ʻಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ದ್ವೇಷ ತುಂಬಿದ ಸಿದ್ಧಾಂತವನ್ನು ಭಾರತೀಯರು ಸೋಲಿಸುತ್ತಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಯುಎಸ್ಎ) ಶನಿವಾರ ನ್ಯೂಯಾರ್ಕ್ನಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್, ʻಕರ್ನಾಟಕ ಚುನಾವಣೆಯ ಗೆಲುವಿನ ರೀತಿಯಲ್ಲೇ, ಮುಂಬರುವ ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಧೂಳಿಪಟ ಮಾಡಲಿದೆʼ ಎಂದು ಹೇಳಿದ್ದಾರೆ.
ʻನಾವು ಬಿಜೆಪಿಯನ್ನು ಹೀನಾಯವಾಗಿ ಸೋಲಿಸಬಲ್ಲೆವು ಎಂಬುದನ್ನು ಕರ್ನಾಟಕದಲ್ಲಿ ತೋರಿಸಿದ್ದೇವೆ. ಕರ್ನಾಟಕದಲ್ಲಿ ಚುನಾವಣೆ ನಡೆದ ವೇಳೆ ಬಿಜೆಪಿ ಸರ್ಕಾರವನ್ನು ಹೊಂದಿತ್ತು. ಬಹುತೇಕ ಮಾಧ್ಯಮಗಳು ಅವರ ಪರವಾಗಿದ್ದವು. ನಮಗಿಂತ ಹತ್ತು ಪಟ್ಟು ಹೆಚ್ಚಿನ ಹಣವನ್ನು ಅವರು ಹೊಂದಿದ್ದರು. ತನಿಖಾ ಸಂಸ್ಥೆಗಳ ನೆರವು ಅವರಿಗಿತ್ತು. ಅಧಿಕಾರವನ್ನು ಮುಂದುವರಿಸಲು ಎಲ್ಲಾ ಮೂಲಗಳನ್ನೂ ಅವರು ಬಳಸಿಕೊಂಡರು. ಇದೆಲ್ಲರ ಹೊರತಾಗಿಯೂ ಸಹ ನಾವು ಅವರನ್ನು ಸೋಲಿಸಿದೆವು. ಮುಂದೆ ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿ ಚುನಾವಣೆಗಳು ನಿಗದಿಯಾಗಿವೆ. ಈ ರಾಜ್ಯಗಳಲ್ಲಿಯೂ ಕರ್ನಾಟಕದ ಫಲಿತಾಂಶವನ್ನು ಕಾಂಗ್ರೆಸ್ ಪುನರಾವರ್ತಿಸಲಿದ್ದೇವೆ’ ಎಂದು ರಾಹುಲ್ ಹೇಳಿದಾಗ ಸಭಿಕರು ಭಾರಿ ಚಪ್ಪಾಳೆಯ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿಯ ಬಳಿಕ ನ್ಯೂಯಾರ್ಕ್ಗೆ ಆಗಮಿಸಿದ ರಾಹುಲ್, ಮ್ಯಾನ್ಹ್ಯಾಟನ್ನ ಜಾವಿಟ್ಸ್ ಸೆಂಟರ್ನಲ್ಲಿ ಸಮುದಾಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲೂ ಭಾರತೀಯ ಜನತಾ ಪಕ್ಷ ಸೋಲಲಿದೆ. ಈ ನಿಟ್ಟಿನಲ್ಲಿ ಪ್ರತಿಪಕ್ಷಗಳ ಜತೆಗೆ ಒಗ್ಗಟ್ಟಾಗಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಇದೊಂದು ಸೈದ್ಧಾಂತಿಕ ಹೋರಾಟ. ಒಂದೆಡೆ ಬಿಜೆಪಿಯ ವಿಭಜಕ, ದ್ವೇಷ ತುಂಬಿದ ಸಿದ್ಧಾಂತವಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ನ ಪ್ರೀತಿ, ವಾತ್ಸಲ್ಯದ ಸಿದ್ಧಾಂತವಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.