- ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲೂಕಿನಲ್ಲಿ ಘಟನೆ
- ಆರೋಪಿ ತಂದೆಯನ್ನು ಬಂಧಿಸಿರುವ ಪೊಲೀಸರು
ಕೋಳಿ ಸಾಂಬರ್ ವಿಚಾರಕ್ಕೆ ಜಗಳ ನಡೆದು ತಂದೆಯೇ ಮಗನನ್ನು ಹೊಡೆದು ಹತ್ಯೆಗೈದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ.
ಶಿವರಾಮ (32) ಮೃತ ವ್ಯಕ್ತಿ. ಆತನ ತಂದೆ ಶೀನ ಹತ್ಯೆ ಮಾಡಿದ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮನೆಯಲ್ಲಿ ಮಾಡಿದ್ದ ಕೋಳಿ ಸಾಂಬರನ್ನು ತಂದೆ ಶೀನ ತಿಂದು ಮುಗಿಸಿದ್ದ. ಶಿವರಾಮ ಮನೆಗೆ ಬರುವ ಹೊತ್ತಿಗೆ ಕೋಳಿ ಸಾಂಬರ್ ಖಾಲಿ ಆಗಿತ್ತು. ತನಗೆ ಸ್ವಲ್ಪವೂ ಉಳಿಸದೆ ತಿಂದು ಮುಗಿಸಲಾಗಿದೆ ಎಂದು ತಂದೆ-ಮಗನ ನಡುವೆ ಜಗಳ ಶುರುವಾಯಿತು. ವಾಗ್ವಾದ ಮುಂದುವರಿದು ಇನ್ನಷ್ಟು ಕೋಪಗೊಂಡ ಶೀನ ದೊಣ್ಣೆಯಿಂದ ಶಿವರಾಮನ ಮೇಲೆ ಹಲ್ಲೆ ಮಾಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ದಾಸ್ತಾನು ಆಗಿದ್ದ 18 ರಾಶಿ ಅದಿರಿಗೆ ಮುಕ್ತಿ
ಹೊಡೆದಾಟದಲ್ಲಿ ಗಂಭೀರ ಪೆಟ್ಟು ತಿಂದು ನೆಲಕ್ಕುರುಳಿದ ಶಿವರಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆ ಮಂಗಳವಾರ ನಡೆದಿದ್ದು, ಬುಧವಾರ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತ ಶಿವರಾಮಗೆ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.