- ಯುವತಿ ಸಾವಿನಿಂದ ಬಿಬಿಎಂಪಿ ವಿರುದ್ಧ ಸಾರ್ವಜನಿಕರ ಆಕ್ರೋಶ
- 30 ರಿಂದ 40 ಕಿ.ಮೀ ವೇಗದಲ್ಲಿ ಬೀಸಿದ ಚಂಡಮಾರುತ
ಬೆಂಗಳೂರಿನಲ್ಲಿ ಭಾನುವಾರ ಧಾರಾಕಾರ ಮಳೆಯಾಗಿರುವುದರಿಂದ ಇಡೀ ನಗರವೇ ಕಂಗೆಟ್ಟಿದೆ. ಯುವತಿ ಸಾವಿನಿಂದಾಗಿ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಸಂಚಾರಕ್ಕೆ ಯೋಗ್ಯವಲ್ಲದ ಅಂಡರ್ಪಾಸ್ಗಳನ್ನು ಮುಚ್ಚುವುದಾಗಿ ಹೇಳಿದೆ.
“ನಗರದಲ್ಲಿರುವ ಕೆಳಸೇತುವೆಗಳ ಸರ್ವೇ ನಡೆಸಲಾಗುತ್ತಿದ್ದು, ಡ್ರೈನೇಜ್ ಇಲ್ಲದ ಅಂಡರ್ಪಾಸ್ಗಳನ್ನು ಮುಚ್ಚಲಾಗುವುದು. ಲೋಪ ಕಂಡುಬಂದ ಕೆಳಸೇತುವೆಗಳನ್ನು ರಿಪೇರಿ ಮಾಡಿ ಪುನಾರಂಭಿಸಲಾಗುವುದು” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಗರದಲ್ಲಿ ಭಾನುವಾರ ಮಧ್ಯಾಹ್ನ 3:15 ರಿಂದ 4 ಗಂಟೆಯವರೆಗೆ 50 ಮಿ,ಮೀ ಮಳೆಯಾಗಿದೆ. ನಗರದಲ್ಲಿ 18 ಅಂಡರ್ಪಾಸ್ಗಳಿವೆ. ಭಾನುವಾರ ಕೆ ಆರ್ ಸರ್ಕಲ್ ಕೆಳಸೇತುವೆಯಲ್ಲಿ ಮೃತಪಟ್ಟ ಯುವತಿ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುತ್ತೇವೆ” ಎಂದರು.
“ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ರಾಜಕಾಲುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ, ಆ ಭಾಗದ 20 ಮನೆಗಳಿಗೆ ಮಳೆ ನೀರು ನುಗ್ಗಿದೆ. ಭಾನುವಾರ ನಗರದಲ್ಲಿ ಮೋಚಾ ಚಂಡಮಾರುತ ಸುಮಾರು 30 ರಿಂದ 40 ಕಿ.ಮೀ ವೇಗದಲ್ಲಿ ಬೀಸಿದೆ. ಇದರಿಂದ ಮರದ ಎಲೆಗಳು ಉದುರಿ ಹೋಗಿವೆ. ಗಾಳಿಯ ರಭಸಕ್ಕೆ ಅಂಡರ್ಪಾಸ್ನಲ್ಲಿ ನೀರು ಹೋಗುವ ಸ್ಥಳದಲ್ಲಿ ಎಲೆಗಳು ತುಂಬಿರುವುದರಿಂದ ನೀರು ಪೋಲಾಗದೆ ಅನಾಹುತ ಸಂಭವಿಸಿದೆ. ನಗರದಲ್ಲಿ ಸಂಚಾರಕ್ಕೆ ಸೂಕ್ತವಲ್ಲದ ಅಂಡರ್ ಪಾಸ್ ಬಂದ್ ಮಾಡುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅವೈಜ್ಞಾನಿಕ ಕೆಳಸೇತುವೆಗೆ ಯುವತಿ ಬಲಿ; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲು
ಭಾನುವಾರ ಸುರಿದ ಭಾರೀ ಮಳೆಗೆ ಬೆಂಗಳೂರು ಸ್ತಭ್ದವಾಗಿದೆ. ಭೀಕರ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ನಗರದಲ್ಲಿ ನೂರಾರು ಮರಗಳು ನೆಲಕ್ಕೊರಗಿವೆ. ರಸ್ತೆ ತುಂಬಾ ಮರದ ಕೊಂಬೆಗಳು ಬಿದ್ದಿವೆ. ಮರ ಬಿದ್ದು ಕಾರು ಬೈಕ್ ಜಖಂ ಆಗಿವೆ.
ಬೆಂಗಳೂರಿನಲ್ಲಿರುವ ಅವ್ಯವಸ್ಥೆ, ಅವೈಜ್ಞಾನಿಕ ರಸ್ತೆ, ಅಂಡರ್ ಪಾಸ್ಗಳಿಗಾಗಿ ಜನ ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು | ಮಳೆಹಾನಿ ಸಂಬಂಧಿಸಿದ ದೂರುಗಳನ್ನು ಕೂಡಲೇ ಪರಿಹರಿಸಿ : ಬಿಬಿಎಂಪಿ ಮುಖ್ಯ ಆಯುಕ್ತ
ಸಹಾಯ ತಂತ್ರಾಂಶದ ಮುಖಾಂತರ ಬಿಬಿಎಂಪಿ ವಲಯವಾರು ಮಳೆಹಾನಿ ಸಂಬಂಧಿಸಿದ ಸುಮಾರು 70 ದೂರುಗಳು ಬಂದಿದ್ದು, ಮೂರು ದಿನಗಳೊಳಗಾಗಿ ಬಂದಿರುವಂತಹ ದೂರುಗಳನ್ನು ಪರಿಹರಿಸಿ, ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ವಹಿಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ದೂರವಾಣಿ ಮುಖಾಂತರ ಮಳೆಹಾನಿ ಸಂಬಂಧಿಸಿದ ದೂರುಗಳ ವಿವರವನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೇಂದ್ರ ಕಚೇರಿಯಲ್ಲಿರುವ ಕಂಟ್ರೋಲ್ ರೂಂಗೆ ಭೇಟಿ ನೀಡಿ ದೂರುಗಳ ಮಾಹಿತಿ ಪರಿಶೀಲಿಸಿದರು.
“ವಿಪತ್ತು ನಿರ್ವಹಣೆಗಾಗಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಯನ್ನು ತಕ್ಷಣವೇ ನೇಮಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ವಿಶೇಷ ಆಯುಕ್ತ (ಮಾಹಿತಿ ತಂತ್ರಜ್ಞಾನ) ಉಜ್ವಲ್ ಕುಮಾರ್ ಗೋಷ್ ಹಾಗೂ ಬಿಬಿಎಂಪಿ ಉಪ ಆಯುಕ್ತರು (ಆಡಳಿತ) ಮಂಜುನಾಥ ಸ್ವಾಮಿ.ಬಿ.ಎಸ್ ರವರು ಉಪಸ್ಥಿತರಿದ್ದರು.