ಕೇವಲ ಹತ್ತೂವರೆ ತಿಂಗಳಿನಲ್ಲಿ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ಕಾಂಗ್ರೆಸ್ ಇಡೀ ದೇಶದಲ್ಲಿ ಸರ್ವನಾಶವಾಗುತ್ತದೆ. ಕಳೆದೆರಡು ವರ್ಷದಿಂದ ಕಾಂಗ್ರೆಸ್ ಏನು ಮಾಡುತ್ತಿದೆಯೆಂದು ನಿಮಗೆಲ್ಲಾ ಗೊತ್ತಿದೆ ಎಂದು ಎಚ್.ಡಿ ರೇವಣ್ಣ ಕಿಡಿಕಾರಿದರು.
ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದ ಬಿದರೂರು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಎ ಮಂಜು ಪರವಾಗಿ ಮತಯಾಚಿಸಿ, ಅವರು ಮಾತನಾಡಿದರು. “ಅರಸೀಕೆರೆ ಹಾಗೂ ಅರಕಲಗೂಡು ಕ್ಷೇತ್ರದ ಶಾಸಕರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಬೇಕೆಂದು ಕೈ ನಾಯಕರು ಹೋರಾಟ ಮಾಡಿದರು. ಒಬ್ಬರಿಗೆ ಟಿಕೆಟ್ ನೀಡಿ ಇನ್ನೊಬ್ಬರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ. ಬಿಜೆಪಿಯವರು 40 ಪರ್ಸೆಂಟ್, 20 ಪರ್ಸೆಂಟ್ ಎನ್ನುತ್ತ ಅವರುಗಳೇ ತಾತ ಮುತ್ತಾತಂದಿರು ಕೂತು ತಿನ್ನುವಷ್ಟು ಹಣ ಮಾಡಿಕೊಂಡಿದ್ದಾರೆ. ತುಮಕೂರಿನಲ್ಲಿ ಕಾಂಗ್ರೆಸ್ನ ಎಲ್ಲ ಮುಖಂಡರೂ ಸೇರಿ ದೇವೇಗೌಡರನ್ನು ಸೋಲಿಸಿದರು” ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
“ತಮ್ಮ 90ನೇ ವಯಸ್ಸಿನಲ್ಲಿಯೂ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ ಎಂದರೆ ದೇವೇಗೌಡರಿಗೆ ಶಿವನ ಶಕ್ತಿಯಿದೆ. ಬಿದರೂರಿನ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಬಸವೇಶ್ವರ ಸನ್ನಿಧಿಯಲ್ಲಿ ಇಂದು ಕೇಳಿಕೊಳ್ಳುತ್ತಿದ್ದೇನೆ ಎ ಮಂಜು ಅವರಿಗೆ ಮತ ನೀಡಿ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಬೇಕು. ದೇವೇಗೌಡರ ಜೊತೆ ನಾವೆಲ್ಲರೂ ನಿಲ್ಲಬೇಕು” ಎಂದರು.
“ದೇವೇಗೌಡರು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಬೇಕೆಂದರೆ ಕುಂಚಿಟಿಗ ಸಮಾಜದ ಪಾತ್ರ ಬಹಳಷ್ಟಿದೆ. ಈ ಗ್ರಾಮದ ಜನತೆಗೆ ಯಾವುದೇ ಕೆಲಸ ಆಗಬೇಕು ಎಂದರೂ ಅದನ್ನು ಖಂಡಿತಾ ನೆರವೇರಿಸಿಕೊಡುವೆ” ಎಂದು ಆಶ್ವಾಸನೆ ನೀಡಿದರು.
ಜೆಡಿಎಸ್ ಅಭ್ಯರ್ಥಿ ಎ.ಮಂಜು ಮಾತನಾಡಿ, “ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಸಾಕಷ್ಟು ವರ್ಷಗಳ ಕಾಲ ಆಡಳಿತ ಮಾಡಿದರೂ ಜನಪರ ಆಡಳಿತ ನಡೆಸಿಲ್ಲ. ಜೆಡಿಎಸ್ ಈ ಬಾರಿ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಹಾಗಾಗಿ ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಬಿಜೆಪಿ-ಜೆಡಿಎಸ್ ಮೈತ್ರಿಯ ಸುಳಿವುಕೊಟ್ಟ ಪ್ರೀತಂ ಗೌಡ
“ನಾನು ಶಾಸಕ ಹಾಗೂ ಸಚಿವನಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಯಾಗಿದ್ದೇನೆ. ನನ್ನ ಕ್ಷೇತ್ರದ ಜನರು ಸ್ವಾಭಿಮಾನಿಗಳು. ಮತ್ತೊಮ್ಮೆ ನನ್ನನ್ನು ಆಶೀರ್ವದಿಸುವರು” ಎಂದರು.