ದೇಶವನ್ನೇ ಬೆಚ್ಚಿಬೀಳಿಸಿದ್ದ ಛತ್ತೀಸ್ಗಢದ 2013ರ ಝೀರಂ ಕಣಿವೆ ನಕ್ಸಲ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. ಭೀಕರ ಮಾರಣಹೋಮ ನಡೆದ 13 ವರ್ಷಗಳ ಬಳಿಕ, ಅಪರಾಧಿಗಳೆಂದು ಸಾಬೀತಾದ ಎಲ್ಲ 10 ಮಾವೋವಾದಿ ನಾಯಕರಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯ ಜಗದಾಳಪುರದಲ್ಲಿರುವ ವಿಶೇಷ ಎನ್ಐಎ ನ್ಯಾಯಾಲಯದ ನ್ಯಾಯಾಧೀಶರಾದ ಅಭಯ್ ಸಿಂಗ್ ರಜಪೂತ್ ಅವರು ಈ ಕಠಿಣ ತೀರ್ಪನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಗುಂಡಿನ ಚಕಮಕಿ | ಮಾವೋವಾದಿ ನಾಯಕ ಮದ್ವಿ ಹಿದ್ಮಾ ಸೇರಿ 6 ಮಂದಿ ಹತ್ಯೆ
2013ರ ಮೇ 25ರಂದು ಬಸ್ತಾರ್ ಜಿಲ್ಲೆಯ ಝೀರಂ ಕಣಿವೆಯಲ್ಲಿ ಕಾಂಗ್ರೆಸ್ ಪಕ್ಷದ ‘ಪರಿವರ್ತನ ಯಾತ್ರೆ’ಯ ರ್ಯಾಲಿ ಮುಗಿಸಿ ಹಿಂತಿರುಗುತ್ತಿದ್ದ ನಾಯಕರ ಕಾನ್ವಾಯ್ ಮೇಲೆ ನೂರಾರು ನಕ್ಸಲರು ಹೊಂಚುದಾಳಿ ನಡೆಸಿದ್ದರು. ಈ ಭೀಕರ ದಾಳಿಯಲ್ಲಿ ಛತ್ತೀಸ್ಗಢ ಕಾಂಗ್ರೆಸ್ ಘಟಕದ ಅಧ್ಯಕ್ಷ ನಂದಕುಮಾರ್ ಪಟೇಲ್, ಅವರ ಪುತ್ರ ದಿನೇಶ್ ಪಟೇಲ್, ಮಾಜಿ ಕೇಂದ್ರ ಸಚಿವ ವಿದ್ಯಾಚರಣ್ ಶುಕ್ಲಾ, ಹಿರಿಯ ನಾಯಕ ಮಹೇಂದ್ರ ಕರ್ಮಾ ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ದಾರುಣವಾಗಿ ಹತ್ಯೆಯಾಗಿದ್ದರು.
ದಾಳಿಯ ಬಳಿಕ ಪ್ರಕರಣದ ತನಿಖೆಯನ್ನು ವಹಿಸಿಕೊಂಡ ಎನ್ಐಎ, ಮಾವೋವಾದಿ ಸಂಘಟನೆಯ ಪ್ರಮುಖ ಕಾರ್ಯಕರ್ತರು ಸೇರಿದಂತೆ 10 ಜನರನ್ನು ಬಂಧಿಸಿ ದೋಷಾರೋಪಣೆ ಸಲ್ಲಿಸಿತ್ತು. ನ್ಯಾಯಾಲಯದಲ್ಲಿ ನಡೆದ ಸುದೀರ್ಘ ವಿಚಾರಣೆ ಮತ್ತು ಸಲ್ಲಿಕೆಯಾದ ಪ್ರಬಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶರು, ಪ್ರಕರಣವನ್ನು “ಅತ್ಯಂತ ಅಪರೂಪದಲ್ಲಿ ಅಪರೂಪದ ಪ್ರಕರಣ” ಎಂದು ಪರಿಗಣಿಸಿ ಎಲ್ಲಾ 10 ಜನರಿಗೂ ಗಲ್ಲು ಶಿಕ್ಷೆ ವಿಧಿಸಿದ್ದಾರೆ.




