- ಅರ್ಧ ಗಂಟೆಯಾದರೂ ಯುವತಿಗೆ ಚಿಕಿತ್ಸೆಗೆ ನೀಡದ ವೈದ್ಯರು – ಆರೋಪ
- ಬೆಂಗಳೂರು ಮಹಾನಗರಿ ವೀಕ್ಷಣೆಗೆ ಆಗಮಿಸಿದ್ದ ಹೈದರಾಬಾದ್ ಕುಟುಂಬ
ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಕೆ.ಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ನೀರು ತುಂಬಿ ಹೈದರಾಬಾದ್ ಮೂಲದ ಇನ್ಫೋಸಿಸ್ ಉದ್ಯೋಗಿ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
23 ವರ್ಷದ ಯುವತಿ ಭಾನುರೇಖಾ ಮೃತ ದುರ್ದೈವಿ. ಯುವತಿಯ ಸಹೋದರ ಸಂದೀಪ್ ಎಂಬುವವರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಳೆ ಬರುವ ಬಗ್ಗೆ ಮುನ್ಸೂಚನೆ ಇದ್ದರು ಬಿಬಿಎಂಪಿ ಅಧಿಕಾರಿಗಳು ಅಂಡರ್ಪಾಸ್ನಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಯುವತಿಯ ಸಹೋದರ ದೂರಿನಲ್ಲಿ ವಿವರಿಸಿದ್ದಾರೆ.
ದೂರಿನ ಮೇರೆಗೆ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಅಸಹಜ ಸಾವು ಎಂದು ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೊಳಚೆ ನೀರು ಕುಡಿದು ಯುವತಿ ಸಾವು
ಭಾನುರೇಖಾ ಬೆಂಗಳೂರಿನ ಇನ್ಫೋಸಿಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರವಾಸಕ್ಕೆಂದು ತನ್ನ ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆತಂದಿದ್ದರು. ಕಬ್ಬನ್ ಪಾರ್ಕ್ ವೀಕ್ಷಣೆ ಮಾಡುವ ವೇಳೆ ಧಾರಾಕಾರ ಮಳೆ ಆರಂಭವಾದ ಕಾರಣ ಪ್ರಗತಿನಗರದಲ್ಲಿರುವ ತನ್ನ ಮನೆಗೆ ವಾಪಾಸಾಗುತ್ತಿದ್ದರು.
ಈ ವೇಳೆ, ಕೆಆರ್ ಸರ್ಕಲ್ ಬಳಿಯ ಅಂಡರ್ಪಾಸ್ನಲ್ಲಿ ನೀರು ತುಂಬಿರುವುದನ್ನು ಗಮನಿಸದ ಕಾರು ಚಾಲಕ ನೀರಿನಲ್ಲಿ ಕಾರು ಚಲಾಯಿಸಿದ್ದಾನೆ. ಅಂಡರ್ಪಾಸ್ನ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಕಾರು ಮುಳುಗಡೆಯಾಗ ತೊಡಗಿತು. ಕಾರನ್ನು ಹಿಂದಕ್ಕೆ ಸಾಗಿಸಲು ಯತ್ನಿಸಿದರು ಇದು ಸಾಧ್ಯವಾಗದೆ ಕಾರು ಮುಳುಗಡೆಯಾಗಿತ್ತು. ಇದೇ ಸಮಯದಲ್ಲಿ ಎರಡು ಆಟೋಗಳು ಕೂಡ ಕೆಳರಸ್ತೆಯಲ್ಲಿ ಮುಳುಗಡೆಯಾಗಿದ್ದವು.
ಈ ಸುದ್ದಿ ಓದಿದ್ದೀರಾ? ಎಚ್ಚರ | ಮಳೆ ಬಂದಾಗ ರಾಜಧಾನಿ ಬೆಂಗಳೂರಿನಲ್ಲಿ ಬಳಸದಿರಿ ಕೆಳಸೇತುವೆ!
ಕಾರು ಮುಳುಗಡೆಯಾಗುವುದನ್ನು ಅರಿತ ಸ್ಥಳಿಯರು ಎಚ್ಚೆತ್ತು ಅವರ ಸಹಾಯಕ್ಕೆ ಧಾವಿಸಿದರು. ಕೂಡಲೆ ರಕ್ಷಣಾ ಸಿಬ್ಬಂದಿ ಕೂಡ ಅವರ ರಕ್ಷಣೆಗೆ ಬಂದರು. ಆರು ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಯುವತಿ ಚರಂಡಿ ನೀರು ಕುಡಿದು ತೀವ್ರ ಅಸ್ವಸ್ಥವಾಗಿದ್ದರು.
ಹತ್ತಿರದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆ ಸಿಬ್ಬಂದಿ ಆರಂಭದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ, ಸುಮಾರು ಅರ್ಧಗಂಟೆಗಳ ಕಾಲ ಯುವತಿಯನ್ನು ಹೊರಗೆ ಇರಿಸಲಾಗಿತ್ತು. ಬಳಿಕ ಸ್ಥಳೀಯರು ಆಕ್ರೋಶಗೊಂಡ ನಂತರ ಯುವತಿಯನ್ನು ಆಸ್ಪತ್ರೆಯೊಳಗೆ ಸೇರಿಸಿಕೊಂಡು ಚಿಕಿತ್ಸೆ ನೀಡಲು ಆರಂಭಿಸಿದರು. ಈ ವೇಳೆಗಾಗಲೇ ಯುವತಿ ಸಾವನ್ನಪ್ಪಿದ್ದಳು.