ಸಾರ್ವಜನಿಕ ಟ್ರಸ್ಟ್ಗಳು (ಮಠ, ದೇವಸ್ಥಾನ ಅಥವಾ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ಗಳು) ಮತ್ತು ಧಾರ್ಮಿಕ ಸಂಸ್ಥೆಗಳ ಆಸ್ತಿ ವಿವಾದಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯಾವುದೇ ಟ್ರಸ್ಟ್ ವಿರುದ್ಧ ಸಿವಿಲ್ ಕೋರ್ಟ್ನಲ್ಲಿ ಕೇಸ್ ಹಾಕಲು ನ್ಯಾಯಾಲಯದ ಅಧಿಕೃತ ಒಪ್ಪಿಗೆ (ಅನುಮತಿ) ಸಿಗುವ ಮುನ್ನ, ಕೋರ್ಟ್ಗಳು ಆಸ್ತಿ ರಕ್ಷಣೆಯ ನೆಪದಲ್ಲಿ ಯಾವುದೇ ‘ಮಧ್ಯಂತರ ಆದೇಶ’ (ತಡೆಯಾಜ್ಞೆ ಇತ್ಯಾದಿ) ನೀಡುವಂತಿಲ್ಲ ಎಂದು ನೇರವಾಗಿ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಮನ್ಮೋಹನ್ ಅವರ ಪೀಠವು ‘ಎಸ್. ಪಂಚಲಿಂಗು ಮತ್ತು ಪೀಪಲ್ಸ್ ಎಜುಕೇಶನ್ ಟ್ರಸ್ಟ್‘ ನಡುವಿನ ವಿವಾದದಲ್ಲಿ ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ, ಟ್ರಸ್ಟ್ ವಿರುದ್ಧ ಕೇಸ್ ಹಾಕಲು ಒಪ್ಪಿಗೆ ನೀಡುವ ಮುನ್ನವೇ ಕೆಳಹಂತದ ವಿಚಾರಣಾ ನ್ಯಾಯಾಲಯವು ಟ್ರಸ್ಟ್ ಆಡಳಿತ ನಿರ್ವಹಣೆಗೆ ಒಂದು ತಾತ್ಕಾಲಿಕ ಸಮಿತಿಯನ್ನು ರಚಿಸಿತ್ತು. ಇದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, ಕೆಳಹಂತದ ಕೋರ್ಟ್ ಆದೇಶವನ್ನು ರದ್ದು ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಡ ಕರ್ನಾಟಕ ಹೈಕೋರ್ಟ್ನ ನಿರ್ಧಾರವನ್ನೇ ಎತ್ತಿಹಿಡಿದು ತೀರ್ಪು ಪ್ರಕಟಿಸಿದೆ.
ಈ ತೀರ್ಪಿಗೆ ಕಾರಣವೇನು ಎಂಬುದನ್ನು ಪೀಠವು ಬಹಳ ಸರಳವಾಗಿ ವಿವರಿಸಿದೆ. ಕೋರ್ಟ್ ನಿಯಮಗಳ ಪ್ರಕಾರ, ಟ್ರಸ್ಟ್ಗಳ ಮೇಲಿನ ಯಾವುದೇ ಕೇಸ್ ನ್ಯಾಯಾಲಯದಿಂದ ಅಧಿಕೃತವಾಗಿ ಒಪ್ಪಿಗೆ (ಅನುಮತಿ) ಪಡೆಯುವವರೆಗೆ ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವದಲ್ಲೇ ಇರುವುದಿಲ್ಲ. ಹೀಗಿರುವಾಗ, ದಾವೆ ಮಾನ್ಯತೆಯನ್ನೇ ಪಡೆಯುವ ಮುನ್ನ ಟ್ರಸ್ಟ್ ಆಸ್ತಿ ನಿರ್ವಹಣೆಗೆ ಬೇರೊಬ್ಬರನ್ನು (ರಿಸೀವರ್) ನೇಮಿಸುವುದು ಅಥವಾ ಇನ್ಯಾವುದೇ ಮಧ್ಯಂತರ ಆದೇಶ ನೀಡಲು ಸಿವಿಲ್ ಕೋರ್ಟ್ಗಳಿಗೆ ಅಧಿಕಾರವಿಲ್ಲ ಎಂದು ತಿಳಿಸಿದೆ.
ಆದರೆ, ಈ ಕಟ್ಟುನಿಟ್ಟಿನ ನಿಯಮಕ್ಕೆ ಒಂದು ತುರ್ತು ವಿನಾಯಿತಿಯನ್ನೂ ನೀಡಲಾಗಿದೆ. ಟ್ರಸ್ಟ್ನ ಆಸ್ತಿಯನ್ನು ಉಳಿಸಿಕೊಳ್ಳಲು ತಕ್ಷಣವೇ ಆದೇಶ ನೀಡಲೇಬೇಕಾದ ಅನಿವಾರ್ಯತೆ ಇದ್ದರೆ ಮಾತ್ರ ಕೋರ್ಟ್ ಮಧ್ಯಪ್ರವೇಶಿಸಬಹುದು. ಇಂತಹ ತುರ್ತು ಸಂದರ್ಭದಲ್ಲಿ, ಕೋರ್ಟ್ ಸೂಕ್ತ ಕಾರಣಗಳನ್ನು ಬರೆದಿಟ್ಟು, ಎದುರು ಪಾರ್ಟಿಗೆ (ಟ್ರಸ್ಟ್ಗೆ) ನೋಟಿಸ್ ನೀಡುವ ಮುನ್ನವೇ ಏಕಪಕ್ಷೀಯವಾಗಿ ಕೇಸ್ ದಾಖಲಿಸಲು ಒಪ್ಪಿಗೆ ನೀಡಬಹುದು. ಆದರೆ ಈ ವಿಶೇಷ ಅಧಿಕಾರವನ್ನು ನ್ಯಾಯಾಲಯಗಳು ಬಹಳ ಎಚ್ಚರಿಕೆಯಿಂದ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಸಾರ್ವಜನಿಕ ಟ್ರಸ್ಟ್ಗಳಿಗೆ ಸುಖಾಸುಮ್ಮನೆ ಕಿರುಕುಳ ನೀಡಲು ಅಥವಾ ಬೆದರಿಕೆ ಹಾಕಲು ಯಾರಾದರೂ ಅನಗತ್ಯ ಕೇಸ್ ಹಾಕುವುದನ್ನು ತಡೆಯುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ. ಇದೇ ವೇಳೆ, ಕೇಸ್ಗೆ ಒಪ್ಪಿಗೆ ಸಿಗುವ ಮುನ್ನವೂ ಟ್ರಸ್ಟ್ ಆಸ್ತಿ ರಕ್ಷಿಸಲು ಮಧ್ಯಂತರ ಆದೇಶ ನೀಡಬಹುದು ಎನ್ನುತ್ತಿದ್ದ ಅಲಹಾಬಾದ್, ಬಾಂಬೆ, ಕೇರಳ ಮತ್ತು ಮದ್ರಾಸ್ ಹೈಕೋರ್ಟ್ಗಳ ಹಳೆಯ ನಿಲುವನ್ನು ಸುಪ್ರೀಂ ಕೋರ್ಟ್ ಇದೀಗ ತಳ್ಳಿಹಾಕಿದೆ. ಆ ಮೂಲಕ ಈ ವಿಚಾರದಲ್ಲಿ ಕರ್ನಾಟಕ ಮತ್ತು ಒಡಿಶಾ ಹೈಕೋರ್ಟ್ಗಳ ನಿಲುವೇ ಸರಿಯಾಗಿದೆ ಎಂದು ಒಪ್ಪಿಕೊಳ್ಳುವ ಮೂಲಕ ದೇಶಾದ್ಯಂತ ಇದ್ದ ಕಾನೂನು ಗೊಂದಲಕ್ಕೆ ಸಂಪೂರ್ಣವಾಗಿ ತೆರೆ ಎಳೆದಿದೆ.




