ಬಿಎಸ್ಎಎಲ್ ಸ್ಟೀಲ್ ಕೈಗಾರಿಕೆಗಾಗಿ 1995 ಹಾಗೂ 1998ರಲ್ಲಿ ಭೂಮಿ ಕಳೆದುಕೊಂಡು ವಂಚನೆಗೊಳಗಾಗಿರುವ ಭೂಸಂತ್ರಸ್ಥರಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬಳ್ಳಾರಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ಬಳ್ಳಾರಿ ತಾಲೂಕಿನ ಬೇವಿನಹಳ್ಳಿ, ಕಕ್ಕಬೇವಿನಹಳ್ಳಿ, ಅಮರಾಪುರ, ತಗ್ಗಿನ ಬೂದಿಹಾಳು, ಚಗನೂರು ಗ್ರಾಮಗಳ ವ್ಯಾಪ್ತಿಯ ರೈತರ ಭೂಮಿಗಳನ್ನು ಕಿತ್ತುಕೊಳ್ಳಲಾಯಿತು. ರಾಜ್ಯ ಸರ್ಕಾರ ಕೆಐಎಡಿಬಿ, ಬಿಎಸ್ಎಎಲ್, ಗೋವಾ ಕಂಪನಿ, ಐಎಫ್ಸಿಐ ಸಂಸ್ಥೆಗಳೊಂದಿಗೆ ಶಾಮೀಲಾದ ಕಾರಣ ರೈತರಿಗೆ ತೀವ್ರ ಅನ್ಯಾಯವಾಯಿತು” ಎಂದು ಪ್ರತಿಭಟನಾಕಾರರು ಆರೋಪಿಸಿದರು.
“ಕೈಗಾರಿಕೆ ಸ್ಥಾಪನೆ ಮಾಡಿ ಅನ್ಯಾಯಕ್ಕೆ ಒಳಗಾಗಿರುವ ರೈತರಿಗೆ ಉದ್ಯೋಗ ನೀಡಿ. ಇಲ್ಲವೇ ನಮ್ಮ ಭೂಮಿ ನಮಗೆ ಹಿಂದಿರುಗಿಸಿ. ಇಲ್ಲವೇ ಭೂಮಿ ಖರೀದಿಯಲ್ಲಿ ಆದ ಅನ್ಯಾಯಕ್ಕೆ ಸಮರ್ಪಕ ಬೆಲೆ ನೀಡಿ ಕೂಡಲೇ ನ್ಯಾಯ ಒದಗಿಸಿ” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶೋಷಿತ ಸಮುದಾಯಗಳ ಪ್ರಗತಿಯ ಹರಿಕಾರ ಬಿ ಕೃಷ್ಣಪ್ಪ
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು ಬಸವರಾಜ್, ಜಿಲ್ಲಾ ಅಧ್ಯಕ್ಷ ಶಿವಶಂಕರ್, ಸಿಐಟಿಯು ಜಿಲ್ಲಾ ಮುಖಂಡ ಜೆ ಸತ್ಯಬಾಬು, ಸಿಪಿಐಎಂ ತಾಲೂಕು ಮುಖಂಡೆ ಚಂದ್ರಕುಮಾರಿ, ಸ್ವಾಮಿ, ತಿಪ್ಪೇಸ್ವಾಮಿ ಎಂ, ಡಿವೈಎಫ್ಐ ಮುಖಂಡ ನವೀನ್, ಹನುಮಂತಪ್ಪ, ಗ್ರಾಮದ ರೈತರು ಸೇರಿದಂತೆ ಇತರರು ಇದ್ದರು.