- ಗುಲಾಬ್ ನಬಿ ಆಜಾದ್ ಆತ್ಮಕಥೆ ಆಜಾದ್ ಬಿಡುಗಡೆ
- ದೆಹಲಿಯಲ್ಲಿ ಗುಲಾಬ್ ನಬಿ ಸುದ್ದಿಗಾರರೊಂದಿಗೆ ಮಾತು
ಮುಂಬರುವ 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಮೈತ್ರಿಕೂಟ ರಚನೆ ಸಾಧ್ಯವಾಗುವುದಿಲ್ಲ ಎಂದು ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಕ್ಷದ ಸಂಸ್ಥಾಪಕ ಗುಲಾಬ್ ನಬಿ ಆಜಾದ್ ಮಂಗಳವಾರ (ಏಪ್ರಿಲ್ 4) ಹೇಳಿದ್ದಾರೆ.
ದೆಹಲಿಯಲ್ಲಿ ಗುಲಾಬ್ ನಬಿ ಅವರು ತಮ್ಮ ಆತ್ಮಕಥೆ ‘ಆಜಾದ್’’ಕೃತಿ ಬಿಡುಗಡೆಯ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
“ಕಾಂಗ್ರೆಸ್ನಲ್ಲಿ ಯಾವುದೂ ಬದಲಾಗುವುದಿಲ್ಲ. ಪಕ್ಷದ ಪ್ರಬಲ ನಾಯಕರು ಇರುವ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಉತ್ತಮ ಫಲಿತಾಂಶ ಪಡೆಯುತ್ತದೆ. ಯಾವುದೇ ರಾಜ್ಯಗಳಲ್ಲಿನ ಗೆಲುವು ಅಥವಾ ಸೋಲು ತಮ್ಮಿಂದ ಆಗುತ್ತಿದೆ ಎಂದು ಕೇಂದ್ರ ಕಾಂಗ್ರೆಸ್ ನಾಯಕತ್ವ ಹೇಳಿಕೊಳ್ಳುವಂತಿಲ್ಲ” ಎಂದು ಗುಲಾಬ್ ನಬಿ ಆಜಾದ್ ಹೇಳಿದರು.
“ಕೇಂದ್ರದ ಕಾಂಗ್ರೆಸ್ ನಾಯಕತ್ವ ಯಾವುದೇ ಕ್ಷೇತ್ರದ ಮೇಲೆ ಪ್ರಭಾವ ಬೀರುವುದಿಲ್ಲ. ಅವರು ಯಾರನ್ನೂ ಗೆಲ್ಲಲು ಅಥವಾ ಸೋಲುವಂತೆ ಮಾಡುವುದು ಸಾಧ್ಯವಿಲ್ಲ” ಎಂದು ಹೇಳಿದರು.
“ಈಗಿನ ಯಾವ ನಾಯಕರಿಗೂ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳಿಲ್ಲ. ಈಗ ಎಲ್ಲರೂ ತಮಗೆ ಎಷ್ಟು ಸಾಧ್ಯವೋ ಅಷ್ಟು ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ನಮ್ಮಂಥ ಬೃಹತ್ ದೇಶದಲ್ಲಿ ಒಂದು ರಾಷ್ಟ್ರೀಯ ಪಕ್ಷವಾಗುವುದು, ಎಲ್ಲ ಪ್ರದೇಶಗಳು, ಪ್ರತಿ ಮೂಲೆ ತಲುಪುವುದು ಬಹಳ ಕಷ್ಟವಾಗಿದೆ” ಎಂದು ಗುಲಾಂ ನಬಿ ಆಜಾದ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ಯುವ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಿಕ್ಕಾಟ
“2024ರಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಲು ಪ್ರತಿಪಕ್ಷಗಳು ಒಗ್ಗೂಡುವುದಿಲ್ಲ. ಚುನಾವಣೆಯ ನಂತರ ಪಡೆಯುವ ಸಂಖ್ಯೆಗಳ ಆಧಾರದಲ್ಲಿ ಪಕ್ಷಗಳು ಒಂದುಗೂಡುತ್ತವೆ. ಚುನಾವಣೆ ನಂತರ ಕಾಂಗ್ರೆಸ್ ಸಹ ಎರಡು ಬಾರಿ ಮೈತ್ರಿಯಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಅವರೂ ಎರಡು ಬಾರಿ ಮೈತ್ರಿ ಮಾಡಿಕೊಂಡಿದ್ದರು. ಪ್ರಧಾನಿ ಮೋದಿ ಅವರೂ ಇದಕ್ಕೆ ಹೊರತಲ್ಲ” ಎಂದು ಗುಲಾಬ್ ನಬಿ ಅವರು ತಿಳಿಸಿದರು.
ತಮ್ಮ ಪಕ್ಷ ಬಿಜೆಪಿ ಜೊತೆ ಕೈ ಜೋಡಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗುಲಾಂ ನಬಿ ಆಜಾದ್ ಅವರು, “ಅದು ಸಾಧ್ಯವಿಲ್ಲ. ಜಮ್ಮು- ಕಾಶ್ಮಿರದಲ್ಲಿಯೇ ಇತರ ರಾಜಕೀಯ ಪಕ್ಷಗಳೊಂದಿಗೆ ಸೇರುತ್ತೇನೆ” ಎಂದು ಹೇಳಿದರು.