ಟಿ ನರಸೀಪುರದಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಾಜಿ ಸಂಸದ, ಬಿಜೆಪಿಗ ಪ್ರತಾಪ್ ಸಿಂಹ ವಿರುದ್ಧ ವಿರುದ್ಧ ಎಫ್ಐಆರ್ ದಾಖಲಾಗಿದೆ. ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIRನಲ್ಲಿ ಪ್ರತಾಪ್ ಸಿಂಹ ಹಾಗೂ ಇತರರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.
ಗಣೇಶೋತ್ಸವದ ಮೆರವಣಿಗೆಯಲ್ಲಿ ಪ್ರತಾಪ್ ಸಿಂಹ ಹಾಗೂ ಇತರರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಮಾತ್ರವಲ್ಲದೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರ ನಿಯೋಗವು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ದೂರು ಸಲ್ಲಿಸಿತ್ತು. ಕ್ರಮಕ್ಕೆ ಪಟ್ಟು ಹಿಡಿದಿತ್ತು. ಇದಲ್ಲದೆ, ಪ್ರತಾಪ್ ಸಿಂಹ ಪ್ರಚೋದನಾಕಾರಿ ಭಾಷಣ ಮಾಡಿದಾಗ ಸ್ಥಳದಲ್ಲಿದ್ದ ಟಿ. ನರಸೀಪುರ ಠಾಣೆಯ ಪಿಎಸ್ಐ ಮಲ್ಲೇಶ್ ಅವರೂ ಕೂಡ ದೂರು ನೀಡಿದ್ದರು.
ಪಿಎಸ್ಐ ಮಲ್ಲೇಶ್ ನೀಡಿದ ದೂರಿನ ಆಧಾರದ ಮೇಲೆ ಪ್ರತಾಪ್ ಸಿಂಹ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 132, 191, 194, 196(1)(a)(b), 299, 353(1)(b)(c) ಹಾಗೂ ಸೆಕ್ಷನ್ 190ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ; ಸಾರ್ವಜನಿಕ ಸೇವಕರು ಮತ್ತು ಪೊಲೀಸರ ಅಧಿಕೃತ ಕರ್ತವ್ಯ ನಿರ್ವಹಣೆಗೆ ಅಡ್ಡಿ, ವಿವಿಧ ಸಮುದಾಯ ಮತ್ತು ಜಾತಿಗಳ ನಡುವೆ ದ್ವೇಷ-ವೈಷಮ್ಯ ಉತ್ತೇಜನ, ಧಾರ್ಮಿಕ ನಂಬಿಕೆಗಳಿಗೆ ಅವಮಾನ ಉಂಟುಮಾಡುವಂತಹ ಪ್ರಚೋದನಕಾರಿ ಭಾಷಣ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪಗಳನ್ನು ಉಲ್ಲೇಖಿಸಲಾಗಿದೆ.
This video cannot be played in your browser. Open the video directly




