ವೃತ್ತಿಪರ ಕೋರ್ಸ್ಗಳನ್ನು ವ್ಯಾಸಂಗ ಮಾಡಿ ಕ್ಯಾಂಪಸ್ ಮೂಲಕ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಪಡೆಯುವುದು ಈಗ ಸರ್ವೇ ಸಾಮಾನ್ಯ. ಆದರೆ, ಕರ್ನಾಟಕ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಕಾಲೇಜಿನಲ್ಲಿ ಕಲಿತರೆ ಉದ್ಯೋಗ ಸಿಗುವುದು ಪಕ್ಕಾ. ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನರಿಗೆ ಕೈಮಗ್ಗ ಮತ್ತು ಜವಳಿ ಕ್ಷೇತ್ರದಲ್ಲಿ ಉತ್ತಮ ತಾಂತ್ರಿಕ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಮುಖಿ ಹಾಗೂ ಸ್ವಾವಲಂಬಿ ವ್ಯಕ್ತಿಗಳಾಗಿ ರೂಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆ ಇದಾಗಿದೆ.
ಗದಗ-ಬೆಟಗೇರಿ ಪಾರಂಪರಿಕ ಕೈಮಗ್ಗ ಹಾಗೂ ಜವಳಿ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಜಿಲ್ಲೆಯಾಗಿದೆ. ಅವಳಿ ನಗರಕ್ಕೆ ಸಮೀಪ ಇರುವ ನರಸಾಪೂರ ಗ್ರಾಮದಲ್ಲಿ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ(ಜವಳಿ ಕಾಲೇಜು) ಇಂದು ರಾಜ್ಯದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಿದ್ದು, ಕಾಲೇಜು ಯುವಕ, ಯುವತಿಯರ ಗಮನ ಸೆಳೆದಿದೆ. ಈ ಸಂಸ್ಥೆ ಭಾರತ ಸರ್ಕಾರದ ಜವಳಿ ಮಂತ್ರಾಲಯದ ಅಭಿವೃದ್ಧಿಯಿಂದ ಮಾನ್ಯತೆ ಪಡೆದಿದೆ.
ರಾಜ್ಯದಲ್ಲಿಯೇ ಏಕೈಕ ಸಂಸ್ಥೆ: ದೇಶಾದ್ಯಂತ ಒಟ್ಟು 11 ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸೇಲಂ, ವಾರಣಾಸಿ, ಜೋಧಪುರ, ಗೌಹಾತಿ, ಕಣ್ಣೂರ ಸೇರಿದಂತೆ ಹಲವು ರಾಜ್ಯಗಳಲ್ಲಿ ಇವುಗಳಿವೆ. ಈ ಪೈಕಿ ಗದಗಿನ ಕರ್ನಾಟಕ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಸಂಸ್ಥೆ ಏಕೈಕ ಸಂಸ್ಥೆಯಾಗಿದೆ. ಕರ್ನಾಟಕ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಸಂಸ್ಥೆ ರಾಷ್ಟ್ರಮಟ್ಟದ ಡಿಪ್ಲೋಮಾ ಶಿಕ್ಷಣ ಒದಗಿಸುವ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಇದಾಗಿದೆ.
30 ರ್ಷಗಳಿಂದ ಸೇವೆ: ಕರ್ನಾಟಕ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಸಂಸ್ಥೆಯು ನರಸಾಪುರ ಗ್ರಾಮದಲ್ಲಿ 1994ರಲ್ಲಿ ಸ್ಥಾಪನೆಯಾಗಿದ್ದು, ಮೂವತ್ತು ವರ್ಷಗಳಿಂದ ನಿರಂತರ ಜವಳಿ ಉದ್ಯಮ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಈ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳಿಗೆ ದಾರಿ ತೆರೆದಿಡುವ ತರಬೇತಿಯೊಂದಿಗೆ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದ್ದು, ಕೈಮಗ್ಗ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ಯುವಜನರಿಗೆ ಭವಿಷ್ಯದ ಭರವಸೆಯ ದಾರಿಯಾಗಿದ್ದು, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಒತ್ತು ನೀಡಲಾಗುತ್ತಿದೆ.

ಮೂರು ವರ್ಷದ ಡಿಪ್ಲೋಮಾ ಕೋರ್ಸ್: ಈ ಸಂಸ್ಥೆಯು ಮೂರು ವರ್ಷದ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸನ್ನು ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ತಾಂತ್ರಿಕ ಜ್ಞಾನ ಮತ್ತು ಕೈಚಳಕ ಎರಡನ್ನೂ ಒಟ್ಟಿಗೆ ಬೆಳೆಸುವ ಮಹತ್ವದ ವೇದಿಕೆಯನ್ನು ಒದಗಿಸುತ್ತಿದೆ. ಡೈಯಿಂಗ್ ಮತ್ತು ಪ್ರಿಂಟಿಂಗ್, ಟೆಸ್ಟಿಂಗ್, ಕೈಮಗ್ಗ ಹಾಗೂ ವಿದ್ಯುತ್ ಮಗ್ಗ, ಜಕಾರ್ಡ್ ಮತ್ತು ಕಂಪ್ಯೂಟರ್ ಆಧಾರಿತ ಟೆಕ್ಸ್ಟ್ಟೈಲ್ ಡಿಸೈನಿಂಗ್(CATD) ಲ್ಯಾಬ್ಗಳು ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುತ್ತಿವೆ.
ಏನೆಲ್ಲ ಸೌಲಭ್ಯಗಳಿವೆ: ನರಸಾಪೂರ ಗ್ರಾಮದಲ್ಲಿ 8.3 ಎಕರೆ ವ್ಯಾಪ್ತಿಯ ಸ್ವಂತ ಆವರಣ ಹೊಂದಿದೆ. ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ತರಗತಿಗಳಲ್ಲಿ ಸ್ಮಾರ್ಟ್ ಬೋರ್ಡ್ಗಳ ಮೂಲಕ ತರಗತಿ ಬೋಧನೆ ನಡೆಯುತ್ತಿದ್ದು, ಇ-ಗ್ರಂಥಾಲಯ ಹಾಗೂ ಸುಸಜ್ಜಿತ ಗ್ರಂಥಾಲಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮತ್ತಷ್ಟು ಬಲ ನೀಡುತ್ತಿದೆ. ವಿದ್ಯಾರ್ಥಿಗಳ ವಸತಿ ವ್ಯವಸ್ಥೆಯಲ್ಲಿಯೂ ಸಂಸ್ಥೆ ವಿಶೇಷ ಗಮನ ಹರಿಸಿದ್ದು, ಪುರುಷ ವಿದ್ಯಾರ್ಥಿಗಳಿಗೆ ವಸತಿ ನಿಲಯದ ಸೌಲಭ್ಯ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರು ಹಾಗೂ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಗೆ ಸೋಲಾರ್ ವ್ಯವಸ್ಥೆ ಅಳವಡಿಸಿರುವುದು ಗಮನಾರ್ಹವಾಗಿದೆ.

ಪ್ರವೇಶ ಹೇಗೆ: ಪ್ರಥಮ ವರ್ಷದ ಪ್ರವೇಶಕ್ಕಾಗಿ ಎಸ್ಎಸ್ಎಲ್ಸಿ ಉತ್ತೀರ್ಣರಾಗಿದ್ದು, ಇಂಗ್ಲಿಷ್ ಕಡ್ಡಾಯ ವಿಷಯವಾಗಿರಬೇಕು. ಪಿಯುಸಿ ವಿಜ್ಞಾನ ವಿಭಾಗ, ಐಟಿಐ ಅಥವಾ ಜವಳಿ ಸಂಬಂಧಿತ ವೃತ್ತಿಪರ ಕೋರ್ಸ್ ಉತ್ತೀರ್ಣರಾದವರಿಗೆ ಲ್ಯಾಟರಲ್ ಎಂಟ್ರಿ ಮೂಲಕ ಮೂರನೇ ಸೆಮಿಸ್ಟರ್ಗೆ ಪ್ರವೇಶ ಪಡೆಯಲು ಅವಕಾಶವಿದೆ. ಸಾಮಾನ್ಯ ವರ್ಗದವರಿಗೆ 15ರಿಂದ 25 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ 15ರಿಂದ 27 ವರ್ಷ ವಯೋಮಿತಿ ನಿಗದಿಯಾಗಿದೆ.
ಶಿಷ್ಯವೇತನ ಸೌಲಭ್ಯ: ನರಸಾಪುರ ಗ್ರಾಮದ ಕರ್ನಾಟಕ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರವೇಶ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತಿ ತಿಂಗಳು ₹2,500 ಶಿಷ್ಯವೇತನ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ವಿಶೇಷ.
ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ ಸಂಸ್ಥೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕಲಿತು ಉದ್ಯೋಗ ಪಡೆದಿದ್ದಾರೆ. ಈ ಸಂಸ್ಥೆಯಲ್ಲಿ 2008ರಿಂದ ಕಲಿತ ವಿದ್ಯಾರ್ಥಿಗಳಲ್ಲಿ 23 ಅಭ್ಯರ್ಥಿಗಳು ರಾಜ್ಯದ ವಿವಿಧ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ ಪ್ರಾಚಾರ್ಯರು ಸುಮಲತಾ ಎಸ್ ಮಾತನಾಡಿ, “ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ ಇದು ಗ್ರಾಮೀಣ ಹಾಗೂ ನಗರ ಭಾಗದ ಯುವಜನರಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಪಾರಂಪರಿಕ ಕೈಮಗ್ಗ ಕಲೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಸಂಯೋಜಿಸಿ ವಿದ್ಯಾರ್ಥಿಗಳನ್ನು ಉದ್ಯೋಗಮುಖಿ ಹಾಗೂ ಸ್ವಾವಲಂಬಿ ವ್ಯಕ್ತಿಗಳಾಗಿ ರೂಪಿಸುವುದು ನಮ್ಮ ಪ್ರಮುಖ ಧ್ಯೇಯವಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಬೀದರ್ | ಮೈಸುಡುವ ಕೆಂಡದಂತಹ ಬಿಸಿಲಿಗೆ ತತ್ತರಿಸಿದ ಜನ : ಪಾರಾಗುವುದು ಹೇಗೆ?
“ಸಂಸ್ಥೆಯಲ್ಲಿ ಲಭ್ಯವಿರುವ ಆಧುನಿಕ ಪ್ರಯೋಗಾಲಯಗಳು, ಅನುಭವೀ ಬೋಧಕರು ಹಾಗೂ ಶಿಷ್ಯವೇತನ ಸೌಲಭ್ಯಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ನೆರವಾಗುತ್ತಿವೆ. ಕೈಮಗ್ಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿ, ನರಸಾಪೂರ, ಗದಗ-ಬೆಟಗೇರಿ ಸಂಪರ್ಕಿಸಬಹುದಾಗಿದೆ. ಮೊಬೈಲ್ ಸಂಖ್ಯೆ 9916143619 ಹಾಗೂ ದೂರವಾಣಿ 08372-259664 ಮೂಲಕ ಸಂಪರ್ಕಿಸಬಹುದು. ಇ-ಮೇಲ್ [email protected] ಮತ್ತು khtigadag.ac.in ವೆಬ್ಸೈಟ್ ಮೂಲಕವೂ ವಿವರಗಳನ್ನು ಪಡೆಯಬಹುದಾಗಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



