ಗುರುಪೂರ್ಣಿಮೆ ಅಂಗವಾಗಿ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರ ಪಾದಗಳನ್ನು ಬೆಂಬಲಿಗರು ತೊಳೆಯುತ್ತಿರುವ ವಿಡಿಯೊವೊಂದು ಚರ್ಚೆಗೆ ಗ್ರಾಸವಾಗಿದೆ. ವಿರೋಧ ಪಕ್ಷದ ಈ ನಡೆಯನ್ನು ಕಂದಾಯ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ಚಂದ್ರಶೇಖರ್ ಬಾವಂಕುಳೆ ಅವರು ತೀವ್ರವಾಗಿ ಟೀಕಿಸಿದ್ದಾರೆ.
“ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಕಾಂಗ್ರೆಸ್ ನಾಯಕರ ಸಂಸ್ಕೃತಿಯಾಗಿದೆ. ಈ ಹಿಂದಿನ ಇಂತಹ ಘಟನೆಗಳಿಂದಲಾದರೂ ಅವರು ಪಾಠ ಕಲಿಯಬೇಕಿತ್ತು. ಕೇವಲ ಟೀಕೆ ಹಾಗೂ ನಕಾರಾತ್ಮಕ ಪ್ರಚಾರವನ್ನು ಮಾತ್ರ ತಂದುಕೊಡುವ ಇಂತಹ ಆಚರಣೆಗಳಲ್ಲಿ ಅವರು ಏಕೆ ತೊಡಗಿಕೊಳ್ಳುತ್ತಾರೋ ತಿಳಿಯುತ್ತಿಲ್ಲ,” ಎಂದು ಸಚಿವ ಬಾವಂಕುಳೆ ಸುದ್ದಿಗಾರರ ಮುಂದೆ ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಕೂಡ ಆಗಿರುವ ನಾನಾ ಪಟೋಲೆ ಅವರಿಗೆ, ಗುರುಪೂರ್ಣಿಮೆಯ ಆಚರಣೆಯ ಭಾಗವಾಗಿ ಬೆಂಬಲಿಗರು ಪಾದಗಳನ್ನು ತೊಳೆದು ಪೂಜೆ ಸಲ್ಲಿಸುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತು ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.




