- ಶಿಗ್ಗಾಂವಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ
- ಸಿದ್ದಾರೂಢ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತಮ್ಮ ನಾಮಪತ್ರ ಸಲ್ಲಿಸಿದರು.
ಶಿಗ್ಗಾಂವಿ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಸಿ ಎಂ ಬಸವರಾಜ ಬೊಮ್ಮಾಯಿಯವರಿಗೆ ಸಚಿವ ಸಿ ಸಿ ಪಾಟೀಲ್ ಸಂಸದ ಶಿವಕುಮಾರ್ ಉದಾಸಿ ಜೊತೆಯಾಗಿದ್ದರು.
ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಒಳ್ಳೆಯ ದಿನವಾಗಿರುವ ಕಾರಣ ನಾನು ನಾಮಪತ್ರ ಸಲ್ಲಿಸುವೆ, ಏಪ್ರಿಲ್ 19ರಂದು ಜನಸೇರಿಸಿ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸುವೆ ಎಂದರು.
ಇನ್ನು ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ಟಿಕೆಟ್ ಹಂಚಿಕೆ ಬಳಿಕೆ ಗೊಂದಲವಿರುವುದು ಸಹಜ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಜಗದೀಶ್ ಶೆಟ್ಟರ್ ಮನವೊಲಿಸುವ ಕಾರ್ಯವೂ ನಡೆಯುತ್ತಿದೆ ಎಂದರು.
ನಾನು ಹಾಗೂ ಶೆಟ್ಟರ್ ಇಬ್ಬರೂ ಸ್ನೇಹಿತರು. ಜಗದೀಶ್ ಶೆಟ್ಟರ್ ಅವರನ್ನ ಉಳಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ. ನಿನ್ನೆ ಧರ್ಮೇಂದ್ರ ಪ್ರಧಾನ್ ಜೊತೆ ಅವರು ಮಾತುಕತೆ ನಡೆಸಿದ್ದಾರೆ. ನಡ್ಡಾ ಅವರ ಜೊತೆ ನಾನೂ ಮಾತನಾಡಿದ್ದೇನೆ . ಜಗದೀಶ್ ಶೆಟ್ಟರ್ ಹಾಗೂ ನನ್ನದು ಪಕ್ಷಕ್ಕೆ ಬರುವುದಕ್ಕಿಂತಲೂ ಮುಂಚಿನ ಸಂಬಂಧ.
ಅವರಿಗೆ ಟಿಕೇಟ್ ತಪ್ಪಿಸುವಂತಹ ಕೆಲಸ ನಾನು ಮಾಡಿಲ್ಲ. ಬೇಕಿದ್ದರೆ ಅವರನ್ನೇ ಈ ವಿಚಾರದಲ್ಲಿ ಹೋಗಿ ಕೇಳಿ ಎಂದು ಬಸವರಾಜ ಬೊಮಾಯಿ ತಿಳಿಸಿದರು. ನಂತರ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ ಸಿಎಂ ಶೀಘ್ರವೇ ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? : ಕಲಬುರಗಿ | ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲು
ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಬೊಮ್ಮಾಯಿ ನಮ್ಮ ಬಗ್ಗೆ ಮಾತನಾಡುವ ಮೊದಲು ಅವರ ಪಕ್ಷದ ವಿಚಾರಗಳ ಬಗ್ಗೆ ಅವರು ಗಮನ ಹರಿಸಲಿ. ಸಮಸ್ಯೆ ಇರುವುದೇ ಅವರಲ್ಲಿ. ಹೀಗಿರುವಾಗ ನಮ್ಮ ಬಗ್ಗೆ ಚಿಂತಿಸುವ ಅವಶ್ಯಕತೆ ಅವರಿಗಿಲ್ಲ ಎಂದರು.
ನನ್ನ ಸ್ಪರ್ಧೆ ವಿಚಾರದಲ್ಲಿ ಹಲವರಲ್ಲಿ ಹಲವು ಅಭಿಪ್ರಾಯಗಳಿವೆ. ಈ ಹಿಂದೆಯೂ ನಾನು ಸ್ಪರ್ಧಿಸಿದ್ದೆ, ಗೆದ್ದಿದ್ದೇನೆ. ಹೀಗಾಗಿ ಈಗಿನ ಟೀಕೆಗಳಿಗೆ ಗೆದ್ದ ಬಳಿಕ ಉತ್ತರ ನೀಡುವೆ ಎಂದು ಬೊಮ್ಮಾಯಿ ತಿಳಿಸಿದರು.