ಸಿನಿಮಾ ಎನ್ನುವುದು ಎಷ್ಟೇ ವಾಣಿಜ್ಯ ವ್ಯವಹಾರವಾದರೂ, ಮೂಲತಃ ಅದೊಂದು ಕಲೆ. ಕಲೆಯನ್ನು ದ್ವೇಷಕ್ಕೆ, ರಾಜಕೀಯ ಉದ್ದೇಶಕ್ಕೆ ಬಳಸಿದರೆ ಅದು ಕಲೆಯಾಗಿ ಉಳಿಯುವುದಿಲ್ಲ. ಜೊತೆಗೆ ಅದು ಕಲೆಗೆ ಮಾಡಿದ ದ್ರೋಹ.
‘ದಿ ಕೇರಳ ಸ್ಟೋರಿ’ ಸಿನಿಮಾ ದೇಶದಾದ್ಯಂತ ಸದ್ದು ಮಾಡುತ್ತಿದೆ. ವಿಪುಲ್ ಅಮೃತ್ ಲಾಲ್ ಶಾ ನಿರ್ಮಾಣದ, ಸುದೀಪ್ತೋ ಸೇನ್ ನಿರ್ದೇಶನದ ಈ ಹಿಂದಿ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಕಾರಣವಾಗಿತ್ತು. ತಪ್ಪು ಅಂಕಿಅಂಶ, ತಪ್ಪು ಮಾಹಿತಿಯನ್ನು ಒಳಗೊಂಡ ಈ ಸಿನಿಮಾ, ಸಾಮಾಜಿಕ ಸಾಮರಸ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಅಪಸ್ವರ ಎದ್ದಿತು.
ಕೇರಳದ 32,000 ಯುವತಿಯರು ಕಾಣೆಯಾಗಿದ್ದು, ಅವರೆಲ್ಲ ಐಸಿಸ್ ಉಗ್ರವಾದಿ ಸಂಘಟನೆ ಸೇರಿದ್ದಾರೆ ಎಂದು ಚಿತ್ರದ ಟೀಸರ್ನಲ್ಲಿ ತೋರಿಸಲಾಗಿತ್ತು. ಸಾಕಷ್ಟು ಗದ್ದಲದ ನಂತರ ಆ ಟೀಸರ್ ಅನ್ನು ಬದಲಿಸಲಾಯಿತು. ಚಿತ್ರದಲ್ಲಿ ನಿರ್ದಿಷ್ಟ ಧರ್ಮದ ವಿರುದ್ಧ ಅಪಪ್ರಚಾರ ಮಾಡುವಂಥ ವಸ್ತು ಇದೆ ಮತ್ತು ಬಲವಂತದ ಮತಾಂತರವನ್ನು ವಿಜೃಂಭಿಸಿ ತೋರಿಸಲಾಗಿದೆ ಎನ್ನುವ ಆರೋಪಗಳು ವ್ಯಕ್ತವಾದವು. ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದೆಂದು ಕೇರಳ ಹೈಕೋರ್ಟ್ ಸೇರಿದಂತೆ ಹಲವು ಹೈಕೋರ್ಟ್ಗಳಲ್ಲಿ ದಾವೆಗಳನ್ನು ಹೂಡಲಾಯಿತು. ಅಂಥ ಅರ್ಜಿಗಳನ್ನು ತಿರಸ್ಕರಿಸಿದ ಹೈಕೋರ್ಟ್ಗಳು ಚಿತ್ರದ ಬಿಡುಗಡೆಗೆ ಅನುಮತಿ ನೀಡಿದ್ದವು.
ಆನಂತರ ಈ ಚಿತ್ರಕ್ಕೆ ಕೆಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಿದ್ದರೆ, ಕೆಲವು ರಾಜ್ಯಗಳು ಈ ಚಿತ್ರವನ್ನು ನಿಷೇಧಿಸಿವೆ. ತಮಿಳುನಾಡಿನಲ್ಲಿ ಈ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಚಿತ್ರವನ್ನು ನಿಷೇಧಿಸಲಾಗಿದೆ. ಇನ್ನು ಉತ್ತರ ಪ್ರದೇಶ ಸರ್ಕಾರವು ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದೆ. ವಿಶೇಷ ಅಂದರೆ, ವಿವಾದದಿಂದಾಗಿಯೇ ಈ ಚಿತ್ರ ಒಂದಿಷ್ಟು ಕಲೆಕ್ಷನ್ ಮಾಡುತ್ತಿದೆ ಎನ್ನುವ ವರದಿಗಳಿವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪತ್ರಿಕಾ ಸ್ವಾತಂತ್ರ್ಯ- ಎದೆ ಸೆಟೆಸಿ ಸೆಣಸುವುದೊಂದೇ ದಾರಿ
ಇನ್ನೊಂದು ಚಿತ್ರ ‘ಆದಿಪುರುಷ್’; ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್, ಕೃತಿ ಸನೋನ್ ಮುಂತಾದವರು ನಟಿಸಿದ್ದಾರೆ. ಜೂನ್ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ವಸ್ತು ರಾಮಾಯಣ. ಈ ಚಿತ್ರದ ಟೀಸರ್ನಲ್ಲಿ ರಾಮ ಮತ್ತು ಹನುಮಂತನ ಸಾಹಸಗಳನ್ನು ತೋರಿಸಲಾಗಿತ್ತು. ಆದರೆ, ಟೀಸರ್ನ ಕಳಪೆ ವಿಎಫ್ಎಕ್ಸ್ (ವಿಷುಯಲ್ ಎಫೆಕ್ಟ್ಸ್)ಗಾಗಿ ಆ ಟೀಸರ್ ಭಾರಿ ಟ್ರೋಲ್ಗೆ ಒಳಗಾಯಿತು. ಅದಕ್ಕಿಂತ ಅಗ್ಗದ ಕಾರ್ಟೂನ್ ಚಿತ್ರಗಳು ವಾಸಿ ಎನ್ನುವ ಟೀಕೆಗಳು ವ್ಯಕ್ತವಾದವು. ವಿಎಫ್ಎಕ್ಸ್ ಅನ್ನು ಚಿತ್ರದ ಹೈಲೈಟ್ ಎಂದು ಹೇಳಲು ಹೊರಟಿದ್ದ ಚಿತ್ರತಂಡ ಅವಮಾನಕ್ಕೊಳಗಾಗಿ, ಈ ಬಾರಿ ಎಚ್ಚರಿಕೆಯಿಂದ ಟ್ರೈಲರ್ ಬಿಡುಗಡೆ ಮಾಡಿದೆ. ವಿಎಫ್ಎಕ್ಸ್ಗೆ ಹೆಚ್ಚು ಮೊರೆ ಹೋಗದೇ ನೈಜ ದೃಶ್ಯಗಳನ್ನೇ ಹೆಚ್ಚಾಗಿ ಬಳಸಿ ಟ್ರೇಲರ್ ರೂಪಿಸಲಾಗಿದೆ.
ಇವೆರಡು ಸಿನಿಮಾಗಳು, ಅವುಗಳ ವಸ್ತು, ಅವು ನೆಚ್ಚಿಕೊಂಡ ಪ್ರಚಾರ ತಂತ್ರಗಳನ್ನು ಗಮನಿಸಿದಾಗ, ಇತ್ತೀಚೆಗೆ ಸಿನಿಮಾಗಳಲ್ಲಿ ಕಲೆಗಿಂತ ಇತರೆ ಅಂಶಗಳೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ ಎಂದು ಅನ್ನಿಸದೇ ಇರದು. ಯಾವುದೋ ಒಂದು ಧರ್ಮವನ್ನು, ಯಾವುದೋ ಒಂದು ಸಿದ್ಧಾಂತವನ್ನು, ಯಾವುದೋ ಒಬ್ಬ ವ್ಯಕ್ತಿಯನ್ನು ಮೆಚ್ಚಿಸಲು ಅಥವಾ ಹೀಗಳೆಯಲು ಸಿನಿಮಾಗಳನ್ನು ಮಾಡಲಾಗುತ್ತಿದೆ. ಇಲ್ಲವೇ ಕಥೆಯನ್ನು ಮೀರಿಸುವಂಥ, ಕಣ್ಣು ಕೋರೈಸುವ ವಿಎಫ್ಎಕ್ಸ್ನಿಂದ ಚಿತ್ರಗಳನ್ನು ರೂಪಿಸಲಾಗುತ್ತಿದೆ. ಇವೆಲ್ಲವುಗಳ ನಡುವೆ ಸಿನಿಮಾದ ಜೀವಾಳವಾದ ಕಥೆಯೇ ಕಾಣೆಯಾಗುತ್ತಿದೆ.
ಸಿನಿಮಾ ಎನ್ನುವುದು ಎಷ್ಟೇ ವಾಣಿಜ್ಯ ವ್ಯವಹಾರವಾದರೂ, ಮೂಲತಃ ಅದೊಂದು ಕಲೆ. ಕಲೆಯನ್ನು ದ್ವೇಷಕ್ಕೆ, ರಾಜಕೀಯ ಉದ್ದೇಶಕ್ಕೆ ಬಳಸಿದರೆ ಅದು ಕಲೆಯಾಗಿ ಉಳಿಯುವುದಿಲ್ಲ. ಜೊತೆಗೆ ಅದು ಕಲೆಗೆ ಮಾಡಿದ ದ್ರೋಹ. ಸಾಹಿತ್ಯ, ಸಿನಿಮಾ ಮುಂತಾದ ಕಲೆಗಳಿಗೆ ವಸ್ತುವಾಗಬೇಕಿರುವುದು ಬದುಕು ಮತ್ತು ಬದುಕಿನ ಕುರಿತ ಚಿಂತನೆ. ಇವನ್ನು ಒಂದು ನಿರ್ದಿಷ್ಟ ಉದ್ದೇಶಕ್ಕೆ ಬಳಸಿದೊಡನೆ ಕಲೆ ಸೊರಗತೊಡಗುತ್ತದೆ. ಅದರ ಪರಿಣಾಮ ಮುಕ್ಕಾಗುತ್ತದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಪ್ರಧಾನಿಯ ಪ್ರಲೋಭನೆ ಮತ್ತು ಸಾಮಾನ್ಯರ ಸಿಟ್ಟು
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕೂಡ ಇದೇ ಪಟ್ಟಿಗೆ ಸೇರಿದಂಥ ಪ್ರೊಪಗಾಂಡಾ ಸಿನಿಮಾ. ಅದಾಗಲಿ, ‘ದಿ ಕೇರಳ ಸ್ಟೋರಿ’ ಆಗಲಿ ಕೇವಲ ಸಿನಿಮಾಗಳಾಗಿ ನೋಡಿದಾಗ – ಅಂದರೆ ಕಥೆ, ನಟನೆ, ಸಿನಿಮಾದ ವ್ಯಾಕರಣದ ಬಳಕೆ ಇತ್ಯಾದಿ- ಕಳಪೆ ಚಿತ್ರಗಳು ಎನ್ನುವುದು ಬಹುತೇಕ ಸಿನಿಮಾ ವಿಮರ್ಶಕರ ಅಭಿಪ್ರಾಯ. ಕಳಪೆ ಚಿತ್ರಗಳನ್ನು ನಿರ್ಮಿಸುವುದು, ರಾಜಕೀಯ ಕಾರಣಗಳಿಗಾಗಿ ಮೆರೆಸುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದಲೂ. ಕಲೆಯ ಔನ್ನತ್ಯದ ದೃಷ್ಟಿಯಿಂದಲೂ ಅಪಾಯಕಾರಿ.
ಇಂಥ ಪ್ರವೃತ್ತಿಗಳಿಗೆ ತಮ್ಮ ತಾರತಮ್ಯ ಪ್ರಜ್ಞೆಯಿಂದ ಜನರೇ ಕಡಿವಾಣ ಹಾಕಬೇಕಿದೆ. ಯಾವುದೇ ಚಿತ್ರವನ್ನು, ಪುಸ್ತಕವನ್ನು ನಿಷೇಧ ಮಾಡುವುದಕ್ಕಿಂತಲೂ ಅದನ್ನು ಜನತಾ ನ್ಯಾಯಾಲಯದ ಮುಂದೆ ನಿರ್ಧಾರವಾಗಲು ಬಿಡುವುದೇ ಉತ್ತಮ ಮಾರ್ಗ.