ಕರ್ನಾಟಕ ಪತ್ರಕರ್ತೆಯರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತೆ ಆರ್ ಪೂರ್ಣಿಮಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರೆಸ್ಕ್ಲಬ್ನಲ್ಲಿ ಗುರುವಾರ ನಡೆದ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷೆಯಾಗಿ ಎನ್.ವಿ. ಸೌಮ್ಯರಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಲತಿ ಭಟ್, ಜಂಟಿ ಕಾರ್ಯದರ್ಶಿಯಾಗಿ ಡಿ. ಯಶೋದಾ, ಖಜಾಂಚಿಯಾಗಿ ವಾಣಿಶ್ರೀ ಜೆ.ಎನ್., ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಪಿ. ಸುಶೀಲಾ, ಕೆ.ಎಚ್.ಸಾವಿತ್ರಿ, ಸಿ.ಜಿ. ಮಂಜುಳಾ, ಕಾನ್ಸೆಪ್ಟಾ ಫರ್ನಾಂಡೀಸ್, ಶಮಂತ ಡಿ.ಎಸ್., ಎ.ಬಿ. ರುದ್ರಮ್ಮ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ
ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರೂ ಉಮೇದುವಾರಿಕೆ ಸಲ್ಲಿಸಿರಲಿಲ್ಲ. ಇಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ಪತ್ರಕರ್ತೆ ಆರ್ ಪೂರ್ಣಿಮಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಪೂರ್ಣಿಮಾ ಅವರು ಉದಯವಾಣಿ ದಿನಪತ್ರಿಕೆಯ ಬೆಂಗಳೂರು ಆವೃತ್ತಿಯ ಸಂಪಾದಕರಾಗುವ ಮೂಲಕ ದಕ್ಷಿಣ ಭಾರತದ ಮೊದಲ ʼಸಂಪಾದಕಿʼ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಕ್ಕೂ ಮೊದಲು ಬಹಳ ವರ್ಷಗಳ ಕಾಲ ಪ್ರಜಾವಾಣಿ ದಿನಪತ್ರಿಕೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಉದಯವಾಣಿಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಮಯೂರ ಮಾಸಿಕದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ತಮ್ಮದೇ ಆದ ಪ್ರಕಾಶನ ಸಂಸ್ಥೆಯ ಮೂಲಕ ಹಲವು ಮೌಲಿಕ ಕೃತಿಗಳನ್ನು ಹೊರತರುವ ಮೂಲಕ ಯಶಸ್ವಿ ಪ್ರಕಾಶಕಿಯೂ ಆಗಿದ್ದಾರೆ. ಅಂಕಣಕಾರ್ತಿಯಾಗಿ, ಅನುವಾದಕಿಯಾಗಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡೂ ಕ್ಷೇತ್ರಗಳಲ್ಲಿ ಹೆಸರಾಗಿದ್ದಾರೆ.





