- ದೇಶವಿರೋಧಿ ಚಟುವಟಿಕೆ ನಡೆಸುತ್ತಿದ್ದ ಪಿಎಫ್ಐಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ
- ಪಿಎಫ್ಐ-ಭಜರಂಗದಳವನ್ನು ಒಂದೇ ತಕ್ಕಡಿಯಕಲ್ಲಿ ಇಟ್ಟು ನೋಡುವ ಉದ್ದೇಶವೇನು?
‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆʼ ಹೆಸರಲ್ಲಿ ಮಂಗಳವಾರ ಕಾಂಗ್ರೆಸ್ ಬಿಡುಗಡೆ ಮಾಡಿರುವ ಚುನಾವಣೆ ಪ್ರಣಾಳಿಕೆ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿ, “ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕಾಂಗ್ರೆಸ್ಗೆ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ವಿನಾಶಕಾಲ ಬಂದಿದೆ” ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಿಎಫ್ಐ ಮತ್ತು ಭಜರಂಗದಳ ನಿಷೇಧಿಸುವುದಾಗಿ ಹೇಳಿದೆ. ಆದರೆ, ಈಗಾಗಲೇ ಭಯೋತ್ಪಾದಕ ಮತ್ತು ದೇಶವಿರೋಧಿ ಚಟುವಟಿಕೆ ನಡೆಸುತ್ತಿದ್ದ ಪಿಎಫ್ಐ ಅನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ” ಎಂದರು.
“ದೇಶ, ವಿದೇಶದಲ್ಲಿ ದೇಶಭಕ್ತಿಯನ್ನು ಮೂಡಿಸುವ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ. ಬಿಜೆಪಿ ಪಕ್ಷ ಆರ್ಎಸ್ಎಸ್ನ ಭಾಗವಾದರೆ, ಭಜರಂಗದಳ ಕೂಡ ಆರ್ಎಸ್ಎಸ್ ಯುವಕರ ಭಾಗವಾಗಿದೆ. ಪಿಎಫ್ಐ ಜೊತೆಗೆ ಭಜರಂಗದಳ ಹೋಲಿಸುವುದು ತಪ್ಪು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ರಾಜಕೀಯಕ್ಕಾಗಿ ಬಿಜೆಪಿ ಇದೆ. ಸಮಾಜ ಸೇವೆಗಾಗಿ ಹಿಂದೂ ಸೇವಾ ಪ್ರತಿಷ್ಠಾನ ಇದೆ. ಬಣವಾಸಿಗಳ ಜೊತೆ ಕೆಲಸ ಮಾಡುವುದಕ್ಕಾಗಿ ಬಣವಾಸಿ ಕಲ್ಯಾಣ ಆಶ್ರಮ ಇದೆ. ವಿದ್ಯಾರ್ಥಿಗಳ ಜೊತೆ ಕೆಲಸ ಮಾಡಲು ಎಬಿವಿಪಿ ಇದೆ. ಹಾಗೆಯೇ ಯುವಕರ ಮಧ್ಯೆ ಕೆಲಸ ಮಾಡಲು ಭಜರಂಗದಳ ಇದೆ. ಆದರೆ, ನೀವು (ಕಾಂಗ್ರೆಸ್) ನಿಮ್ಮ ಪ್ರಣಾಳಿಕೆಯಲ್ಲಿ ಪಿಎಫ್ಐ ಮತ್ತು ಭಜರಂಗದಳವನ್ನು ಒಂದೇ ತಕ್ಕಡಿಯಲ್ಲಿ ಇಟ್ಟಿದ್ದೀರಿ. ನಿಮ್ಮ ಉದ್ದೇಶ ಏನಿದೆ” ಎಂದು ಪ್ರಶ್ನಿಸಿದರು.
“ಪಿಎಫ್ಐ ಒಂದು ದೇಶದ್ರೋಹಿ ಸಂಘಟನೆ, ಹಿಂದು ಯುವಕರ ಹತ್ಯೆಗೆ ಕಾರಣವಾದ ಸಂಘಟನೆ, ಬಾಂಬ್ ಬ್ಲಾಸ್ಟ್ ಮಾಡುವ ಸಂಘಟನೆ, ಹಿಂದು ಯುವತಿಯರನ್ನು ಲವ್ ಜಿಹಾದ್ ಹೆಸರಲ್ಲಿ ಮತ ಪರಿವರ್ತನೆ ಮಾಡುತ್ತಿರುವ ಸಂಘಟನೆ, ಇಂತಹ ಸಂಘಟನೆ ಜೊತೆ ದೇಶ ಭಕ್ತಿಗಾಗಿ ಹೋರಾಟ ಮಾಡುತ್ತಿರುವ ಭಜರಂಗದಳ ಹೋಲಿಕೆ ಮಾಡಿ ನಿಷೇಧದ ಬಗ್ಗೆ ಮಾತನಾಡಿದ್ದೀರಿ. ಇದು ನಿಮ್ಮ ವಿನಾಶಕ್ಕೆ ನೀವೇ ಮಾಡಿಕೊಂಡ ತಯಾರಿ. ತಾಕತ್ತು ಇದ್ದರೆ ಭಜರಂಗದಳ ನಿಷೇಧಿಸಿ” ಎಂದು ಸವಾಲು ಹಾಕಿದರು.