ʻದಿ ಕೇರಳ ಸ್ಟೋರಿʼ ಬಳಿಕ ಮುಸ್ಲಿಮ್ ಸಮುದಾಯವನ್ನು ಕೆಟ್ಟದಾಗಿ ಚಿತ್ರೀಕರಿಸಿರುವ ಮತ್ತೊಂದು ಬಾಲಿವುಡ್ ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿದೆ.
30 ವರ್ಷಗಳ ಹಿಂದೆ ರಾಜಸ್ಥಾನದ ಅಜ್ಮೀರ್ನಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದನ್ನು ಆಧರಿಸಿ ʻಅಜ್ಮೀರ್-92ʼ ಎಂಬ ಹೆಸರಿನ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ ಈ ಸಿನಿಮಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿರುವ ಜಮೀಯತ್ ಉಲಮಾ ಇ ಹಿಂದ್ ಸಂಘಟನೆಯು ʻಅಜ್ಮೀರ್ 92ʼ ಚಲನಚಿತ್ರವನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ʻಅಪರಾಧ ಘಟನೆಗಳನ್ನು ಧರ್ಮದ ಜೊತೆ ತಳುಕು ಹಾಕುವ ಬದಲು, ಅಪರಾಧಗಳ ವಿರುದ್ಧ ಒಗ್ಗಟ್ಟಿನ ಕ್ರಮದ ಅಗತ್ಯವಿದೆ ಎಂದು ಸಂಘಟನೆಯ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಹೇಳಿದ್ದಾರೆ. ಇಂತಹ ಸಿನಿಮಾಗಳು ಸಮಾಜದಲ್ಲಿ ಬಿರುಕು ಮೂಡಿಸುತ್ತವೆ. ಕೇಂದ್ರ ಸರ್ಕಾರವು ಈ ಚಿತ್ರವನ್ನು ನಿಷೇಧಿಸುವ ಮೂಲಕ ಕೋಮುಭಾವನೆಗಳನ್ನು ಕೆರಳಿಸಿ ಸಮಾಜವನ್ನು ವಿಭಜಿಸುವ ಪ್ರಯತ್ನವನ್ನು ವಿಫಲಗೊಳಿಸಬೇಕುʼ ಎಂದು ಮದನಿ ಒತ್ತಾಯಿಸಿದ್ಧಾರೆ.
ʻಅಜ್ಮೀರ್ನಲ್ಲಿರುವ ಖ್ವಾಜಾ ಮುಈನುದ್ದೀನ್ ಷರೀಫ್ ಚಿಷ್ತಿ ದರ್ಗಾವು ದೇಶದ ಹಿಂದೂ- ಮುಸ್ಲಿಂ ಏಕತೆಗೆ ಉದಾಹರಣೆಯಾಗಿದೆ. ಖ್ವಾಜಾ ಮುಈನುದ್ದೀನ್ ಷರೀಫ್ ಅವರು ಭಾರತದ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯದ ದೇವದೂತ” ಎನಿಸಿಕೊಂಡಿದ್ದರು ಎಂದು ಮಹಮೂದ್ ಮದನಿ ಬಣ್ಣಿಸಿದ್ದಾರೆ.
ʻಅಜ್ಮೀರ್-92ʼ ಸಿನಿಮಾವನ್ನು ಪುಷ್ಪೇಂದ್ರ ಸಿಂಗ್ ನಿರ್ದೇಶಿಸಿದ್ದು, ಜರೀನಾ ವಹಾಬ್, ಸಯಾಜಿ ಶಿಂಧೆ, ಮನೋಜ್ ಜೋಶಿ ಹಾಗೂ ರಾಜೇಶ್ ಶರ್ಮಾ ನಟಿಸಿದ್ದಾರೆ.