ಯೆಮೆನ್ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತದ ಧ್ವಜ ಹೊಂದಿದ್ದ ಸರಕು ನೌಕೆಯ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಹಡಗು ಮುಳುಗಡೆಯಾಗಿದೆ. ಆದಾಗ್ಯೂ, ನೌಕೆಯಲ್ಲಿದ್ದ 13 ಭಾರತೀಯ ಸಿಬ್ಬಂದಿ ಹಾಗೂ ಒಬ್ಬ ವಿದೇಶಿ ಪ್ರಜೆ ಸೇರಿದಂತೆ ಒಟ್ಟು 14 ಮಂದಿಯನ್ನು ಯೆಮೆನ್ ಕೋಸ್ಟ್ ಗಾರ್ಡ್ ಸುರಕ್ಷಿತವಾಗಿ ರಕ್ಷಿಸಿದೆ.
ದಾಳಿಗೊಳಗಾದ ಹಡಗನ್ನು ‘ಎಂಎಸ್ವಿ ಫೈಜ್ ನೂರ್ ಒಲಿಯಾ’ (MSV Faize Noore Oliya) ಎಂದು ಗುರುತಿಸಲಾಗಿದೆ. ಕೆಂಪು ಸಮುದ್ರದಲ್ಲಿ ಯೆಮೆನ್ ಜಲ ಗಡಿಯ ಬಳಿ ಸಾಗುತ್ತಿದ್ದಾಗ ಹಡಗಿನ ಮೇಲೆ ಪ್ರಕ್ಷೇಪಕ ವಸ್ತುವಿನಿಂದ ದಾಳಿ ನಡೆಸಲಾಗಿದ್ದು, ಪರಿಣಾಮವಾಗಿ ಹಡಗು ನಿಯಂತ್ರಣ ತಪ್ಪಿ ಸಮುದ್ರದಲ್ಲಿ ಮುಳುಗಿದೆ. ಸಕಾಲದಲ್ಲಿ ಸ್ಪಂದಿಸಿದ ಯೆಮೆನ್ ಕೋಸ್ಟ್ ಗಾರ್ಡ್ ಸಿಬ್ಬಂದಿ, ನೌಕೆಯಲ್ಲಿದ್ದ ಎಲ್ಲ 14 ನಾವಿಕರನ್ನು ರಕ್ಷಿಸಿ ಯೆಮೆನ್ನ ಮೋಖಾ ಬಂದರಿಗೆ (Port of Mokha) ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್, “ನಿರಾಯುಧ ವಾಣಿಜ್ಯ ನೌಕೆಯ ಮೇಲೆ ನಡೆದಿರುವ ಈ ಪ್ರಚೋದನಾರಹಿತ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ. ನಮ್ಮ ನಾಗರಿಕರ ಸುರಕ್ಷತೆಯೇ ನಮಗೆ ಮೊದಲ ಆದ್ಯತೆ. ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ ಯೆಮೆನ್ ಕೋಸ್ಟ್ ಗಾರ್ಡ್ಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಣೆ ಹೊರಡಿಸಿದ್ದು, ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯೆಮೆನ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ತಿಳಿಸಿದೆ. ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಕಳವಳಕಾರಿಯಾಗಿದ್ದು, ಸುರಕ್ಷಿತ ಮತ್ತು ಅಡೆತಡೆಗಳಿಲ್ಲದ ನೌಕಾಯಾನಕ್ಕೆ ತಕ್ಷಣವೇ ವಾತಾವರಣ ನಿರ್ಮಿಸಬೇಕೆಂದು ಭಾರತ ಒತ್ತಾಯಿಸಿದೆ.
ಏಷ್ಯಾ ಮತ್ತು ಯುರೋಪ್ ನಡುವಿನ ಪ್ರಮುಖ ವ್ಯಾಪಾರ ಮಾರ್ಗವಾಗಿರುವ ಕೆಂಪು ಸಮುದ್ರ ಮತ್ತು ಬಾಬ್ ಎಲ್-ಮಂಡೆಬ್ ಜಲಸಂಧಿ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಅಮೆರಿಕ ನಡೆಸುತ್ತಿರುವ ದಾಳಿಗಳ ವಿರುದ್ಧ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಬಾಬ್ ಎಲ್ ಮಂಡೆಲ್ ಜಲಸಂಧಿಯನ್ನು ನಿರ್ಬಂಧಿಸಿದ್ದಾರೆ.



