- ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ಗೆ ಶಿಕ್ಷೆ
- ‘ಪೂರ್ಣೇಶ್ ಮೋದಿಗೆ ದೂರು ಸಲ್ಲಿಸುವ ಹಕ್ಕಿಲ್ಲ‘
ಮೋದಿ ಉಪನಾಮ ಪ್ರಕರಣದ ಕುರಿತ ಸೂರತ್ ನ್ಯಾಯಾಲಯ ತೀರ್ಪು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯ ತೀರ್ಪಿನ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಮೋದಿ ಉಪನಾಮ ವಿವಾದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪರಿಣಾಮ ಸಂಸತ್ ಸಚಿವಾಲಯ, ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ.
ತಮಗೆ ವಿಧಿಸಲಾಗಿರುವ ಜೈಲು ಶಿಕ್ಷಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ರಾಹುಲ್ಗಾಂಧಿ, “ಸಂಸತ್ ಸ್ಥಾನವನ್ನು ಗಣನೆಗೆ ತೆಗೆದುಕೊಂಡು ಶಿಕ್ಷೆಯ ನಿರ್ಣಯದ ಹಂತದಲ್ಲಿ ಕಠಿಣವಾಗಿ ನಡೆಸಿಕೊಳ್ಳಲಾಗಿದೆ. ಇದು ಭರಿಸಲಾಗದ ನಷ್ಟ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ವಿಧಿಸಿರುವ ಶಿಕ್ಷೆಯ ಪ್ರಮಾಣವು ತಮ್ಮನ್ನು ಸಂಸತ್ ಸ್ಥಾನದಿಂದ ಅನರ್ಹತೆಗೊಳಿಸಲು ದಾರಿ ಮಾಡಿಕೊಟ್ಟಿದೆ” ಎಂದು ರಾಹುಲ್ ಗಾಂಧಿ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
“ನ್ಯಾಯಾಲಯ ವಿಧಿಸಿರುವ ಗರಿಷ್ಠ ಶಿಕ್ಷೆಯ ತೀರ್ಪು ಕಾನೂನಿಗೆ ವಿರುದ್ಧವಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಅನಗತ್ಯವಾಗಿ ರಾಜಕೀಯ ಸ್ಥಾನಮಾನ ಮತ್ತು ಇನ್ನಿತರೆ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.
“ಮೋದಿ ಉಪನಾಮ ಕುರಿತ ಹೇಳಿಕೆ ತಪ್ಪು ಎನ್ನುವುದಕ್ಕೆ ಪೂರಕವಾದ ಸಾಕ್ಷಿ ಒದಗಿಸಿಲ್ಲ. ಅಪರಾಧವನ್ನು ಕಾನೂನಿನ ಪ್ರಕಾರ ಸಾಬೀತುಪಡಿಸಲಾಗಿಲ್ಲ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೊಸ ಸಂಸತ್ತಿನ ಹೊರಗೆ ಪ್ರಧಾನಿ ಮೋದಿ ಪದವಿ ದಾಖಲೆಗಳ ಪ್ರದರ್ಶನವಾಗಲಿ; ಸಂಜಯ್ ರಾವುತ್ ಆಗ್ರಹ
“ಸಂಸತ್ ಸ್ಥಾನದ ಅನರ್ಹತೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿನ ಮತದಾರರ ಆಯ್ಕೆಗೆ ಅಡ್ಡಿಪಡಿಸುತ್ತದೆ. ಉಪ ಚುನಾವಣೆಯು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ” ಎಂದು ಮೇಲ್ಮನವಿಯಲ್ಲಿ ವಿವರಿಸಿದ್ದಾರೆ.
“ದೂರುದಾರ ಪೂರ್ಣೇಶ್ ಮೋದಿ ದೂರು ಸಲ್ಲಿಸಲು ಯಾವುದೇ ಹಕ್ಕನ್ನು ಹೊಂದಿಲ್ಲ. ‘ಕಳ್ಳರೆಲ್ಲ ಮೋದಿ ಎನ್ನುವ ಉಪನಾಮ ಹೊಂದಿದ್ದಾರೆ’ ಎನ್ನುವ ಒಂದೇ ಒಂದು ಹೇಳಿಕೆಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದು ಅತ್ಯಂತ ಕಠಿಣ ನಿರ್ಧಾರ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.