಜ್ಯದಲ್ಲಿ ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 14,500 ಮಕ್ಕಳು ನಾಪತ್ತೆಯಾಗಿರುವ ಆಘಾತಕಾರಿ ವಿಚಾರವನ್ನೂ ನ್ಯಾಯಾಲಯ ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ರಾಜೀವ್ ರಂಜನ್ ಪ್ರಸಾದ್ ಮತ್ತು ಸುನಿಲ್ ದತ್ ಮಿಶ್ರಾ ಅವರಿದ್ದ ವಿಭಾಗೀಯ ಪೀಠವು ಸೆಪ್ಟೆಂಬರ್ 15ರಂದು ಈ ವಿಚಾರಣೆ ನಡೆಸಿತು. “ಇತ್ತೀಚೆಗೆ ನಡೆದ ಬಾಲ ನ್ಯಾಯ ಸಮ್ಮೇಳನದಲ್ಲಿ ಬಿಹಾರದ ಡಿಜಿಪಿ ಅವರು ಒಂದು ವರ್ಷದಲ್ಲಿ 14,500ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು. ಹೀಗಿರುವಾಗ, ಸೂಕ್ಷ್ಮತೆ ಅರಿತು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಮಾತ್ರ ಪೊಲೀಸ್ ಠಾಣೆಗಳ ಜವಾಬ್ದಾರಿ ನೀಡಬೇಕು ಮತ್ತು ಅವರಿಗೆ ‘ಮನೋಭಾವದ ಪರೀಕ್ಷೆ’ (Attitudinal test) ನಡೆಸಬೇಕು” ಎಂದು ನ್ಯಾಯಪೀಠ ಕಟ್ಟುನಿಟ್ಟಾಗಿ ಹೇಳಿದೆ.
ನಳಂದಾದ ಆಸ್ಪತ್ರೆಯಿಂದ ಮಗು ನಾಪತ್ತೆಯಾಗಿರುವ ಕುರಿತು ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಕಟು ಟೀಕೆ ಮಾಡಿದೆ. ಎರಡು ತಿಂಗಳ ಕಾಲ ಎಫ್ಐಆರ್ ದಾಖಲಿಸದೆ ಸತಾಯಿಸಿರುವುದು ಪೊಲೀಸ್ ಅಧಿಕಾರಿಗಳು ಹಾಗೂ ನಳಂದಾ ಜಿಲ್ಲಾಧಿಕಾರಿಯ ಅಸೂಕ್ಷ್ಮತೆಗೆ ಸ್ಪಷ್ಟ ನಿದರ್ಶನ ಎಂದು ಕೋರ್ಟ್ ಹೇಳಿದೆ. ಈ ನಡುವೆ, ಘಟನೆ ನಡೆದ ಆಸ್ಪತ್ರೆಯ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.
ಡಿಎನ್ಎ ಪರೀಕ್ಷೆ ವೇಳೆ ಠಾಣಾಧಿಕಾರಿ (SHO) ತಮಗೆ ಬೆದರಿಕೆ ಹಾಕಿದ್ದರು ಹಾಗೂ ದೂರು ದಾಖಲಿಸಿಕೊಳ್ಳದೆ ಎರಡು ತಿಂಗಳ ಕಾಲ ಅಲೆದಾಡಿಸಿದ್ದರು ಎಂದು ಮಗುವಿನ ತಂದೆ ಮತ್ತು ಚಿಕ್ಕಪ್ಪ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡರು. ಅಲ್ಲದೆ, ಮೊದಲ ತನಿಖಾಧಿಕಾರಿಯು ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಅವಕಾಶ ಮಾಡಿಕೊಟ್ಟಿದ್ದರು ಎಂಬ ಗಂಭೀರ ಆರೋಪವನ್ನು ಅರ್ಜಿದಾರರು ಮಾಡಿದ್ದಾರೆ.
This video cannot be played in your browser. Open the video directly
ಈ ಆರೋಪಗಳನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ಪಿ) ಕೋರ್ಟ್ ಸೂಚಿಸಿದೆ. ಮಗು ಕಳವು ಮತ್ತು ಮಾರಾಟದ ಜಾಲದಲ್ಲಿ ಅಂತರ ಜಿಲ್ಲಾ ಅಥವಾ ಅಂತರರಾಜ್ಯ ಗ್ಯಾಂಗ್ಗಳು, ದಲ್ಲಾಳಿಗಳ ಕೈವಾಡವಿದೆಯೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಮಗು ಕಳೆದುಹೋದ ಆರಂಭಿಕ ನಿರ್ಣಾಯಕ ಸಮಯದಲ್ಲಿ (ಗೋಲ್ಡನ್ ಅವರ್) ಎಫ್ಐಆರ್ ದಾಖಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಹಾಲಿ ಠಾಣಾಧಿಕಾರಿಯನ್ನು ವಿಶೇಷ ತನಿಖಾ ತಂಡದಿಂದ (SIT) ವಜಾಗೊಳಿಸಿ ಬೇರೆಡೆ ವರ್ಗಾಯಿಸಲು ನ್ಯಾಯಾಲಯ ಆದೇಶಿಸಿದೆ.
ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಅಥವಾ ವಾಪಸ್ ಪಡೆಯುವಂತೆ ಇತ್ತೀಚೆಗೆ ಕೆಲವರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ, ಆರೋಪ ಸಾಬೀತಾದರೆ ಹೊಸದಾಗಿ ಎಫ್ಐಆರ್ ದಾಖಲಿಸುವಂತೆ ಸೂಚಿಸಿದೆ. ಜೊತೆಗೆ, ಮಗುವಿನ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆಯೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.





