ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಆರಂಭವೇ ರೈತರಲ್ಲಿ ಆತಂಕ ಮೂಡಿಸಿತ್ತು. ಜೂನ್ ತಿಂಗಳಲ್ಲಿ ವಾಡಿಕೆಯ ಶೇ. 29ರಷ್ಟು ಮಳೆ ಕೊರತೆಯಿಂದ ಬಿತ್ತನೆ ತಡವಾಗಿ ನಡೆದರೆ, ಈಗ ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ. 12ರಷ್ಟು ಅಧಿಕ ಮಳೆಯಾಗಿರುವುದು ಅಂಕಿ-ಅಂಶಗಳಲ್ಲಿ ಸಮಾಧಾನ ತಂದಿದೆ. ಆದರೆ ಹೊಲಗಳ ವಾಸ್ತವ ಚಿತ್ರ ಬೇರೆ ಕಥೆಯನ್ನೇ ಹೇಳುತ್ತಿದೆ. ಮಳೆ ತಡವಾಗಿ ಸುರಿದ ಪರಿಣಾಮ, ಇಳುವರಿ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ.
ಜೂನ್ ತಿಂಗಳಲ್ಲಿ ಜಿಲ್ಲೆಗೆ ವಾಡಿಕೆಯಂತೆ 146 ಮಿ.ಮೀ. ಮಳೆ ಆಗಬೇಕಾಗಿದ್ದರೆ ಕೇವಲ 104 ಮಿ.ಮೀ. ಮಳೆಯಾಗಿ ಶೇ. 29ರಷ್ಟು ಕೊರತೆ ದಾಖಲಾಗಿತ್ತು. ನಂತರ ಜುಲೈನಲ್ಲಿ ಮಳೆ ಚುರುಕುಗೊಂಡು, ವಾಡಿಕೆಯ 191 ಮಿ.ಮೀ. ಬದಲಿಗೆ 213 ಮಿ.ಮೀ. ಮಳೆಯಾಗಿ ಶೇ. 12ರಷ್ಟು ಅಧಿಕ ಮಳೆಯಾಯಿತು. ಆದರೂ ಜೂನ್ 1ರಿಂದ ಆಗಸ್ಟ್ 1ರವರೆಗೆ ಒಟ್ಟಾರೆ ಮುಂಗಾರು ಅವಧಿಯನ್ನು ಪರಿಗಣಿಸಿದರೆ, ವಾಡಿಕೆಯ 343 ಮಿ.ಮೀ. ಮಳೆಯ ಬದಲಿಗೆ 325 ಮಿ.ಮೀ. ಮಾತ್ರ ಸುರಿದಿದ್ದು, ಜಿಲ್ಲೆಯಲ್ಲಿ ಇನ್ನೂ ಶೇ. 5ರಷ್ಟು ಮಳೆ ಕೊರತೆ ಇದೆ.
ಜಿಲ್ಲೆಯ ಅಂಕಿ-ಅಂಶಗಳು ಖಾನಾಪುರ, ಅಥಣಿ, ಹುಕ್ಕೇರಿ, ಕಾಗವಾಡ, ರಾಯಬಾಗ, ನಿಪ್ಪಾಣಿ, ಚಿಕ್ಕೋಡಿ, ಗೋಕಾಕ್, ರಾಮದುರ್ಗ ಹಾಗೂ ಯರಗಟ್ಟಿ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಹೇಳುತ್ತವೆ. ಆದರೆ ಬೆಳಗಾವಿ, ಬೈಲಹೊಂಗಲ, ಮೂಡಲಗಿ, ಸವದತ್ತಿ ಹಾಗೂ ಕಿತ್ತೂರು ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದೆ.
ಆದರೆ, ರೈತರು ಹೇಳುವ ಕಥೆ ಅಂಕಿ-ಅಂಶಗಳಿಗಿಂತ ಭಿನ್ನವಾಗಿದೆ. ಸವದತ್ತಿ, ಯರಗಟ್ಟಿ, ಮೂಡಲಗಿ, ಕಿತ್ತೂರು ಹಾಗೂ ರಾಮದುರ್ಗ ಭಾಗಗಳಲ್ಲಿ ಗೋವಿನಜೋಳ, ಹೆಸರು, ಉದ್ದು, ಸೋಯಾಬೀನ್, ಹತ್ತಿ ಸೇರಿದಂತೆ ಹಲವು ಬೆಳೆಗಳು ಸಮರ್ಪಕವಾಗಿ ಬೆಳೆಯದೇ ಇಳುವರಿ ಕುಸಿಯುವ ಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆಗೆ ಮಾಡಿದ ವೆಚ್ಚವೂ ವಾಪಸ್ ಬರುವುದಿಲ್ಲ ಎಂಬ ಆತಂಕ ರೈತರಲ್ಲಿದೆ.
ಈದಿನ.ಕಾಮ್ ಜೊತೆಗೆ ಸವದತ್ತಿ ತಾಲೂಕಿನ ರೈತ ಸಂಘದ ಮುಖಂಡ ಸಿಂಧೂರ ತೆಗ್ಗಿ ಮಾತನಾಡಿ, “ಕಳೆದ ವರ್ಷ ಎಕರೆಗೆ 20 ಕ್ವಿಂಟಲ್ ಗೋವಿನಜೋಳ ಬಂದಿದ್ದರೆ, ಈ ವರ್ಷ ಬಿತ್ತನೆ ಮಾಡಿದ ಖರ್ಚೂ ವಾಪಸ್ ಬರುವುದಿಲ್ಲ. ಆದ್ದರಿಂದ ಸವದತ್ತಿ ಮತ್ತು ಯರಗಟ್ಟಿ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಮೂಡಲಗಿ ತಾಲೂಕಿನ ರೈತ ಸಂಘದ ಶಂಕರ ಹುಗ್ಗಿ, “ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ. ಕಾಲುವೆ ನೀರು ಶೇ. 10ರಷ್ಟು ರೈತರಿಗೆ ಮಾತ್ರ ತಲುಪಿದೆ. ಹೆಸರು ಬೆಳೆಯ ಶೇ. 50ರಷ್ಟು ಹಾನಿಯಾಗಿದ್ದು, ಗೋವಿನಜೋಳ ಹಾಗೂ ಕಬ್ಬಿನ ಇಳುವರಿಯೂ ಗಣನೀಯವಾಗಿ ಕುಸಿಯಲಿದೆ. ಸರ್ಕಾರ ತಕ್ಷಣ ನೆರವು ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಕಿತ್ತೂರು ತಾಲೂಕಿನ ರೈತ ಬಿಸ್ಟಪ್ಪ ಅವರ ಪ್ರಕಾರ, ಐದು ಎಕರೆ ಗೋವಿನಜೋಳ ಬೆಳೆಗೆ ಸುಮಾರು ₹30 ಸಾವಿರ ವೆಚ್ಚವಾಗಿದೆ. ಕಳೆದ ವರ್ಷ ಎಕರೆಗೆ 13 ಕ್ವಿಂಟಲ್ ಇಳುವರಿ ಬಂದಿದ್ದರೆ, ಈ ಬಾರಿ ಕೇವಲ 5ರಿಂದ 6 ಕ್ವಿಂಟಲ್ ಬರಬಹುದೆಂಬ ನಿರೀಕ್ಷೆಯಷ್ಟೇ ಉಳಿದಿದೆ.
ರಾಮದುರ್ಗ ತಾಲೂಕಿನ ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಅವರು, “ಅಧಿಕಾರಿಗಳು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎನ್ನುತ್ತಿದ್ದಾರೆ. ಹಾಗಿದ್ದರೆ ಕೆರೆಗಳು ತುಂಬಿರುವುದನ್ನು ತೋರಿಸಲಿ. ಹೊಲದಲ್ಲಿನ ವಾಸ್ತವ ಪರಿಸ್ಥಿತಿ ನೋಡಿದರೆ ಬೆಳೆಗಳು ಒಣಗುತ್ತಿವೆ. ಹೆಸರು ಬೆಳೆಗೆ ಸೀರು ರೋಗ ತಗುಲಿದ್ದು, ಸರ್ಕಾರ ಪರಿಹಾರ ಘೋಷಿಸಬೇಕು” ಎಂದು ಆಗ್ರಹಿಸಿದ್ದಾರೆ.
ಮಳೆ ಪ್ರಮಾಣದ ಅಂಕಿ-ಅಂಶಗಳು ಉತ್ತಮವಾಗಿದ್ದರೂ, ಬೆಳೆಗಳ ಬೆಳವಣಿಗೆ ಮತ್ತು ಇಳುವರಿಯೇ ರೈತರ ಬದುಕಿನ ಮಾನದಂಡ. ತಡವಾಗಿ ಸುರಿದ ಮಳೆ, ಬೆಳೆಯ ಬೆಳವಣಿಗೆಯ ಹಂತದಲ್ಲಿ ಉಂಟಾದ ವ್ಯತ್ಯಾಸ ಮತ್ತು ರೋಗಬಾಧೆಯಿಂದ ಅನೇಕ ಕಡೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಕೇವಲ ಮಳೆ ಪ್ರಮಾಣವನ್ನಲ್ಲ, ಹೊಲಗಳ ನೈಜ ಪರಿಸ್ಥಿತಿ, ಬೆಳೆ ಹಾನಿ ಹಾಗೂ ರೈತರ ನಷ್ಟವನ್ನು ಆಧರಿಸಿ ಸರ್ಕಾರ ಸಮೀಕ್ಷೆ ನಡೆಸಿ ಅಗತ್ಯ ಪರಿಹಾರ ಹಾಗೂ ನೆರವು ನೀಡುವುದು ಅಗತ್ಯವಾಗಿದೆ.




