ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಕ್ಷಮಿಸುವುದಾಗಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಧಾನಿ ಕ್ಷಮೆ ನೀಡುವ ಅಗತ್ಯವಿಲ್ಲ, ಬದಲಾಗಿ ಅವರಲ್ಲಿ ಕ್ಷಮೆಯಾಚನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಶಿಕ್ಷಣ ವ್ಯವಸ್ಥೆಯ ವೈಫಲ್ಯದಿಂದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ಅನುಭವಿಸಿರುವ ನೋವನ್ನು ಪ್ರಧಾನಿ ಅರ್ಥಮಾಡಿಕೊಂಡಿಲ್ಲ. ತಮ್ಮ ಮಗ ಅಥವಾ ಮಗಳನ್ನು ಕಳೆದುಕೊಂಡ ಪೋಷಕರ ನೋವಿಗಿಂತ ದೊಡ್ಡ ನೋವು ಮತ್ತೊಂದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾವಿನ ಹಿಂದೆ ಜೀವಮಾನವಿಡೀ ಮರೆಯಲಾಗದ ದುಃಖವಿದೆ. ಜೊತೆಗೆ ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳೂ ಇವೆ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗಳ ರದ್ದತಿ, ವರ್ಷಗಳ ಪರಿಶ್ರಮ ಒಂದೇ ರಾತ್ರಿ ವ್ಯರ್ಥವಾಗುತ್ತಿದೆ. ಪ್ರಾಮಾಣಿಕವಾಗಿ ಓದಲು ವಿದ್ಯಾರ್ಥಿಗಳಿಗೆ ಹೇಳಲಾಗುತ್ತಿದೆ. ಆದರೆ ಅವರಿಗೆ ನ್ಯಾಯಯುತ ವ್ಯವಸ್ಥೆಯೇ ಸಿಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು “ದಾರಿ ತಪ್ಪಿದ ಮಕ್ಕಳು” ಎಂದಿರುವ ಪ್ರಧಾನಿ, ಅವರನ್ನು ಕ್ಷಮಿಸುವುದಾಗಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್, “ಪ್ರಧಾನಿಗೆ ವಿದ್ಯಾರ್ಥಿಗಳನ್ನು ‘ಕ್ಷಮಿಸುವ’ ಧೈರ್ಯ ಹೇಗೆ ಬರುತ್ತದೆ? ಅವರು ತಮ್ಮ ಮಕ್ಕಳನ್ನು ಕಳೆದುಕೊಂಡ ಒಬ್ಬ ಪೋಷಕರನ್ನೂ ಭೇಟಿ ಮಾಡಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಭವಿಷ್ಯ ಕಳೆದುಕೊಂಡ ಒಬ್ಬ ವಿದ್ಯಾರ್ಥಿಯೊಂದಿಗೂ ಕುಳಿತು ಮಾತನಾಡಿಲ್ಲ. ಭಾರತದ ವಿದ್ಯಾರ್ಥಿಗಳಿಗೆ ಅವರ ಕ್ಷಮೆ ಬೇಕಾಗಿಲ್ಲ; ಅವರಲ್ಲಿ ಪ್ರಧಾನಿ ಕ್ಷಮೆಯಾಚಿಸಬೇಕಿದೆ” ಎಂದು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ವೇಳೆ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ. ಸಮಾಜದಲ್ಲಿರುವ ಆಕ್ರೋಶವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ನಿಂದನೆಗಳಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ದಾರಿ ತಪ್ಪಿದ ಯುವಕರಿಗೆ ಸರಿದಾರಿ ತೋರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದರು.
ಇದನ್ನೂ ಓದಿ: ವಿದ್ಯಾರ್ಥಿಗಳ ಬೆನ್ನಟ್ಟಿರುವ ದೆಹಲಿ ಪೊಲೀಸರಿಗೆ ತಮ್ಮದೇ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ʼಕೈʼ ಬರುತ್ತಿಲ್ಲವೇ?
ಪ್ರತಿಭಟನಾಕಾರರನ್ನು “ನಮ್ಮ ಮಕ್ಕಳು” ಎಂದು ಹೇಳಿದ್ದ ಪ್ರಧಾನಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಗಳ ಅಲೆದಾಟಕ್ಕೆ ಒಳಪಡಿಸುವ ಬದಲು ಕ್ಷಮಿಸಬೇಕು. ಯುವಜನರನ್ನು ತಬ್ಬಿಕೊಂಡು ಸರಿದಾರಿಯಲ್ಲಿ ನಡೆಸುವುದು ಸಮಾಜದ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿದ್ದರು.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಜೂನ್ 20ರಂದು ಜಂತರ್ ಮಂತರ್ನಲ್ಲಿ ಆರಂಭವಾದ ಪ್ರತಿಭಟನೆ ಜುಲೈ 25ರಂದು ಕೇಂದ್ರ ಸರ್ಕಾರ ಬೇಡಿಕೆಗಳನ್ನು ಒಪ್ಪಿಕೊಂಡು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಅಂತ್ಯಗೊಂಡಿತ್ತು. ಈ ಹೋರಾಟಕ್ಕೆ ವಿವಿಧ ಪ್ರತಿಪಕ್ಷಗಳೂ ಬೆಂಬಲ ವ್ಯಕ್ತಪಡಿಸಿದ್ದವು. ಜುಲೈ 20ರಂದು ನಡೆದ “ಸಂಸತ್ ಚಲೋ” ಮೆರವಣಿಗೆಯ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದು, ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗ ನಡೆದಿತ್ತು.




