ಸೇನಾ ಪಡೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಯಾವುದೇ ದೈಹಿಕ ಅಥವಾ ಮಾನಸಿಕ ಅನಾರೋಗ್ಯ ದಾಖಲಾಗಿರದಿದ್ದರೆ, ತದನಂತರದ ಅವಧಿಯಲ್ಲಿ ಎದುರಾಗುವ ವೈಕಲ್ಯ ಅಥವಾ ಅನಾರೋಗ್ಯವನ್ನು ‘ಸೇವಾ ಸಂಬಂಧಿ’ ಎಂದೇ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಯೋಧರಿಗೆ ವೈಕಲ್ಯ ಪಿಂಚಣಿ ನಿರಾಕರಿಸುವ ರಕ್ಷಣಾ ಸಚಿವಾಲಯದ ಧೋರಣೆಯನ್ನು ನ್ಯಾಯಾಲಯ ಕಟು ಶಬ್ದಗಳಲ್ಲಿ ಟೀಕಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ. ಎಸ್ ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿದೆ. “ಯೋಧರು ಸೇವೆಗೆ ಸೇರುವಾಗ ಸಂಪೂರ್ಣ ಆರೋಗ್ಯವಂತರಾಗಿದ್ದರು ಎಂಬುದನ್ನು ಕಾನೂನುಬದ್ಧವಾಗಿ ಗ್ರಹಿಸಬೇಕು. ಒಂದು ವೇಳೆ, ಅವರ ವೈಕಲ್ಯವು ಸೇವಾ ವಾತಾವರಣದಿಂದ ಉಂಟಾಗಿದ್ದಲ್ಲ ಎಂದು ವಾದಿಸುವುದಾದರೆ, ಅದನ್ನು ಸಾಬೀತುಪಡಿಸುವ ಸಂಪೂರ್ಣ ಹೊಣೆಗಾರಿಕೆ ಉದ್ಯೋಗದಾತರ ಮೇಲಿದೆಯೇ ಹೊರತು, ಯೋಧರು ತಮ್ಮ ಹಕ್ಕನ್ನು ಸಾಬೀತುಪಡಿಸಲು ಅಲೆಯಬೇಕಿಲ್ಲ” ಎಂದು ಸ್ಪಷ್ಟಪಡಿಸಿದೆ.
“ಎಂಟೈಟಲ್ಮೆಂಟ್ ನಿಯಮಗಳು-2008ರ ಅಡಿಯಲ್ಲಿ ಸೇನಾ ಸಿಬ್ಬಂದಿಯ ಹಕ್ಕುಗಳನ್ನು ರಕ್ಷಿಸುವ ನಿಯಮಗಳು ಯಥಾವತ್ತಾಗಿರುತ್ತವೆ. ವೈದ್ಯಕೀಯ ಮಂಡಳಿಯ ಶಿಫಾರಸುಗಳನ್ನು ಯಾಂತ್ರಿಕವಾಗಿ ತಿರಸ್ಕರಿಸುವ ಧೋರಣೆಯನ್ನು ಒಪ್ಪಲು ಸಾಧ್ಯವಿಲ್ಲ. ನಿವೃತ್ತ ಯೋಧರ ನ್ಯಾಯಯುತ ಹಕ್ಕುಗಳ ವಿಚಾರದಲ್ಲಿ ಯಾವುದೇ ಅಪಾರದರ್ಶಕತೆ ಅಥವಾ ಅನುಮಾನಗಳಿಗೆ ಆಸ್ಪದವಿರಬಾರದು” ಎಂದು ಆಡಳಿತ ವ್ಯವಸ್ಥೆಗೆ ಆದೇಶಿಸಿದೆ.
ವೈಕಲ್ಯ ಪಿಂಚಣಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯವು ಸಲ್ಲಿಸಿದ್ದ ನೂರಾರು ಅರ್ಜಿಗಳನ್ನು ಕಾಲಮಿತಿ ಮತ್ತು ವಿಚಾರಣಾರ್ಹತೆಯ ಆಧಾರದ ಮೇಲೆ ವಜಾಗೊಳಿಸಿರುವ ಸುಪ್ರೀಂ ಕೋರ್ಟ್, “2015ರ ರಕ್ಷಣಾ ಸಚಿವಾಲಯದ ವರದಿಯ ಶಿಫಾರಸಿನಂತೆ ಯೋಧರ ವಿರುದ್ಧ ಸಲ್ಲಿಸಲಾಗಿರುವ ಅನಗತ್ಯ ಮೇಲ್ಮನವಿಗಳನ್ನು ವಾಪಸ್ ಪಡೆಯಬೇಕು” ಎಂದು ಸೂಚಿಸಿದೆ.



