ರಾಜ್ಯದ ಭೂ ಮಾಲೀಕರು ಮತ್ತು ರೈತರಿಗೆ ಭೂಮಿಯ ಹಕ್ಕುಸ್ವಾಮ್ಯ ಮತ್ತು ಮಾಲೀಕತ್ವದ ಖಾತ್ರಿ ನೀಡಲು ಹೊಸ ಕ್ರಮ ಕೈಗೊಳ್ಳುತ್ತಿರುವುದಾಗಿ ಕಂದಾಯ ಇಲಾಖೆ ತಿಳಿದಿದೆ. ಈ ಕ್ರಮದಡಿ, ಜಮೀನಿನ ಮೂಲ ದಾಖಲೆಯಾದ ಆರ್ಟಿಸಿ (ಪಹಣಿ)ಯನ್ನು ಆಧಾರ್ ಸಂಖ್ಯೆಗೆ ಜೋಡಿಸಿ, ಜಿಯೋ-ರೆಫರೆನ್ಸ್ಡ್ ನಕ್ಷೆ ಮತ್ತು ಓಪನ್ ಲೊಕೇಷನ್ ಕೋಡ್ಗಳೊಂದಿಗೆ (Open Location Codes) ಡಿಜಿಟಲೀಕರಣಗೊಳಿಸಿ ನವೀಕೃತ ರೂಪದಲ್ಲಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.
ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರ ಪ್ರಕಾರ, ಮುಂಬರುವ ಎರಡು ತಿಂಗಳುಗಳಲ್ಲಿ ಕನಿಷ್ಠ 20 ಲಕ್ಷ ಆಧಾರ್ ಜೋಡಿತ ನವೀಕೃತ ಆರ್ಟಿಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು. ಜಮೀನಿನ ಪಹಣಿಯಲ್ಲಿ ಹೆಸರು ಇರುವುದು ಎಂದರೆ ಭೂಮಿಯ ಸಂಪೂರ್ಣ ಮಾಲೀಕತ್ವ ಎಂದರ್ಥವಲ್ಲ ಎಂಬ ಸಮಸ್ಯೆಗೆ ಅಂತ್ಯ ಹಾಡಿ, ‘ದಾಖಲೆ’ಯಿಂದ ‘ಪೂರ್ಣ ಹಕ್ಕು’ ನೀಡಲು ಈ ತಂತ್ರಜ್ಞಾನ ಆಧಾರಿತ ಬದಲಾವಣೆ ತರಲಾಗಿದೆ.”
“ಹೊಸ ಆರ್ಟಿಸಿಯಲ್ಲಿ ಭೂ ಮಾಲೀಕರ ಆಧಾರ್ ಮಾಹಿತಿ ಸೇರಿದಂತೆ ಕುಟುಂಬ ಐಡಿ ಮತ್ತು ರೈತರ ನೋಂದಣಿ ಹಾಗೂ ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯ (FRUITS) ದತ್ತಾಂಶಗಳನ್ನು ಹೊಂದಿಸಲಾಗುತ್ತದೆ. ಇದರಿಂದಾಗಿ ನೂತನ ಪಹಣಿಯಲ್ಲಿ ಭೂ ಮಾಲೀಕರ ಪೋಟೋ ಮತ್ತು ವಿಳಾಸ ಪ್ರಕಟವಾಗಲಿದ್ದು, ನಕಲಿ ದಾಖಲೆಗಳ ಸೃಷ್ಟಿ ಮತ್ತು ಅಕ್ರಮ ಜಮೀನು ಕಸಿಯುವತ್ನಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ” ಎಂದು ಅವರು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ ಮಹಿಳೆಯ ಸಾರ್ವಜನಿಕ ಬದುಕಿನ ಸ್ಥಾನವೇನು?
“ಜಮೀನಿನ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ‘ಆಕಾರ್ಬಂಧ್’ ದಾಖಲೆಗಳನ್ನು ಪಹಣಿಯೊಂದಿಗೆ ಡಿಜಿಟಲ್ ರೂಪದಲ್ಲಿ ಜೋಡಿಸಲಾಗುತ್ತಿದೆ. ಇದರಿಂದ, ನಕ್ಷೆಯಲ್ಲಿರುವ ವಿಸ್ತೀರ್ಣಕ್ಕೂ ಪಹಣಿಯಲ್ಲಿ ನಮೂದಾಗಿರುವ ವಿಸ್ತೀರ್ಣಕ್ಕೂ ವ್ಯತ್ಯಾಸವಿರುವ ಗೊಂದಲಗಳು ಬಗೆಹರಿಯಲಿವೆ. ಅಲ್ಲದೆ, ಪ್ರತಿಯೊಂದು ಆರ್ಟಿಸಿಯಲ್ಲೂ ಕ್ಯೂಆರ್ ಕೋಡ್ ಇರಲಿದ್ದು, ಜಮೀನಿನ ಸಾಲದ ಹೊಣೆಗಾರಿಕೆ ಸೇರಿದಂತೆ ಎಲ್ಲ ಅಧಿಕೃತ ಮಾಹಿತಿಗಳನ್ನು ತಕ್ಷಣವೇ ಪರಿಶೀಲಿಸಬಹುದು” ಎಂದು ತಿಳಿಸಿದ್ದಾರೆ.
ಆರಂಭಿಕ ಹಂತದಲ್ಲಿ ಏಕ ಮಾಲೀಕತ್ವ ಹೊಂದಿರುವ ಆರ್ಟಿಸಿಗಳಿಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಜಂಟಿ ಮಾಲೀಕತ್ವ ಹೊಂದಿರುವ ಆರ್ಟಿಸಿಗಳಿಗೆ ಮಾಲೀಕರು ವಿವಿಧ ಕಂದಾಯ ಸೇವೆಗಳನ್ನು ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಹೊಸ ಮಾದರಿಯ ಪಹಣಿಗಳನ್ನು ವಿತರಿಸಲಾಗುತ್ತದೆ” ಎಂದು ಹೇಳಿದ್ದಾರೆ.



