ದೆಹಲಿಯಲ್ಲಿ ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಆಘಾತಗೊಂಡು ಎಳೆ ಜೀವಗಳು ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ, ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ ಅತಂತ್ರರಾದಾಗಲೂ ದೇಶದ ಪ್ರಧಾನಿಗೆ ಸ್ವಮೋಹವೇ ಹೆಚ್ಚಾಯಿತು; ಇದನ್ನು ಸೇವೆ ಎಂದು ಕರೆಯಲು ಹೇಗೆ ಸಾಧ್ಯ? ಯಾವ ಸೇವೆಗಾಗಿ ಈ ಸಂಕಲ್ಪ, ಆಶೀರ್ವಾದ ಎಂದು ಬಿಜೆಪಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಮೊನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 76ನೇ ಹುಟ್ಟುಹಬ್ಬದ ಅಂಗವಾಗಿ ಬಿಹಾರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಯೋಜಿಸಿದ್ದ ‘ಆಶೀರ್ವಾದ್ ಕಾ ದಿಯಾ’ (ಆಶೀರ್ವಾದದ ದೀಪ) ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 20 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು (ದಿಯಾ) ಬೆಳಗಿಸಲಾಗಿದೆ ಎಂದು ಬಿಜೆಪಿ ಹೇಳಿಕೆ ನೀಡಿದೆ. ಇದೇ ವೇಳೆ ಬಿಹಾರ ರಾಜ್ಯದ ಜನ ಭೀಕರ ಪ್ರವಾಹಕ್ಕೆ ತುತ್ತಾಗಿ ಮನೆ ಮಠ ಕಳೆದುಕೊಂಡು, ಅನ್ನ ನೀರಿಗೂ ಪರದಾಡುತ್ತಿದ್ದರು. ಬಿಜೆಪಿ ನಾಯಕರೋ ಮನೆಯೊಳಗೆ ಶವವಿಟ್ಟು ಮದುವೆಯ ಸಂಭ್ರಮಕ್ಕಿಳಿವಂತೆ ಮೋದಿಯ ಒಳಿತಿಗಾಗಿ ದೀಪ ಬೆಳಗಿ, ಸಸಿ ನಡಿ ದೇವರಲ್ಲಿ ಆಯಸ್ಸು ಆರೋಗ್ಯ ಬೇಡಿ ಎಂದು ಬೀದಿಗೆ ಬಿದ್ದ ಸಂತ್ರಸ್ತರಲ್ಲಿ ಕೇಳಿಕೊಂಡಿತ್ತು.
ನೀರಿನಲ್ಲಿ ಗುಡಿಸಲುಗಳು ಮುಳುಗಿ, ಬದುಕು ಕತ್ತಲಾದಾಗ… ಬಿಹಾರದ ಪಟ್ನಾದ ಪಾಟಲಿಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಜೆಪಿ ಗಂಗಾ ಪಥ್ (ಮೆರೈನ್ ಡ್ರೈವ್) ಸೇರಿದಂತೆ ಹಲವು ಸ್ಥಳಗಳಲ್ಲಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ದೀಪ ಹಚ್ಚಿದರು. ಪಟ್ನಾ ಸಾಹಿಬ್ ಸಂಸದ ರವಿಶಂಕರ್ ಪ್ರಸಾದ್, ರಾಜ್ಯ ಸಚಿವರು ಮತ್ತು ಇತರ ನಾಯಕರು ಕೂಡ ಭಾಗವಹಿಸಿದ್ದರು. ದರ್ಭಂಗಾದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಸರಾವಗಿ, ಬೆಗುಸರಾಯ್ನಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತಿವರ ಕರೆಗೆ ಓಗೊಟ್ಟ ಅನುಯಾಯಿಗಳು, ಸಂವೇದನೆಯಿಲ್ಲದ ಕುರುಡು ಆರಾಧಕರಾಗಿ ಮೋದಿಯ ಹುಟ್ಟನ್ನು ದೀಪಾವಳಿಯಾಗಿಸಿದರು.
ವಿರೋಧ ಪಕ್ಷ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಈ ಕಾರ್ಯಕ್ರಮವನ್ನು ತೀವ್ರವಾಗಿ ಟೀಕಿಸಿದೆ. ನಾಯಕ ತೇಜಸ್ವಿ ಯಾದವ್ ಅವರು, ಬಿಹಾರದಲ್ಲಿ ಇತ್ತೀಚಿನ ಪ್ರವಾಹದಿಂದ ಸುಮಾರು 45 ರಿಂದ 50 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿರುವಾಗ ಸಾರ್ವಜನಿಕ ಹಣವನ್ನು ಈ ರೀತಿ ವ್ಯರ್ಥ ಮಾಡುವುದು ‘ನಾಚಿಕೆಗೇಡು’ ಎಂದು ಹರಿಹಾಯ್ದರು.
This video cannot be played in your browser. Open the video directly

ಸರ್ಕಾರಿ ಆದೇಶ ಹೊರಡಿಸಿ, ಶಾಲೆಗಳು, ಸರ್ಕಾರಿ ಕಟ್ಟಡಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸಲು ನಿರ್ದೇಶನ ನೀಡಲಾಗಿರುವುದು ಅತಿರೇಖ ಎಂದು ಆರೋಪಿಸಿದರು. ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ “ಜಬರ್ದಸ್ತಿ ಹ್ಯಾಪಿ ಬರ್ತ್ಡೇ” ಎಂದು ಬರೆದಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 100 ಕೋಟಿ ರೂಪಾಯಿ ಸಾರ್ವಜನಿಕ ಹಣ ವ್ಯಯವಾಗುತ್ತಿರುವುದು, ಪ್ರವಾಹ ಪೀಡಿತರಿಗೆ ಸರಿಯಾದ ಪರಿಹಾರ ಮತ್ತು ನೆರವು ನೀಡುವ ಬದಲು ದೀಪಗಳ ಮೇಲೆ ಹಣ ಖರ್ಚು ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದರು.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನ್ವಾದಿ) ಕೂಡ ಈ ಕಾರ್ಯಕ್ರಮವನ್ನು ಸಂವೇದನಾಶೂನ್ಯತೆ ಎಂದು ಕರೆದಿದೆ. ಬಿಹಾರ ಪ್ರವಾಹದಲ್ಲಿ ಮುಳುಗಿದ್ದರೂ ಪ್ರಧಾನಮಂತ್ರಿಯ ಹುಟ್ಟುಹಬ್ಬ ಆಚರಿಸುವುದು ಸೂಕ್ತವಲ್ಲ ಎಂದು ಟೀಕಿಸಿತು.
ಪ್ರವಾಹದಿಂದ ತತ್ತರಿಸಿದ ಬಿಹಾರ ಮತ್ತು ಅಸ್ಸಾಂ
ಬಿಹಾರದಲ್ಲಾದ ಪ್ರವಾಹದಿಂದ 15 ಜಿಲ್ಲೆಗಳಲ್ಲಿ ಪರಿಣಾಮ ಬೀರಿದ್ದು, ಲಕ್ಷಾಂತರ ಜನರು ಬಾಧಿತರಾಗಿದ್ದಾರೆ. ಸರ್ಕಾರ ನೆರವು ಕಾರ್ಯಗಳನ್ನು ನಡೆಸುತ್ತಿದೆ ಎಂದು ಆಡಳಿತ ಪಕ್ಷ ಹೇಳುತ್ತಿದೆ. ಅದೇ ಸಮಯದಲ್ಲಿ ಈ ಕಾರ್ಯಕ್ರಮದಲ್ಲಿ ಸರ್ಕಾರಿ ವ್ಯವಸ್ಥೆ ಮತ್ತು ಶಾಲೆಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪಗಳು ವಿರೋಧ ಪಕ್ಷಗಳಿಂದ ಬಂದಿವೆ.
ಬಿಹಾರ ಮತ್ತು ಅಸ್ಸಾಂ ರಾಜ್ಯಗಳ ಪ್ರವಾಹದಲ್ಲಿ ಲಕ್ಷಾಂತರ ಮಂದಿಯ ಬದುಕು ಬೀದಿಗೆ ಬಿದ್ದಿದೆ. ಬಿಹಾರ ರಾಜ್ಯದ 15 ಜಿಲ್ಲೆಗಳ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ಬಾಧಿತರಾಗಿದ್ದು, 10.000 ಕೋಟಿಗೂ ಹೆಚ್ಚು ನಷ್ಟವನ್ನು ಅಂದಾಜಿಸಲಾಗಿದೆ. ಇತ್ತ ಅಸ್ಸಾಂ ರಾಜ್ಯದಲ್ಲಿ 4.45 ಲಕ್ಷ ಜನ ಪ್ರವಾಹ ಪೀಡಿತರಿದ್ದು, 1000 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.
ಸ್ಥಳೀಯ ವರದಿಗಳ ಪ್ರಕಾರ ಬಿಹಾರದಲ್ಲಿ ಇದುವರೆಗೂ 20ಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಜೀವಹಾನಿಯ ನಿಖರ ಅಂಕಿ ಅಂಶಗಳು ಲಭ್ಯವಿಲ್ಲ. ಅಸ್ಸಾಂ ರಾಜ್ಯದಲ್ಲಿ 99 ಮಂದಿ ಪ್ರವಾಹದ ರಭಸಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಹರಿಯುವ 7 ನದಿಗಳು ಅಪಾಯ ಮಟ್ಟ ಮೀರಿವೆ ಎಂದು ಜಲಸಂಪನ್ಮೂಲ ಇಲಾಖೆ ಎಚ್ಚರಿಸಿದೆ. ಮನೆಗಳನ್ನು ಕಳೆದುಕೊಂಡ 8.27 ಲಕ್ಷ ಕುಟುಂಬಗಳು ಕುಡಿಯಲು ನೀರಿಲ್ಲದ, ತುತ್ತು ಅನ್ನವೂ ಸಿಗದ ದಯಾನೀಯ ಪರಿಸ್ಥಿತಿಯಲ್ಲಿವೆ.

ಅಸ್ಸಾಂನಲ್ಲಿ ಈ ವರ್ಷದ ಮಳೆಗಾಲದಲ್ಲಿ ಪ್ರವಾಹದ ಪರಿಸ್ಥಿತಿ ಈಗ ಸುಧಾರಣೆಯ ಲಕ್ಷಣಗಳನ್ನು ತೋರುತ್ತಿದ್ದರೂ, ಹೊಸ ತರಂಗದ ಪ್ರವಾಹವು ಮತ್ತೆ ಕಾಣಿಸಿಕೊಂಡಿದೆ. ಸೆಪ್ಟೆಂಬರ್ ಮಧ್ಯದಲ್ಲಿ ಏಳು ಜಿಲ್ಲೆಗಳಲ್ಲಿ 25,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. 13 ರಿಲೀಫ್ ಕ್ಯಾಂಪ್ಗಳನ್ನು ಸ್ಥಾಪಿಸಲಾಗಿದೆ. ವೆಸ್ಟ್ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಒಬ್ಬ ಮಹಿಳೆಯ ಸಾವಿನಿಂದ ಈ ವರ್ಷದ ಪ್ರವಾಹ ಸಂಬಂಧಿತ ಮರಣ ಸಂಖ್ಯೆ 108ಕ್ಕೆ ಏರಿದೆ. ಸುಮಾರು 6,477 ಹೆಕ್ಟೇರ್ ಬೆಳೆ ಭೂಮಿ ಇನ್ನೂ ಮುಳುಗಿದೆ.
ಜುಲೈ-ಆಗಸ್ಟ್ನಲ್ಲಿ ಪ್ರವಾಹ ತೀವ್ರವಾಗಿತ್ತು. ಆಗ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದರು. ಶಿವಸಾಗರ್, ಚರಾಯ್ದಿಯೋ, ಜೋರ್ಹಾಟ್, ಗೋಲಾಘಾಟ್ ಮತ್ತು ಇತರ ಜಿಲ್ಲೆಗಳು ಹೆಚ್ಚು ಪ್ರಭಾವಿತವಾಗಿದ್ದವು. ಸಾವುನೋವು 100ಕ್ಕೂ ಹೆಚ್ಚಿತ್ತು. ಸಾವಿರಾರು ಹೆಕ್ಟೇರ್ ಬೆಳೆ ಭೂಮಿ ಮುಳುಗಿದ್ದು, ಹಲವು ತಡೆಗೋಡೆಗಳು ಒಡೆದಿದ್ದವು. ಸರ್ಕಾರ ರಿಲೀಫ್ ಕ್ಯಾಂಪ್ಗಳು, ನಗದು ನೆರವು (ಕುಟುಂಬಕ್ಕೆ ₹15,000ರವರೆಗೆ), ಮೃತರ ಕುಟುಂಬಗಳಿಗೆ ₹9 ಲಕ್ಷ ವರೆಗಿನ ಸಹಾಯ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೊಂಡಿತ್ತು.
ಬಿಹಾರವನ್ನು ಆವರಿಸಿದ ಪ್ರವಾಹ ಕೇವಲ ಅಂಕಿಅಂಶಗಳ ಕಥೆಯಲ್ಲ, ಇದು ಲಕ್ಷಾಂತರ ಜನರ ಜೀವನವನ್ನು ತಲೆಕೆಳಗು ಮಾಡಿದ ಕರುಣಾಜನಕ ವಾಸ್ತವ. ಮನೆಗಳು ಮುಳುಗಿದವು, ಬೆಳೆಗಳು ನಾಶವಾದವು, ಪಶುಗಳು ಕೊಚ್ಚಿ ಹೋದವು ಮತ್ತು ಅನೇಕರು ಛಾವಣಿಗಳ ಮೇಲೆ, ತಡೆಗೋಡೆಗಳ ಮೇಲೆ ಅಥವಾ ರಸ್ತೆಬದಿಯಲ್ಲಿ ದಿನಗಳನ್ನು ಕಳೆದರು.

ಪಟ್ನಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾವಿನ ಭಯದಿಂದ ಟಾರ್ಚ್ ಹಿಡಿದು ರಾತ್ರಿ ಕಳೆಯುವ ಪರಿಸ್ಥಿತಿಯಿತ್ತು, ಮನೆಗಳು ನೀರಿನ ಮಧ್ಯೆ ಒಂದು ಚಿಕ್ಕ ದ್ವೀಪದಂತೆ ಕಾಣುತ್ತಿತ್ತು, ಸೂರು ಕಳೆದುಕೊಂಡವರು ಒಣ ರೊಟ್ಟಿ ಮತ್ತು ಈರುಳ್ಳಿಯಲ್ಲಿ ಹಸಿವು ತಣಿಸಿಕೊಳ್ಳುವ ಸ್ಥಿತಿಯೊದಗಿತು. ಗಂಗಾ ಮತ್ತು ಗಂಡಕ್ ನದಿಗಳ ಪಕ್ಕದಲ್ಲಿ ಸಾವಿರಾರು ಜನರು ಛಾವಣಿಗಳ ಮೇಲೆ ವಾರಗಳ ಕಾಲ ಕುಳಿತುಕೊಂಡಿದ್ದರು,“15 ದಿನಗಳಿಂದ ಛಾವಣಿಯ ಮೇಲೆ ಇದ್ದೇವೆ, ಟಾರ್ಪಾಲಿನ ಗುಡಿಸಲು ಮಾಡಿಕೊಂಡು ಬದುಕುತ್ತಿದ್ದೇವೆ, ಇದೇ ನಮ್ಮ ಹಾಸಿಗೆ, ಅಡುಗೆಮನೆ ಮತ್ತು ಮನೆ” ಎಂದು ಬಿಹಾರದ ಜನ ಅವಲತ್ತುಕೊಳ್ಳುವಾಗ ರಾಜ್ಯದ ಮುಖ್ಯಮಂತ್ರಿ ಮಣ್ಣಿನ ಹಣತೆ ಹಚ್ಚಿ ಪ್ರಧಾನ ಮಂತ್ರಿಯ ಆಯಸ್ಸಿಗಾಗಿ ಪ್ರಾರ್ಥಿಸಿ ಎನ್ನುವುದು ಅಸಂಬದ್ಧವಲ್ಲದೆ ಮತ್ತಿನ್ನೇನು.
“ನನ್ನ ಕನಸುಗಳು ದೊಡ್ಡವು, ಅಧಿಕಾರಿಯಾಗುವ ಕನಸು ಕಂಡು ಈ ಮನೆಯಲ್ಲಿ ಕುಳಿತು ಓದುತ್ತಿದ್ದೆ, ಈಗ ಅರ್ಧ ಮನೆ ಗಂಗೆಯಲ್ಲಿ ಮುಳುಗಿದೆ” ಎಂದು ಭೋಜ್ಪುರ್ ಜಿಲ್ಲೆಯ ವಿದ್ಯಾರ್ಥಿ ಮುಳುಗಡೆಯಾದ ಕನಸುಗಳ ಕುರಿತು ಖೇದಗೊಂಡದ್ದು… ಕೊಳಚೆ ನೀರು ಕುಡಿದು ಬದುಕುತ್ತಿದ್ದೇವೆ, ಪುಟ್ಟ ಮಕ್ಕಳಿಗೆ ಹಾಲು ಸಿಗದು, ಅನ್ನವಿಲ್ಲದೆ ಖಾಲಿ ಹೊಟ್ಟೆಯಲ್ಲಿ ದಿನ ದೂಡುತ್ತಿದ್ದೇವೆ ಅಕ್ಷರಶಃ ಅಲೆಮಾರಿಗಳಂತೆ ಬದುಕುತ್ತಿದ್ದೇವೆ ಎಂದು ಮಾದ್ಯಮದ ಮುಂದೆ ತಮ್ಮ ಪಾಡನ್ನು ಹಾಡಿಕೊಂಡಾಗಲೂ ಯಾವ ಜನಪ್ರತಿನಿಧಿಯೂ, ರಾಕಜಕಾರಣಿಯೂ ಸ್ಥಳ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಲಿಲ್ಲ.
ಇನ್ನು, ರಿಲೀಫ್ ಕ್ಯಾಂಪ್ಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ದೂರುಗಳಿದ್ದವು, ಸೊಳ್ಳೆಗಳ ಕಾಟ, ಹುಳು ಹುಪ್ಪಟೆಯ ಭಯದಲ್ಲಿ ನಿರಾಶ್ರಿತರ ಕ್ಯಾಂಪ್ನಲ್ಲಿ ತಂಗಿದ್ದವು ಬಿಹಾರದ ಅತಂತ್ರ ಕುಟುಂಬಗಳು. ಬಿಹಾರದಲ್ಲಿ ಪ್ರವಾಹ ಪ್ರತಿ ವರ್ಷವೂ ಮಾಮೂಲು, ಆದರೆ ಈ ಬಾರಿ ಗಂಗಾ ದಾಖಲೆ ಮಟ್ಟವನ್ನು ಮೀರಿ ಹರಿದು ಅನೇಕರ ಜೀವನವನ್ನು ತಲೆಕೆಳಗು ಮಾಡಿತು. ಸಮುದಾಯ ಅಡುಗೆಮನೆಗಳು ಮತ್ತು ನಗದು ನೆರವು ಸಹಾಯ ಮಾಡಿದವು, ಆದರೆ ಲಕ್ಷಾಂತರ ಜನರಿಗೆ ಸರಿಯಾದ ಆಶ್ರಯ, ಸ್ವಚ್ಛ ನೀರು ಮತ್ತು ಭದ್ರತೆ ಇನ್ನೂ ದೂರವೇ ಉಳಿಯಿತು. ಈ ಪ್ರವಾಹದ ಕಥೆಗಳು ಕೇವಲ ನೀರಿನ ಕಥೆಗಳಲ್ಲ, ಅವು ಭಯ, ನೋವು, ಹತಾಶೆ ಮತ್ತು ಬದುಕುವ ಹಂಬಲದ ಕಥೆಗಳು.
ಇದಾವುದನ್ನೂ ಲೆಕ್ಕಿಸದ ಮೋದಿ ಮತ್ತವರ ಹಿಂಬಾಲಕರು ದೀಪ ಬೆಳಗಿ ಸಂಭ್ರಮಿಸಿದರು; ಉರಿವ ದೀಪಗಳ ಆರಿಸಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಣತೆಯ ಎಣ್ಣೆ ಹೊಯ್ದು ತುಂಬಿಕೊಳ್ಳುತ್ತಿರುವ ಮಕ್ಕಳು, ಮಹಿಳೆಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿತು. ಇದು ಆ ಬಡ ರಾಜ್ಯದ ಹಸಿವಿನ ಧ್ಯೋತಕ ಮೊದಲೇ ಬಡತನ, ಹಸಿವು, ನಿರುದ್ಯೋಗ, ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಬಳಲಿರುವ ರಾಜ್ಯಕ್ಕೆ ಪ್ರವಾಹವೆಂಬುದು ಗಾಯದ ಮೇಲಿನ ಬರೆಯಂತೆ ರಾಜ್ಯದ ಒಳಿತು ಬಯಸುವ ನಾಯಕರಾಗಿದ್ದರೆ ತಮ್ಮ ರಾಜ್ಯದ ಜನತೆಯ ಪರ ಧ್ವನಿಯಾಗಬೇಕಿತ್ತು, ದೀಪ ಬೆಳಗಲು 100 ಕೋಟಿ ಸರ್ಕಾರಿ ಹಣ ವ್ಯಯಿಸುವ ಬದಲು ತನ್ನ ಜನರಿಗೆ ಹೊಟ್ಟೆಗೆ ಕೂಳಿಲ್ಲ, ತಂಗಲು ಸೂರಿಲ್ಲ ಈ ಹಣವನ್ನು ಸಂತ್ರಸ್ತರ ಬದುಕಿಗೆ ಮುಡಿಪಿಡುವ ಪ್ರಸ್ತಾಪ ಮಾಡಬೇಕಿತ್ತು. ಬದಲಿಗೆ ಶಾಲಾ ಮಕ್ಕಳು ಸಂಜೆ ಹಣತೆ ಬೆಳಗಿ ಮೋದಿಯ ಜನುಮದಿನದಂದು ಅವರಿಗಾಗಿ ಪ್ರಾರ್ಥಿಸಿ ಎಂದು ಕರೆಗೊಡುವುದಲ್ಲ.

ಕಟ್ಟಡ ಕುಸಿದು ವಿದ್ಯಾರ್ಥಿಗಳು ಹೆಣವಾದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹತಾಶರಾಗಿ ಸಾವಿನ ದಾರಿ ಹಿಡಿದಾಗ, ತಮ್ಮ ಹಕ್ಕುಗಳಿಗಾಗಿ ದೇಶದ ಯುವಜನ ಬೀದಿಗಿಳಿದಾಗ ಕೊನೆಗೆ ನೈಸರ್ಗಿಕ ವಿಕೋಪದಿಂದ ದೇಶದ ಜನ ಅತಂತ್ರರಾದಾಗಲೂ ದೇಶದ ಪ್ರಧಾನಿಗೆ ಸ್ವಮೋಹವೇ ಹೆಚ್ಚಾಯಿತು; ಇದನ್ನು ಯಾವ ಅಂಧರು ಸೇವೆ ಎಂದು ಕರೆಯಲು ಸಾಧ್ಯ? ಯಾವ ಸೇವೆಗಾಗಿ ಈ ಸಂಕಲ್ಪ, ಆಶೀರ್ವಾದ ಎಂದು ಬಿಜೆಪಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಬಿಹಾರ ಮತ್ತು ಅಸ್ಸಾಂ ರಾಜ್ಯಗಳು ಭೀಕರ ಪ್ರವಾಹದಿಂದ ತತ್ತರಿಸಿ, ಲಕ್ಷಾಂತರ ಜನರು ಸೂರು ಮತ್ತು ಆಹಾರವಿಲ್ಲದೆ ಪರದಾಡುತ್ತಿರುವಾಗ, ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ದೀಪ ಬೆಳಗಲು ವ್ಯಯಿಸಿರುವುದು ಆಡಳಿತ ವ್ಯವಸ್ಥೆಯ ತೀವ್ರ ಸಂವೇದನಾಶೂನ್ಯತೆಯನ್ನು ತೋರುತ್ತದೆ. ಸಂಕಷ್ಟದಲ್ಲಿರುವ ಜನತೆಗೆ ತುರ್ತು ಪರಿಹಾರ ಕಲ್ಪಿಸುವ ಬದಲು, ಸ್ವಮೋಹದ ಇಂತಹ ಆಚರಣೆಗಳಲ್ಲಿ ತೊಡಗುವುದು ವಿಪರ್ಯಾಸ. ನೈಸರ್ಗಿಕ ವಿಕೋಪಗಳು ಮತ್ತು ಯುವಜನರ ಸಮಸ್ಯೆಗಳಿಗೆ ಸ್ಪಂದಿಸದ ನಾಯಕರ ನಡೆಯನ್ನು ಜನತೆ ಮನ್ನಿಸಲಾರರು.





