- ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೂತನ ಸಿಬಿಎಸ್ಇ ಪಠ್ಯಕ್ರಮ ಅನ್ವಯ
- 11ನೇ ತರಗತಿಯ ಇತಿಹಾಸ ಪುಸ್ತಕದಿಂದಲೂ ಕೆಲವು ಅಧ್ಯಾಯ ಕಡಿತ
ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಮೊಘಲ್ ಸಾಮ್ರಾಜ್ಯದ ಕುರಿತ ಪಠ್ಯ ಇರುವುದಿಲ್ಲ.
ಕೇಂದ್ರ ಹಾಗೂ ರಾಜ್ಯದ ಶಾಲಾ ಶಿಕ್ಷಣದ ಉನ್ನತ ಸಲಹಾ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ರಾಜ್ಯದ 12ನೇ ತರಗತಿಯ ಪಠ್ಯಕ್ರಮವನ್ನು ಪರಿಷ್ಕರಿಸಿದೆ.
ಈ ಮುನ್ನ 12ನೇ ತರಗತಿ ವಿದ್ಯಾರ್ಥಿಗಳಿಗೆ ಇದ್ದ ಸಿಬಿಎಸ್ಇ ಮಧ್ಯಕಾಲೀನ ಇತಿಹಾಸ ಪಠ್ಯಪುಸ್ತಕಗಳಲ್ಲಿನ ‘ರಾಜರು ಮತ್ತು ಪ್ರಮುಖ ಘಟನಾವಳಿಗಳ ಕಾಲಾನುಕ್ರಮ’ ಹಾಗೂ ‘ಮೊಘಲ್ ನ್ಯಾಯಾಲಯಗಳು’ ಅಧ್ಯಾಯಗಳನ್ನುಎನ್ಸಿಇಆರ್ಟಿ ಕೈಬಿಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೊಘಲ್ ಸಾಮ್ರಾಜ್ಯದ ಕುರಿತು ಮಾಹಿತಿ ಒದಗಿಸುತ್ತಿದ್ದ ಎನ್ಸಿಇಆರ್ಟಿ ಪಠ್ಯಕ್ರಮವನ್ನು ಅನುಸರಿಸುವ ಉತ್ತರ ಪ್ರದೇಶದ ಶಿಕ್ಷಣ ಮಂಡಳಿಯು, ಮುಂಬರುವ ಶೈಕ್ಷಣಿಕ ವರ್ಷದಿಂದ ಸಿಬಿಎಸ್ಇ ಪರಿಷ್ಕೃತ ಪಠ್ಯಕ್ರಮವನ್ನು ಅನುಸರಿಸಲು ನಿರ್ಧರಿಸಿದೆ.
ಮೊಘಲ್ ನ್ಯಾಯಾಲಯಕ್ಕೆ ಸಂಬಂಧಿಸಿದ ಅಧ್ಯಾಯಗಳು, ಅಕ್ಬರ್ನಾಮ, ಬಾದಶಹಾನಾಮ ಮತ್ತು ಇತರರ ಅಧ್ಯಾಯಗಳನ್ನು ಕೈಬಿಡಲಾಗಿದೆ ಎಂದು ಉತ್ತರ ಪ್ರದೇಶ ಶಿಕ್ಷಣ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೂತನ ಪಠ್ಯಕ್ರಮ ಪ್ರಸಕ್ತ 2023-24ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗಲಿದೆ ಎಂದು ಎನ್ಸಿಇಆರ್ಟಿ ಹಿರಿಯ ಅಧಿಕಾರಿ ಹೇಳಿದ್ದಾರೆ.
“ಎನ್ಸಿಇಆರ್ಟಿ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನಾವು ಬೋಧಿಸುತ್ತೇವೆ. ಪರಿಷ್ಕೃತ ಆವೃತ್ತಿಯಲ್ಲಿ ಯಾವ ಮಾಹಿತಿ ಇದೆಯೋ ಅದನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ” ಎಂದು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ್ದಾರೆ.
11ನೇ ತರಗತಿಯ ಸಿಬಿಎಸ್ಇ ಇತಿಹಾಸ ಪುಸ್ತಕದಿಂದ ‘ರೈಸ್ ಆಫ್ ಇಸ್ಲಾಂ’ ಮತ್ತು ‘ಸಾಂಸ್ಕೃತಿಕ ಸಂಘರ್ಷ’ ಹೆಸರಿನ ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ. ಅದೇ ರೀತಿ ‘ಶೀತಲ ಸಮರ’ದ ಅಧ್ಯಾಯಗಳು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರದ ಕೆಲವು ಅಧ್ಯಾಯಗಳನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಮೋದಿ ಉಪನಾಮ ಪ್ರಕರಣ | ಸಂಸದರಾಗಿ ಅನರ್ಹಗೊಳಿಸುವ ಶಿಕ್ಷೆ ವಿಧಿಸಲಾಗಿದೆ: ರಾಹುಲ್ ಗಾಂಧಿ
ಪಠ್ಯಕ್ರಮದ ಪರಿಷ್ಕರಣೆಯನ್ನು ಸ್ವಾಗತಿಸಿರುವ ಬಿಜೆಪಿ ನಾಯಕರು, ಎಡಪಂಥೀಯ ಮತ್ತು ಕಾಂಗ್ರೆಸ್ ಒಲವು ಹೊಂದಿರುವ ಲೇಖಕರು ದೇಶದ ಇತಿಹಾಸ ತಿರುಚಿದ್ದಾರೆ. ಹಾಗಾಗಿ ಅದನ್ನು ಸರಿಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳು ಸಿಬಿಎಸ್ಇ ಪಠ್ಯಕ್ರಮದ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿವೆ. ಮೊಘಲ್ ರಾಜರಿಗೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕುವುದರಿಂದ ಇತಿಹಾಸ ಬದಲಾಗುವುದಿಲ್ಲ ಸಮಾಜವಾದಿ ಪಕ್ಷದ ನಾಯಕರು ಹೇಳಿದ್ದಾರೆ.