- ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶವನ್ನು ನಾಶಗೊಳಿಸಲಾಗುತ್ತಿದೆ ಎಂದ ದೆಹಲಿ ಸಿಎಂ
- ಬಿಜೆಪಿಯಿಂದ ಹೊರಬಂದು ದೇಶವನ್ನು ರಕ್ಷಿಸಿ ಎಂದು ಕರೆಕೊಟ್ಟ ಅರವಿಂದ್ ಕೇಜ್ರಿವಾಲ್
ದೇಶದ ಇತಿಹಾಸದಲ್ಲೇ ಅತೀ ಭ್ರಷ್ಟ ಹಾಗೂ ಕಡಿಮೆ ಶಿಕ್ಷಣ ಹೊಂದಿರುವ ಪ್ರಧಾನಿಯನ್ನು ತಾವು ಇದುವರೆಗೂ ಕಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದರ ಕುರಿತು ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, “ದೇಶ ಕಂಡ ಅತೀ ಭ್ರಷ್ಟ ಪ್ರಧಾನಿ ನರೇಂದ್ರ ಮೋದಿ. ಅಹಂಕಾರ ಅವರ ತಲೆಯ ಮೇಲೆ ಕೂತಿದೆ. 12ನೇ ತರಗತಿ ಪಾಸ್ ಆದ ವ್ಯಕ್ತಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಹುಲ್ ಅವರನ್ನು ಅನರ್ಹಗೊಳಿಸಿರುವುದರಿಂದ ಕಾಂಗ್ರೆಸ್ ಮಾತ್ರ ಹೋರಾಟ ಮಾಡಬೇಕಿಲ್ಲ. ಇದು ಪ್ರತಿಯೊಬ್ಬರ ಹೋರಾಟವಾಗಿದೆ. ಹೀಗಾಗಿ ಎಲ್ಲರೂ ಜೊತೆಯಾಗಿ ಪ್ರತಿಭಟಿಸಬೇಕು. ಓದು ಬರಹ ಇಲ್ಲದ ಪ್ರಧಾನಿಯಿಂದ ದೇಶವನ್ನು ರಕ್ಷಿಸುವ ಹೋರಾಟವಾಗಿದೆ. ಪ್ರಧಾನಿ ಪದವಿಗೆ ಮೋದಿ ಅಪಮಾನ ಮಾಡಿದ್ದಾರೆ” ಎಂದು ಟೀಕಿಸಿದರು.
“ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶವನ್ನು ನಾಶಗೊಳಿಸಲಾಗುತ್ತಿದೆ. ದೇಶವನ್ನು ಹಾಳು ಮಾಡಲು ಇಚ್ಚಿಸುವವರು ಬಿಜೆಪಿಯಲ್ಲಿರಿ. ದೇಶವನ್ನು ರಕ್ಷಿಸುವವರು ಬಿಜೆಪಿಯಿಂದ ಹೊರಬನ್ನಿ. ರಾಷ್ಟ್ರವನ್ನು ಉಳಿಸಬೇಕಿದ್ದರೆ ಪಕ್ಷ ತೊರೆಯಿರಿ” ಎಂದು ಕಮಲ ನಾಯಕರಿಗೆ ಕರೆ ನೀಡಿದರು.
“ಭಾರತ ಅಪಾಯದಲ್ಲಿದೆ. ಅಪಾಯದ ಸಂಚಿನಿಂದ ಪಾರು ಮಾಡಲು ರಾಷ್ಟ್ರದ 130 ಕೋಟಿ ಜನತೆ ಮುಂದೆ ಬರಬೇಕು. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಚಿಂತೆಯಿಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವದ ಮೇಲಿನ ದಾಳಿ ಮತ್ತು ಅದಕ್ಕೆ ಕಳಂಕ ತರುತ್ತಿರುವುದು ಗಂಭಿರವಾದ ಬೆಳವಣಿಗೆ” ಎಂದು ಆತಂಕ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿದ ಕೇಂದ್ರ ಸರ್ಕಾರದ ಪ್ರಜಾಸತ್ತಾತ್ಮಕ ವಿರೋಧಿ ನಡೆಯನ್ನು ವಿಪಕ್ಷಗಳು ಖಂಡಿಸಿದ್ದು, ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಿವೆ.