ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಾಜಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ಅವರನ್ನು ಖುಲಾಸೆಗೊಳಿಸಿರುವ ದೆಹಲಿ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ವಿನೇಶ್ ಫೋಗಟ್ ಹಾಗೂ ಇತರ ಮಹಿಳಾ ಕುಸ್ತಿಪಟುಗಳು ನಿರ್ಧರಿಸಿದ್ದಾರೆ.
ಆಗಸ್ಟ್ 3ರ ಸೋಮವಾರದಂದು ದೆಹಲಿ ನ್ಯಾಯಾಲಯವು ಈ ಪ್ರಕರಣದಲ್ಲಿ ಮಾಜಿ ಸಂಸದ ಬ್ರಿಜ್ಭೂಷಣ್ ಮತ್ತು ಅವರ ಸಹಾಯಕ ವಿನೋದ್ ತೋಮರ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಈ ತೀರ್ಪಿಗೆ ಪ್ರತಿಕ್ರಿಯಿಸಿರುವ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ವಕೀಲರಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. “ಮಹಿಳಾ ಕುಸ್ತಿಪಟುಗಳು ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ತಮ್ಮ ವಕೀಲರಿಗೆ ಸೂಚಿಸಿದ್ದಾರೆ, ಮತ್ತು ಇದನ್ನು ಆದಷ್ಟು ಬೇಗ ಮಾಡಲಾಗುವುದು. ನಾವು ಭರವಸೆ ಕಳೆದುಕೊಂಡಿಲ್ಲ, ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ,” ಎಂದು ಅವರು ಹೇಳಿದ್ದಾರೆ.
“ಆಡಳಿತ ಪಕ್ಷದ ಪ್ರಭಾವಿ ನಾಯಕನ ವಿರುದ್ಧ ಬೀದಿಗಿಳಿದು ಎಫ್ಐಆರ್ ದಾಖಲಿಸಲು ನಮಗೆ ಸಾಕಷ್ಟು ಧೈರ್ಯ ಬೇಕಾಯಿತು. ಬ್ರಿಜ್ಭೂಷಣ್ ತನ್ನ ಅಧಿಕಾರ ಮತ್ತು ತೋಳ್ಬಲವನ್ನು ಬಳಸಿ ಅನೇಕ ಹುಡುಗಿಯರನ್ನು ಬೆದರಿಸಿ, ಅವರು ತಮ್ಮ ಹೆಸರುಗಳನ್ನು ಹಿಂಪಡೆಯುವಂತೆ ಮಾಡಿದರು. ಆದರೂ, ಅನೇಕ ಮಹಿಳಾ ಕುಸ್ತಿಪಟುಗಳು ಎದೆಗುಂದದೆ ನ್ಯಾಯಾಲಯದಲ್ಲಿ ಬ್ರಿಜ್ಭೂಷಣ್ ವಿರುದ್ಧ ಹೋರಾಡಿದರು. ಆದರೆ, ಮಹಿಳಾ ಕುಸ್ತಿಪಟುಗಳು ಹೊರಿಸಿದ್ದ ಲೈಂಗಿಕ ದೌರ್ಜನ್ಯದ ಆರೋಪಗಳಲ್ಲಿ ನ್ಯಾಯಾಲಯವು ಬ್ರಿಜ್ಭೂಷಣ್ ಅವರನ್ನು ದೋಷಿಯಲ್ಲ ಎಂದು ತೀರ್ಪು ನೀಡಿರುವುದು ನಮಗೆ ತೀವ್ರ ಬೇಸರ ತರಿಸಿದೆ,” ಎಂದು ವಿನೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಮತ್ತು ಇಡೀ ವ್ಯವಸ್ಥೆಯು ಬ್ರಿಜ್ಭೂಷಣ್ ಅವರನ್ನು ರಕ್ಷಿಸಲು ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, “ಆರಂಭದಿಂದಲೂ ಇಡೀ ವ್ಯವಸ್ಥೆ ಮತ್ತು ಸರ್ಕಾರವು ಬ್ರಿಜ್ಭೂಷಣ್ ಅವರನ್ನು ರಕ್ಷಿಸುವ ಕೆಲಸವನ್ನೇ ಮಾಡುತ್ತಾ ಬಂದಿವೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2016 ರಿಂದ 2019ರ ನಡುವೆ ಭಾರತೀಯ ಕುಸ್ತಿ ಫೆಡರೇಶನ್ (WFI) ಕಚೇರಿಯಲ್ಲಿ, ಬ್ರಿಜ್ಭೂಷಣ್ ಅವರ ಅಧಿಕೃತ ನಿವಾಸದಲ್ಲಿ ಮತ್ತು ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಅಪ್ರಾಪ್ತೆ ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಾಗಿರುವ ಬ್ರಿಜ್ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ 2023ರಲ್ಲಿ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಮತ್ತು ಸಂಗೀತಾ ಫೋಗಟ್ ಸೇರಿದಂತೆ ಹಲವಾರು ಖ್ಯಾತ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್ನಿಂದ ಸಂಸತ್ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಿಂಗಳುಗಳ ಕಾಲ ಧರಣಿ ಕೂತಿದ್ದರು.




