- ಹಿಂದಿನ ಎಲ್ಲ ಸರ್ಕಾರಗಳಿಗಿಂತ ಮಿತಿ ಮೀರಿದ ಭ್ರಷ್ಟಾಚಾರ
- ಸ್ವಜನ ಪಕ್ಷಪಾತ, ಕೋಮುವಾದ, ಬೆಲೆ ಏರಿಕೆ, ಜನ ವಿರೋಧಿ ಆಡಳಿತ
ಭ್ರಷ್ಟಾಚಾರದಲ್ಲಿ ಮುಳುಗಿರುವ ಜನವಿರೋಧಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ದೂರ ಇರಿಸಲು ಸಮಾನ ಮನಸ್ಕ ಸಂಘಟನೆಗಳಿಂದ ‘ಎದ್ದೇಳು ಕರ್ನಾಟಕ’ ಅಭಿಯಾನ ನಡೆಸಲಾಗುತ್ತಿದೆ. ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಭಿಯಾನದ ಸಹ ಸಂಚಾಲಕಿ ಮಲ್ಲಿಗೆ ಸಿರಿಮನೆ ತಿಳಿಸಿದರು.
ರಾಯಚೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಆಡಳಿತ ನಡೆಸಿದ ಈ ಹಿಂದಿನ ಎಲ್ಲ ಸರ್ಕಾರಗಳಿಗಿಂತ ಮಿತಿ ಮೀರಿದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೋಮುವಾದ, ಬೆಲೆ ಏರಿಕೆ ಹಾಗೂ ಜನ ವಿರೋಧಿ ಆಡಳಿತ ನಡೆಸಿದ ಬಿಜೆಪಿಯನ್ನು ಈ ಬಾರಿ ಅಧಿಕಾರದಿಂದ ದೂರ ಇರಿಸಬೇಕು ಎಂದು ದಲಿತ, ಪ್ರಗತಿಪರ, ರೈತಪರ ಹಾಗೂ ಸಮಾನ ಮನಸ್ಕ 75 ಸಂಘಟನೆಗಳು ಒಗ್ಗೂಡಿ ‘ಎದ್ದೇಳು ಕರ್ನಾಟಕ’ ಎಂದು ಅಭಿಯಾನ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.
“ರಾಜ್ಯದ ಹಲವು ಕ್ಷೇತ್ರಗಳಲ್ಲಿ ಮತದಾರರ ಅಭಿಪ್ರಾಯ ಸಂಗ್ರಹಿಸಲಾಗಿದೆ. ತಳಮಟ್ಟದಿಂದ ಅಧ್ಯಯನ ನಡೆಸಿದಾಗ ನಾಗರಿಕರು ಅನೇಕ ಸಮಸ್ಯೆ ಹೇಳಿಕೊಂಡಿದ್ದಾರೆ. ನ್ಯಾಯಸಮ್ಮತ ಚುನಾವಣೆ ಪ್ರಕ್ರಿಯೆ ನಡೆಯಬೇಕು. ಶೇ.100 ರಷ್ಟು ಮತದಾನ ನಡೆಯಬೇಕು. ಮತದಾನದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆ ನಿವಾರಣೆ ಮಾಡುವುದು ಹಾಗೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವುದು ಅಭಿಯಾನದ ಉದ್ದೇಶವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಸಮಗ್ರ ಮಾಹಿತಿಯ ಆ್ಯಪ್, ಚುನಾವಣಾ ಜಾಗೃತಿ ಗೀತೆ ಬಿಡುಗಡೆ
“ರಾಜ್ಯದಲ್ಲಿ ಎದ್ದೇಳು ಕರ್ನಾಟಕದ ಪದಾಧಿಕಾರಿಗಳು ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್, ಬಿಜೆಪಿ – ಜೆಡಿಎಸ್ ಅಥವಾ ಬಿಜೆಪಿ ಹಾಗೂ ಇತರೆ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಇರುವ ಕಡೆ ಬಿಜೆಪಿಯೇತರ ಪಕ್ಷಗಳಿಗೆ ಬೆಂಬಲ ನೀಡಿ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸಲು ಶ್ರಮಿಸಲಾಗುತ್ತಿದೆ” ಎಂದು ತಿಳಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕರಿಯಪ್ಪ ಗುಡಿಮನಿ, ಮಾರೆಪ್ಪ ಹರವಿ, ಖಾಜಾ ಅಸ್ಲಾಂ ಅಹ್ಮದ್, ಅಂಜಿನಯ್ಯ ಕುರುಬದೊಡ್ಡಿ, ಅಸಿಮುದ್ದೀನ್ ಇದ್ದರು.