ಪಂಜಾಬ್ನಿಂದ ದಾರಿ ತಪ್ಪಿ 1,200 ಕಿಲೋಮೀಟರ್ಗೂ ಹೆಚ್ಚು ದೂರದ ಬಿಹಾರ ತಲುಪಿದ್ದ ವೃದ್ಧರೊಬ್ಬರು, ಅಪರಿಚಿತ ಯುವಕನ ಮಾನವೀಯತೆ ಹಾಗೂ ಕೃತಕ ಬುದ್ಧಿಮತ್ತೆ (AI – ChatGPT) ತಂತ್ರಜ್ಞಾನದ ಸರಿಯಾದ ಬಳಕೆಯಿಂದಾಗಿ ಕೊನೆಗೂ ತಮ್ಮ ಕುಟುಂಬವನ್ನು ಸುರಕ್ಷಿತವಾಗಿ ಸೇರಿದ್ದಾರೆ.
ಪಂಜಾಬ್ನ ಲೂಧಿಯಾನ ಜಿಲ್ಲೆಯ ಫತೇಗಢ್ ಗುಜರಾನ್ ಗ್ರಾಮದ ನಿವಾಸಿಯಾಗಿರುವ ಚಮನ್ ಲಾಲ್ ಎಂಬ ವೃದ್ಧರು, ಸೆಪ್ಟೆಂಬರ್ 11ರಂದು ಪಂಜಾಬ್ ಸರ್ಕಾರದ ‘ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆ’ ಅಡಿಯಲ್ಲಿ ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್ (ಚಿನ್ನದ ದೇವಸ್ಥಾನ) ದರ್ಶನಕ್ಕೆ ತೆರಳಿದ್ದರು. ಸ್ವಲ್ಪ ನೆನಪಿನ ಶಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದ ಚಮನ್ ಲಾಲ್, ಯಾತ್ರೆಯ ವೇಳೆ ತಮ್ಮ ಜೊತೆಯಲ್ಲಿದ್ದವರಿಂದ ಬೇರ್ಪಟ್ಟು ಅಮೃತಸರ ರೈಲ್ವೆ ಸ್ಟೇಷನ್ ತಲುಪಿದ್ದಾರೆ. ಅಲ್ಲಿಂದ ತಪ್ಪಾಗಿ ಬಿಹಾರಕ್ಕೆ ಹೋಗುವ ರೈಲನ್ನು ಹತ್ತಿ, ಕೊನೆಗೆ ಬಿಹಾರದ ಗಯಾ ರೈಲ್ವೆ ನಿಲ್ದಾಣ ತಲುಪಿದ್ದಾರೆ.
ಇದನ್ನೂ ಓದಿ: ಉದ್ಯೋಗಕ್ಕೂ ಕುತ್ತು, ಘನತೆಗೂ ಪೆಟ್ಟು: ಎಐ ತಂತ್ರಜ್ಞಾನದಲ್ಲಿ ಮಹಿಳೆಯರೇ ಬಲಿಪಶು
ಗಯಾ ರೈಲ್ವೆ ನಿಲ್ದಾಣದಲ್ಲಿ ದಾರಿ ಕಾಣದೆ, ಹಸಿವಿನಿಂದ ಕಂಗಾಲಾಗಿದ್ದ ವೃದ್ಧರನ್ನು ಕಂಡ ಅಲ್ಲಿನ ನಿರ್ಮಾಣ ವಲಯದ ಉದ್ಯೋಗಿ ನೀರಜ್ ಎಂಬ ಯುವಕ ಅವರ ಬಳಿ ಮಾತನಾಡಿದ್ದಾರೆ. ವೃದ್ಧರಿಗೆ ತಮ್ಮ ಪೂರ್ಣ ವಿಳಾಸ ಹೇಳಲು ಸಾಧ್ಯವಾಗದೆ, ಕೇವಲ ತಮ್ಮ ಗ್ರಾಮದ ಹೆಸರು ‘ಫತೇಗಢ್ ಗುಜರಾನ್’ ಎಂದು ಮಾತ್ರ ನೆನಪಿಸಿಕೊಂಡು ಹೇಳುತ್ತಿದ್ದರು. ನೀರಜ್ ತಕ್ಷಣ ವೃದ್ಧರನ್ನು ತಮ್ಮ ಮನೆಗೆ ಕರೆದೊಯ್ದು, ಊಟ ನೀಡಿ, ಕಳೆದ ನಾಲ್ಕು ದಿನಗಳಿಂದ ತಮ್ಮ ಕುಟುಂಬದ ಸದಸ್ಯರಂತೆ ಉಪಚರಿಸಿದ್ದಾರೆ.
ವೃದ್ಧರು ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿದ್ದರಿಂದ ಅವರು ಪಂಜಾಬ್ನವರು ಎಂಬುದು ನೀರಜ್ಗೆ ಸ್ಪಷ್ಟವಾಗಿತ್ತು. ಆದರೆ ‘ಫತೇಗಢ್ ಗುಜರಾನ್’ ಎಂಬ ಹೆಸರಿನ ಹಲವು ಪ್ರದೇಶಗಳಿದ್ದಿದ್ದರಿಂದ ನಿಖರವಾದ ವಿಳಾಸ ಹುಡುಕುವುದು ಸವಾಲಾಗಿತ್ತು. ಹೀಗಾಗಿ ನೀರಜ್ ಸುಮಾರು 3 ದಿನಗಳ ಕಾಲ AI ಉಪಕರಣವಾದ ChatGPT ಮತ್ತು ಇಂಟರ್ನೆಟ್ ಸರ್ಚ್ ಬಳಸಿ ಜಾಲಾಡಿದ್ದಾರೆ. ಕೊನೆಗೆ ಈ ಗ್ರಾಮವು ಪಂಜಾಬ್ನ ಲೂಧಿಯಾನ ಜಿಲ್ಲೆಯ ಮಾಚಿವಾರ ಸಾಹಿಬ್ ಬಳಿ ಇದೆ ಎಂಬ ನಿಖರ ಮಾಹಿತಿಯನ್ನು AI ಸಹಾಯದಿಂದ ಕಂಡುಕೊಂಡಿದ್ದಾರೆ.
ಕೇವಲ ವಿಳಾಸ ಪತ್ತೆಹಚ್ಚಿ ಸುಮ್ಮನಾಗದ ನೀರಜ್, ವೃದ್ಧರನ್ನು ಒಬ್ಬರನ್ನೇ ಕಳುಹಿಸುವುದು ಸುರಕ್ಷಿತವಲ್ಲವೆಂದು ಭಾವಿಸಿ, ಗಯಾದಿಂದ ಲೂಧಿಯಾನಕ್ಕೆ ಸ್ವತಃ ಕರೆತಂದಿದ್ದಾರೆ. ನಂತರ ಮಾಚಿವಾರ ಪ್ರದೇಶಕ್ಕೆ ಬಂದು ಸ್ಥಳೀಯರಿಗೆ ವೃದ್ಧರ ಫೋಟೋ ತೋರಿಸಿ ವಿಚಾರಿಸಿದ್ದಾರೆ. ಈ ವೇಳೆ, ಮಾಸ್ಟರ್ ಕೃಷ್ಣ ಲಾಲ್ ಎಂಬ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ‘ಕಾಣೆಯಾಗಿದ್ದಾರೆ’ ಎಂಬ ಪೋಸ್ಟರ್ ಆಧರಿಸಿ ವೃದ್ಧರನ್ನು ಗುರುತಿಸಿ, ಅವರ ಮೊಮ್ಮಗ ಸುಖ್ಚೈನ್ ಸಿಂಗ್ಗೆ ಕರೆ ಮಾಡಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮೊಮ್ಮಗ ಸುಖ್ಚೈನ್ ಸಿಂಗ್, ತಮ್ಮ ಅಜ್ಜನನ್ನು ಕಂಡು ಭಾವುಕರಾಗಿದ್ದಾರೆ. “ನಾವು ಅಮೃತಸರದಲ್ಲಿ ಹುಡುಕಿ ಸಿಗದೆ ಪೊಲೀಸ್ ದೂರು ನೀಡಿದ್ದೆವು. ನೀರಜ್ ಅವರು ನಮ್ಮ ಅಜ್ಜನನ್ನು ತಮ್ಮ ಸ್ವಂತ ಕುಟುಂಬದಂತೆ ನೋಡಿಕೊಂಡು, ಸ್ವತಃ ಕರೆತಂದು ಒಪ್ಪಿಸಿರುವ ಈ ಮಾನವೀಯತೆಗೆ ಹೇಗೆ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.




