- ಅಕ್ಟೋಬರ್ 14ರಂದು ಸಾಯಿಬಾಬ ಬಿಡುಗಡೆಗೆ ಆದೇಶಿಸಿದ್ದ ಬಾಂಬೆ ಹೈಕೋರ್ಟ್
- ದೇಶದ ಸಮಗ್ರತೆಗೆ ಧಕ್ಕೆ ತರುವಂತಹ ಗಂಭೀರ ಆರೋಪ ಎಂದ ಸುಪ್ರೀಂಕೋರ್ಟ್
ಮಾವೋವಾದಿ ಸಂಪರ್ಕದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ಪಡೆದಿದ್ದ ದೆಹಲಿ ವಿಶ್ವವಿದ್ಯಾಲಯ ಪ್ರೊಫೆಸರ್ ಜಿ ಎನ್ ಸಾಯಿಬಾಬ ಮತ್ತು ಇತರ ಐವರನ್ನು ಬಿಡುಗಡೆ ಮಾಡಿದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ (ಏಪ್ರಿಲ್ 19) ತಳ್ಳಿಹಾಕಿದೆ.
ಪ್ರಕರಣವನ್ನು ಮತ್ತೆ ಬಾಂಬೆ ಹೈಕೋರ್ಟ್ ಮುಂದಕ್ಕೆ ತಳ್ಳಿರುವ ಸುಪ್ರೀಂ ಕೋರ್ಟ್, ಭಿನ್ನ ಪೀಠದಿಂದ ಮತ್ತೊಮ್ಮೆ ವಿಚಾರಣೆ ನಡೆಸಿ ನಿರ್ಧರಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ, ನಾಲ್ಕು ತಿಂಗಳೊಳಗೆ ಪ್ರಕರಣದ ವಿಚಾರಣೆ ನಡೆಸಿ ಹೊಸ ಆದೇಶ ನೀಡುವಂತೆ ಹೈಕೋರ್ಟ್ಗೆ ಸೂಚಿಸಿದೆ. “ಆರೋಪಿಗಳನ್ನು ಬಿಡುಗಡೆ ಮಾಡಿದವರು ಈಗಾಗಲೇ ಅಭಿಪ್ರಾಯ ರೂಪಿಸಿಕೊಂಡಿರುವುದರಿಂದ, ಭಿನ್ನ ಪೀಠವೊಂದನ್ನು ರಚಿಸಿ ಮತ್ತೊಮ್ಮೆ ಪ್ರಕರಣದ ಎಲ್ಲಾ ಆಯಾಮಗಳಿಂದಲೂ ವಿಚಾರಣೆ ನಡೆಸಬೇಕು” ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ಸುದ್ದಿ ಓದಿದ್ದೀರಾ?: ಸಲಿಂಗ ವಿವಾಹ ಮಾನ್ಯತೆ; ಹತ್ತು ದಿನಗಳೊಳಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ
ಮಹಾರಾಷ್ಟ್ರ ಸರ್ಕಾರದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್ 15ರಂದು ಸಾಯಿಬಾಬ ಮತ್ತು ಸಂಗಡಿಗರ ಬಿಡುಗಡೆಯ ಬಾಂಬೆ ಹೈಕೋರ್ಟ್ ನಿರ್ಧಾರವನ್ನು ರದ್ದುಗೊಳಿಸಿತ್ತು. ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ವಿಚಾರಣೆ ನಡೆಸಲು ಸೂಕ್ತ ಕಾರಣಗಳಿಲ್ಲ ಎಂದು ಬಾಂಬೆ ಹೈಕೋರ್ಟ್ ನಿರ್ಧರಿಸಿತ್ತು. ಆದರೆ, “ಬಾಂಬೆ ಹೈಕೋರ್ಟ್ ಪ್ರಕರಣದ ಮಹತ್ವವನ್ನು ಗಮನಿಸಿಲ್ಲ ಅಥವಾ ವಿಚಾರಣಾ ನ್ಯಾಯಾಲಯವು ಆರೋಪಿಯ ಮೇಲೆ ದಾಖಲಾಗಿರುವ ಪ್ರಕರಣದ ಗಂಭೀರತೆಯನ್ನು ಗಮನಿಸಿಲ್ಲ. ಆರೋಪವು ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನವೆನ್ನುವ ಗಂಭೀರತೆಯನ್ನು ಹೊಂದಿದೆ. ಹೀಗಾಗಿ ವಿವರವಾದ ತನಿಖೆಯ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟಿದೆ.
2017ರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸಿದ್ದ ಸಾಯಿಬಾಬ ಅವರನ್ನು ಬಾಂಬೆ ಹೈಕೋರ್ಟ್ನ ನಾಗಪುರ್ ಪೀಠವು ಅಕ್ಟೊಬರ್ 14ರಂದು ಬಿಡುಗಡೆಗೊಳಿಸಿತ್ತು. ಈ ಪ್ರಕರಣದ ಉಳಿದ ನಾಲ್ವರನ್ನೂ ಹೈಕೋರ್ಟ್ ಬಿಡುಗಡೆಗೊಳಿಸಿದೆ. ಆರನೇ ಆರೋಪಿ 2022 ಆಗಸ್ಟ್ನಲ್ಲಿ ಮೃತಪಟ್ಟಿದ್ದರು.