ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ತಮ್ಮ ಕ್ಷೇತ್ರ ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ, ಬೃಹತ್ ರೋಡ್ ಶೋ ಕೂಡ ನಡೆಸುವ ಮೂಲಕ ಪ್ರಚಾರ ಆರಂಭಿಸಲಿದ್ದಾರೆ. ರೋಡ್ ಶೋ ಮತ್ತು ಪ್ರಚಾರದಲ್ಲಿ ಅವರೊಂದಿಗೆ ನಟ ಸುದೀಪ್ ಭಾಗಿಯಾಗಲಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಈ ಹಿಂದೆ ಶಿಗ್ಗಾವಿಯಲ್ಲಿ ಸಾಂಕೇತಿಕವಾಗಿ ಬೊಮ್ಮಾಯಿ ನಾಮಪತ್ರ ಸಲ್ಲಿಸಿದ್ದರು. ಇಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ, 10ಕ್ಕೂ ಹೆಚ್ಚು ಮಂದಿ ಸಚಿವರು ಮತ್ತು ನಟ ಸುದೀಪ್ ಸೇರಿದಂತೆ ಹಲವರು ಸಿನಿಮಾ ನಟ-ನಟಿಯರು ಭಾಗವಹಿಸಲಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ರೋಡ್ ಶೋನಲ್ಲಿ ಬೊಮ್ಮಾಯಿ ಅವರೊಂದಿಗೆ ಸುದೀಪ್ ಜೊತೆಗಿರಲಿದ್ದಾರೆ. 12.15 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯುವ ಬಹಿರಂಗ ಪ್ರಚಾರ ಸಭೆಯಲ್ಲಿಯೂ ಪಾಲ್ಗೊಳ್ಳಲಿದ್ದಾರೆ. 2 ಗಂಟೆಗೆ ಶಿಗ್ಗಾವಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಇತ್ತೀಚೆಗೆ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದ ನಟ ಸುದೀಪ್, ತಾವು ಕಷ್ಟದ ಸಮಯದಲ್ಲಿದ್ದಾಗ ಬೊಮ್ಮಾಯಿ ಅವರು ನನಗೆ ಸಹಾಯ ಮಾಡಿದ್ದರು. ಅವರನ್ನು ನಾನು ಬೊಮ್ಮಾಯಿ ಮಾಮಾ ಎಂದೇ ಕರೆಯುತ್ತೇನೆ. ನನ್ನ ಮಾಮಾನ ಪರವಾಗಿ ಶಿಗ್ಗಾವಿಯಲ್ಲಿ ಪ್ರಚಾರ ಮಾಡುತ್ತೇನೆ ಎಂದಿದ್ದರು. ಅದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬೊಮ್ಮಾಯಿ, ‘ಸುದೀಪ್ ಅವರು ಬಿಜೆಪಿ ಪರ ರಾಜ್ಯಾದ್ಯಂತ ಪ್ರಚಾರ ಮಾಡುತ್ತಾರೆ. ಅವರು ಪಕ್ಷಕ್ಕೆ ಬಂದಿರುವುದು ಮತ್ತಷ್ಟ ಬಲ ತಂದಿದೆ’ ಎಂದಿದ್ದರು. ಆ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಟ್ರೋಲ್ಗೆ ಒಳಗಾಗಿದ್ದರು.