- ಶಿವರಾಮೇಗೌಡ ಆಗಮನದಿಂದ ನಾಗಮಂಗಲ ಬಿಜೆಪಿಗೆ ಹೊಸ ಹುರುಪು
- ಜೆಡಿಎಸ್ ಉಚ್ಛಾಟಿತ ನಾಯಕನ ಪಕ್ಷ ಸೇರ್ಪಡೆಗೆ ಸಾಕ್ಷಿಯಾದ ಸಿ ಟಿ ರವಿ
ನಾಗಮಂಗಲ ಒಕ್ಕಲಿಗ ಮುಖಂಡ, ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಾಗೂ ಪಕ್ಷಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಶಿವರಾಮೇಗೌಡ ಬಿಜೆಪಿಗೆ ಸೇರ್ಪಡೆಯಾದರು.
ಇದೇ ವೇಳೆ ಶಿವರಾಮೇಗೌಡ ಪುತ್ರ ಚೇತನ್ ಅವರನ್ನೂ ಒಳಗೊಂಡಂತೆ ನಾಗಮಂಗಲ ಕ್ಷೇತ್ರ ವಿವಿಧ ಪಕ್ಷಗಳ ಮುಖಂಡರು ಪಕ್ಷ ಸೇರ್ಪಡೆಯಾದರು.
ಈ ಬಾರಿ ಪಕ್ಷೇತರರಾಗಿ ಕಣಕ್ಕಿಳಿಯಲು ಶಿವರಾಮೇಗೌಡ ನಿರ್ಧರಿಸಿದ್ದರು. ಜೆಡಿಎಸ್ನಿಂದ ಉಚ್ಛಾಟನೆಯಾದ ಬಳಿಕ ಮರಳಿ ಪಕ್ಷ ಸೇರುವ ಪ್ರಯತ್ನ ನಡೆಸಿ ಹಿನ್ನಡೆ ಅನುಭವಿಸಿದ್ದರು. ಈ ನಡುವೆ ನಡೆದ ರಾಜಕೀಯ ಬೆಳವಣಿಗೆಗಳಿಂದ ಶಿವರಾಮೇಗೌಡರಿಗೆ ಬಿಜೆಪಿ ಅಭ್ಯರ್ಥಿಯಾಗುವ ಅವಕಾಶ ಕೂಡಿ ಬಂದಿತು.
ಮಂಡ್ಯದಲ್ಲಿ ಪಕ್ಷ ಬಲಪಡಿಸುವ ಸಲುವಾಗಿ ಗಟ್ಟಿ ಹೆಜ್ಜೆ ಇಡಲು ನಿರ್ಧರಿಸಿದ್ದ ಬಿಜೆಪಿ, ರಾಜಕೀಯ ಲಾಭ ಪಡೆಯಲು ಶಿವರಾಮೇಗೌಡರನ್ನು ಪಕ್ಷಕ್ಕೆ ಸೆಳೆದುಕೊಂಡಿದೆ.
ಲೆಕ್ಕಾಚಾರಗಳ ಪ್ರಕಾರ ಮೂರು ದಿನದ ಹಿಂದೆಯೇ ಶಿವರಾಮೇಗೌಡ ಬಿಜೆಪಿ ಸೇರಬೇಕಿತ್ತು. ಆದರೆ ಆ ಸಮಯದಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯುತ್ತಿದ್ದ ಕಾರಣ ಸೇರ್ಪಡೆ ಕಾರ್ಯ ಮುಂದಕ್ಕೆ ಹೋಗಿತ್ತು.
ಈ ಸುದ್ದಿ ಓದಿದ್ದೀರಾ?:ಚಿಕ್ಕಮಗಳೂರು | ಲಿಂಗಾಯತ ಸಮುದಾಯದ ವಿರುದ್ಧ ಸಿ.ಟಿ ರವಿ ಟೀಕಿಸಿದ್ದಾರೆಂದು ಪೋಸ್ಟ್; ಮೂವರ ಬಂಧನ
ಅಂತಿಮವಾಗಿ ನಾಗಮಂಗಲ ಕ್ಷೇತ್ರದ ಟಿಕೆಟ್ನ ಭರವಸೆ ಹಿನ್ನೆಲೆಯಲ್ಲಿ ಶಿವರಾಮೇಗೌಡ ಕಮಲ ಪಕ್ಷ ಸೇರ್ಪಡೆಯಾಗಿದ್ದಾರೆ. ಕುತೂಹಲಕರ ಸಂಗತಿ ಎಂದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಇದೇ ಶಿವರಾಮೇಗೌಡ, ಸುಮಲತಾ ಅವರ ಬಗ್ಗೆ ತೀರಾ ಕೆಳಮಟ್ಟದ ಹೇಳಿಕೆ ನೀಡಿ, ಜೆಡಿಎಸ್ ಸೋಲಿಗೆ ಹಾಗೂ ಸುಮಲತಾರ ಕೆಂಗಣ್ಣಿಗೆ ಗುರಿಯಾಗಿದ್ದರು. ಬದಲಾದ ಸನ್ನಿವೇಶದಲ್ಲಿ ಈಗ ಸುಮಲತಾ ಮತ್ತು ಶಿವರಾಮೇಗೌಡ ಬಿಜೆಪಿ ಸೇರಿದ್ದಾರೆ.