ಮಹಾರಾಷ್ಟ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ನಗರ ಪೊಲೀಸರು ಭೀವಂಡಿ ನ್ಯಾಯಾಲಯಕ್ಕೆ ಸುಮಾರು 3,500 ಪುಟಗಳ ಬೃಹತ್ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದ್ದು, ಅತ್ಯಂತ ಆಘಾತಕಾರಿ ಮಾಹಿತಿಗಳನ್ನು ಹೊರಗೆಡವಿದ್ದಾರೆ. ಮುದ್ರಣಾಲಯದ ಸಿಬ್ಬಂದಿ ಕೇವಲ 8,000 ರೂಪಾಯಿ ಹಣ ಹಾಗೂ ಜಮೀನಿನ ಆಸೆಗೆ ಬಿದ್ದು, ಶೂಗಳ ಇನ್ಸೋಲ್ ಒಳಗೆ ಮಡಚಿಟ್ಟ ಪ್ರಶ್ನೆಪತ್ರಿಕೆಗಳನ್ನು ಅಡಗಿಸಿ ಹೊರತಂದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನೀಡಿರುವ ಮಾಹಿತಿಯಂತೆ, ಉತ್ತರ ಪ್ರದೇಶದ ಆಗ್ರಾದಲ್ಲಿರುವ ‘ಮಹಿಮ್ ಪತ್ರಾನ್ ಪ್ರೈವೇಟ್ ಲಿಮಿಟೆಡ್’ ಎಂಬ ಪ್ರಿಂಟಿಂಗ್ ಪ್ರೆಸ್ನಲ್ಲಿ ಮಹಾರಾಷ್ಟ್ರ ಟಿಇಟಿ ಪರೀಕ್ಷೆಯ ಗೌಪ್ಯ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಲಾಗುತ್ತಿತ್ತು.
ಜೂನ್ 15ರಿಂದ 17ರ ನಡುವೆ ಪ್ರೆಸ್ನ ಇಬ್ಬರು ಹಾಲಿ ಉದ್ಯೋಗಿಗಳು ಹಾಗೂ ಒಬ್ಬ ಮಾಜಿ ಉದ್ಯೋಗಿ ಪ್ರಶ್ನೆಪತ್ರಿಕೆಗಳನ್ನು ಸಣ್ಣದಾಗಿ ಮಡಚಿ ತಮ್ಮ ಶೂಗಳ ಅಡಿಯಲ್ಲಿ ಅಡಗಿಸಿಟ್ಟುಕೊಂಡು ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಹೊರಬಂದಿದ್ದಾರೆ. ಭದ್ರತಾ ಸಿಬ್ಬಂದಿ ಮೇಲ್ಭಾಗದ ಉಡುಪುಗಳನ್ನು ಮಾತ್ರ ತಪಾಸಣೆ ನಡೆಸಿದ್ದು, ಪಾದರಕ್ಷೆಗಳನ್ನು ಪರಿಶೀಲಿಸದಿರುವುದು ಹಗರಣಕೋರರಿಗೆ ಅನುಕೂಲವಾಯಿತು.
ಇದನ್ನೂ ಓದಿ: ಮಂಗಳೂರು | ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ
ಪರೀಕ್ಷೆಯ ಗೌಪ್ಯತೆ ಕಾಪಾಡಲು ರಾಜ್ಯ ಪರೀಕ್ಷಾ ಮಂಡಳಿಯು ನಾಲ್ಕು ವಿಭಿನ್ನ ಸೆಟ್ಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿತ್ತು. ಆದರೆ ಆರೋಪಿಗಳು ನಾಲ್ಕೂ ಸೆಟ್ಗಳನ್ನೂ ಹೊರತರುವಲ್ಲಿ ಯಶಸ್ವಿಯಾಗಿದ್ದರು. ಈ ಕೆಲಸಕ್ಕಾಗಿ ಪ್ರಿಂಟಿಂಗ್ ಪ್ರೆಸ್ ಉದ್ಯೋಗಿಗಳಿಗೆ ತಲಾ 8,000 ರೂಪಾಯಿ ನಗದು ಮತ್ತು ಆಗ್ರಾದಲ್ಲಿ ನಿವೇಶನ ಕೊಡುವುದಾಗಿ ಭರವಸೆ ನೀಡಲಾಗಿತ್ತು.
ಈ ಪ್ರಕರಣದಲ್ಲಿ ಕೋಚಿಂಗ್ ಕ್ಲಾಸ್ನ ಮಾಜಿ ಶಿಕ್ಷಕ ಬಿಜೇಂದ್ರ ಗುಪ್ತಾ ಎಂಬಾತನೇ ಪ್ರಮುಖ ರೂವಾರಿ (ಮಾಸ್ಟರ್ಮೈಂಡ್) ಎಂದು ಗುರುತಿಸಲಾಗಿದೆ. ಪೊಲೀಸರು ಒಟ್ಟು 18 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಪೈಕಿ 16 ಮಂದಿಯನ್ನು ಬಂಧಿಸಲಾಗಿದೆ ಮತ್ತು ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಬಿಹಾರದಲ್ಲಿರುವ ಬಿಜೇಂದ್ರ ಗುಪ್ತಾ ಸಂಬಂಧಿಕರ ಮನೆಯಿಂದ ಕಳುವಾಗಿದ್ದ ಮೂಲ ಪ್ರಶ್ನೆಪತ್ರಿಕೆಯನ್ನು ಪೊಲೀಸರು ವಶಪಡಿಸಿಕೊಂಡಿದೆ. ಹಣಕಾಸು ವಹಿವಾಟಿನ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.




