- ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾದ ವಾಟ್ಸ್ಅಪ್ ಅಡ್ಮಿನ್
- ನೀತಿ ಸಂಹಿತೆ ಉಲ್ಲಂಘನೆ;ಕಾರಣ ಕೇಳಿ ಆಯೋಗದಿಂದ ನೊಟೀಸ್ ಜಾರಿ
ಚುನಾವಣಾ ಆಯೋಗದ ನೀತಿ ಸಂಹಿತೆಯ ಬಿಸಿ ಸಾಮಾಜಿಕ ಜಾಲತಾಣ ವಾಟ್ಸ್ಆಪ್ಗೂ ತಟ್ಟಿದೆ.
ಮತದಾನದ ಹಬ್ಬಕ್ಕೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಚುನಾವಣಾ ಆಯೋಗ ಅಧಿಕಾರಿಗಳಿಗೆ ಫರ್ಮಾನು ಹೊರಡಿಸಿದೆ.
ಈ ಹಿನ್ನೆಲೆಯಲ್ಲಿ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದ್ದ ಆಯೋಗ ಈಗ ಒಂದು ಹೆಜ್ಜೆ ಮುಂದೆ ಹೋಗಿ ಸೋಷಿಯಲ್ ಮೀಡಿಯಾಗಳನ್ನು ಹದ್ದಿನ ಕಣ್ಣಿನಿಂದ ವೀಕ್ಷಿಸುತ್ತಿದೆ.
ಈ ಪರಿಣಾಮ ನಿಯಮ ಮೀರಿ ಮೆಸೇಜ್ ಒಂದನ್ನು ಗ್ರೂಪ್ನಲ್ಲಿ ಹಂಚಿಕೊಂಡಿದ್ದ ಕಾರಣ ವಾಟ್ಸ್ಆಪ್ ಗ್ರೂಪ್ನ ಅಡ್ಮಿನ್ ಒಬ್ಬರಿಗೆ ಆಯೋಗ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಅಂದಹಾಗೆ ಆಯೋಗದ ಸೂಚನಾ ಪತ್ರ ಪಡೆದುಕೊಂಡವರು ಕೊಡಗು ಜಿಲ್ಲೆಯ ಕುಶಾಲನಗರ ನಿವಾಸಿ ವಿ ಪಿ ಶ್ರೀಧರ್.
ಶ್ರೀಧರ್ ಅಡ್ಮಿನ್ ಆಗಿರುವ ನಮ್ಮ ಕುಶಾಲನಗರ ವಾಟ್ಸ್ಆಪ್ ಗ್ರೂಪ್ ನಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುವ ರೀತಿಯ ರಾಜಕೀಯ ಹೇಳಿಕೆ ಹೊಂದಿರುವ ವೀಡಿಯೋ ಒಂದು ಪ್ರಸಾರವಾಗಿತ್ತು. ಇದನ್ನು ಆಧಾರವಾಗಿಟ್ಟುಕೊಂಡ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಜೊತೆಗೆ ಈ ಬಗ್ಗೆ ವಿವರಣೆ ಕೇಳಿರುವ ಆಯೋಗ, ಪ್ರಜಾಪ್ರತಿನಿಧಿ ಕಾಯ್ದೆ 1951ರ ಪ್ರಕಾರ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿದೆ. ಹಾಗೆಯೇ ಸೂಚನಾ ಪತ್ರ ಕೈ ಸೇರಿದ 24 ಗಂಟೆಗಳೊಳಗಾಗಿ ಉತ್ತರಿಸುವಂತೆ ಅವರಿಗೆ ತಾಕೀತು ಮಾಡಿದೆ.
ಈ ಸುದ್ದಿ ಓದಿದ್ದೀರಾ? :ಚುನಾವಣೆ 2023 | 10 ದಿನಗಳಲ್ಲಿ 38 ಕೋಟಿ…
ಈ ಬೆಳವಣಿಗೆ ಬೆನ್ನಲ್ಲಿ ಈಗ ಪ್ರಜ್ಞಾವಂತ ವಾಟ್ಸ್ಆಪ್ ಅಡ್ಮಿನ್ ಬಳಗವೊಂದು ತಮ್ಮ ವ್ಯಾಪ್ತಿಯ ಗ್ರೂಪ್ಗೆ ಮನವಿ ಸಂದೇಶ ರವಾನಿಸಿ, ನಿಮ್ಮ ನಿಮ್ಮ ಪೋಸ್ಟಗಳಿಗೆ ನೀವೇ ಹೊಣೆ ಎಂದು ಎಚ್ಚರಿಕೆಯನ್ನೂ ನೀಡಿ, ಆಯೋಗದ ಕೆಂಗಣ್ಣಿಗೆ ಗುರಿಯಾಗದಂತೆ ಮಾಹಿತಿ ಹಂಚಿಕೊಳ್ಳಲು ತಿಳಿಸಿದೆ. ಆ ಮನವಿ ಈ ಕೆಳಗಿನಂತಿದೆ.
ಸ್ನೇಹಿತರೆ, ತಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಹೀಗಾಗಿ ಗ್ರೂಪಿನ ಚಟುವಟಿಕೆಗಳು ಕೂಡಾ ಇಲಾಖೆಯ ಕಣ್ಗಾವಲಿನಡಿಯಲ್ಲಿಯೇ ಬರುತ್ತವೆ.
ಆದುದರಿಂದ ತಾವುಗಳು ದಯಮಾಡಿ ಯಾವುದೇ ರೀತಿಯ “ರಾಜಕೀಯ ಪ್ರೇರಿತ ಪ್ರಚಾರ/ವಿರೋಧದ ಮಾಹಿತಿಯನ್ನು ಅಥವಾ ಅನ್ಯ ಮಾರ್ಗ ಬಳಸಿ ಕಾನೂನಿನ ಕಣ್ಣು ತಪ್ಪಿಸಿ ಪ್ರಚಾರ ನಡೆಸುವುದನ್ನು ಮಾಡಬಾರದು” ಎಂದು ಈ ಮೂಲಕ ತಮ್ಮಗಳ ಗಮನಕ್ಕೆ ತರಬಯಸುತ್ತೇವೆ.
ಅದಾಗ್ಯೂ ಅಕಸ್ಮಾತ್ ಈ ವೇದಿಕೆಯನ್ನು ತಪ್ಪಾಗಿ ಬಳಸಿಕೊಂಡವರ ವಿರುದ್ಧ ಇಲಾಖೆಗಳು ತೆಗೆದುಕೊಳ್ಳುವ ಕಠಿಣ ಕಾನೂನು ಕ್ರಮಗಳಿಗೆ ಅಡ್ಮಿನ್ ಜವಾಬ್ದಾರರಾಗಿರುವುದಿಲ್ಲವೆಂದು ತಿಳಿಸಬಯಸುತ್ತೇವೆ. ಎಂದಿದ್ದಾರೆ.
ವಾಟ್ಸ್ಆಪ್ ಅಡ್ಮಿನ್ ಮಾಡಿರುವ ಈ ಮನವಿ ಇತರೆ ಸಾಮಾಜಿಕ ಜಾಲತಾಣಗಳಲ್ಲೀಗ ವೈರಲ್ ಮಾಹಿತಿಯಾಗಿ ಹರಿದಾಡುತ್ತಿದೆ.