- ರೌಡಿಶೀಟರ್ಗಳಿಗೆ ಟಿಕೆಟ್ ನೀಡಿ, ಪ್ರಜಾಪ್ರಭುತ್ವದ ಕಗ್ಗೊಲೆಗೆ ಹಾದಿ ಮಾಡಿದೆ
- ಬಹುಮತ ಪಡೆಯದಿದ್ದರೂ ಅನ್ಯ ಮಾರ್ಗಗಳಿಂದ ಅಧಿಕಾರ ಕಬಳಿಸಲಾಗಿದೆ
ಸರ್ವಜನರ ಶಾಂತಿಯ ತೋಟವಾದ ಕರ್ನಾಟಕವನ್ನು ‘ಯೋಗಿ’ ಸರ್ಕಾರದ ಮಾದರಿಯ ಬುಲ್ಡೋಜರ್ – ಎನ್ಕೌಂಟರ್ ಆಳ್ವಿಕೆಯ ಇನ್ನೊಂದು ಪ್ರಯೋಗಾಲಯವನ್ನಾಗಿ ಮಾಡಲು ಹೊರಟಂತಿದೆ ಎಂದು ಸಿರಿಮನೆ ನಾಗರಾಜ್ ಮತ್ತು ತಾರಾ ರಾವ್ ಆರೋಪಿಸಿದರು.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಎದ್ದೇಳು ಕರ್ನಾಟಕ ನಾಗರಿಕ ಅಭಿಯಾನ ಕುರಿತು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳ್ಳರಿಗೆ, ರೌಡಿಶೀಟರ್ಗಳಿಗೆ ಟಿಕೆಟ್ ನೀಡಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಗೆ ಹಾದಿ ಮಾಡುತ್ತಿದೆ ಎಂದು ದೂರಿದರು.
ಕಲಬುರಗಿಯು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಬುದ್ಧರ ನಾಡು, ಸೂಫಿ ಸಂತರ, ಶರಣರ ಬೀಡು. ಸೌಹಾರ್ದ ಪರಂಪರೆಯ ಮಾದರಿ ಜಿಲ್ಲೆ. ಇಂತಹ ನಾಡಿನಲ್ಲಿ ವಿಭಜಕ, ಕೋಮು ಆಧರಿತ ಮತ್ತು ದ್ವೇಷ ರಾಜಕೀಯದಿಂದ ಪ್ರೇರಿತ ಶಕ್ತಿಗಳು ಅನ್ಯ ಮಾರ್ಗದ ಮೂಲಕ ಶಾಂತಿ ಮತ್ತು ಬಹುತ್ವದ ಈ ತೋಟವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿವೆ ಎಂದರು.
ಬಹುಮತವನ್ನು ಪಡೆಯದಿದ್ದರೂ ಈ ಶಕ್ತಿಗಳು ಹಣ ಮತ್ತು ಅತ್ಯಂತ ಹೇಯವಾದ ವಿಧಾನಗಳ ಮೂಲಕ ಅಧಿಕಾರ ಕಬಳಿಸುವುದನ್ನು ನೋಡುತ್ತಿದ್ದೇವೆ. ಈ ಶಕ್ತಿಗಳನ್ನು ಅಧಿಕಾರದಿಂದ ದೂರವಿಡದಿದ್ದಲ್ಲಿ ರಾಜ್ಯದಲ್ಲಿ ಶಾಂತಿ ಸೌಹಾರ್ದತೆಗಳಾಗಲಿ, ಜನಸಾಮಾನ್ಯರ ಅಭಿವೃದ್ಧಿಯಾಗಲಿ ಕನಸಿನಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಿಜೆಪಿ ಸೋಲಿಸಲು ಎದ್ದೇಳು ಕರ್ನಾಟಕ ಅಭಿಯಾನ: ಮಲ್ಲಿಗೆ ಸಿರಿಮನೆ
ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು, ಒಳ ಮೀಸಲಾತಿಯ ಹೆಸರಿನ ಮಹಾ ಮೋಸ ಮತ್ತು ದ್ರೋಹ. ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ಮಿತಿ ಮೀರಿರುವ ಹಿಂಸೆ, ನರೇಗಾ ಉದ್ಯೋಗ ಕಡಿತ, ಎಲ್ಲ ಜೀವನಾವಶ್ಯಕ ವಸ್ತುಗಳ ಭಯಂಕರ ಬೆಲೆ ಏರಿಕೆ ಇಂಥವೇ ಈ ಸರ್ಕಾರದ ಘನಂದಾರಿ ಸಾಧನೆಗಳಾಗಿವೆ ಎಂದು ಟೀಕಿಸಿದರು.
ಮಹಾ ಸುಳ್ಳಿನ ಮೇಲೆ ನಿಂತಿರುವ 40% ಕಮಿಶನ್ ಸರ್ಕಾರದ 100 % ನರಕದಿಂದ ನೊಂದಿರುವ ಜನರು ಈ ಸಲ ಕೋಮುವಾದಿ, ಸಂವಿಧಾನ ವಿರೋಧಿ, ಜನವಿರೋಧಿ, ಮಹಿಳಾ – ದಲಿತ, ಅಲ್ಪಸಂಖ್ಯಾತರ ವಿರೋಧಿ, ಸರ್ಕಾರವನ್ನು ಸೋಲಿಸಿ, ಜನರ ಕೇಳಿಕೆಗಳಿಗೆ ದನಿಯಾಗುವ, ಸಂವಿಧಾನವನ್ನೂ ವಚನ ತತ್ವವನ್ನೂ ಗೌರವಿಸಿ ಅನುಸರಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಿದ್ಧರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾರಾ ರಾವ್, ಸಿರಿಮನೆ ನಾಗರಾಜ್, ಪ್ರಬುದ್ಧ ಹುಬಳಿ, ಅಶ್ವಿನಿ ಮದನಕರ, ಸಂದ್ಯಾರಾಜ್ ಸ್ಯಾಮ್ಯುಯೆಲ್, ರಾಜೇಂದ್ರ ರಾಜವಾಳ್, ಬಿ ಎಂ ರಾವ್, ಅಬ್ದುಲ್ ಖಾದರ್ ಹಾಜರಿದ್ದರು.