ದಲಿತ, ಶೋಷಿತ ಸಮುದಾಯಗಳ ಪ್ರಗತಿಗಾಗಿ ಶ್ರಮಿಸಿದ ಪ್ರೊ.ಬಿ ಕೃಷ್ಣಪ್ಪ ಅವರು ಸ್ಮರಣೀಯ ನೇತಾರ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಟಿ ವಿಜಯಕುಮಾರ್ ಹೇಳಿದರು.
ಹಲವು ದಲಿತ ಸಂಘಟನೆಗಳ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರೊ.ಬಿ ಕೃಷ್ಣಪ್ಪ ಅವರ 86ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾಮಾಜಿಕ ರಕ್ಷಣೆಗಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅಸ್ತ್ರವನ್ನು ಶೋಷಿತರ ಕೈಗೆ ನೀಡಿದ ಕೀರ್ತಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಕೃಷ್ಣಪ್ಪ ಅವರಿಗೆ ಸಲ್ಲುತ್ತದೆ” ಎಂದು ಹೇಳಿದರು.
“1970ರ ದಶಕದಲ್ಲಿನ ಮೌಢ್ಯಾಚರಣೆ ಹೆಸರಿನಲ್ಲಿ ಶೋಷಿತರ ಶೋಷಣೆ, ದಲಿತ ಮಹಿಳೆಯರ ಮೇಲಿನ ದೌರ್ಜನ್ಯ, ದಲಿತರ ಭೂ ಕಬಳಿಕೆ ಪ್ರಕರಣಗಳಿಗೆ ಹೋರಾಟದ ಶಕ್ತಿಯಾಗಿ ನಿಂತವರು ಕೃಷ್ಣಪ್ಪ. ಅಂಬೇಡ್ಕರ್ ಅವರ ವಿಚಾರಧಾರೆಯಿಂದ ಪ್ರೇರಿತರಾಗಿದ್ದ ಕೃಷ್ಣಪ್ಪ, ರಾಜ್ಯದಲ್ಲಿ ದಸಂಸ ಸಂಘಟನೆ ಕಟ್ಟುವ ಮೂಲಕ ದಲಿತ ಮತ್ತು ಶೋಷಿತ ಸಮುದಾಯಕ್ಕೆ ಸಾಮಾಜಿಕ ರಕ್ಷಣೆ ನೀಡಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯ ಶಿಕ್ಷಣ ನೀತಿ | ತಜ್ಞರ ಜತೆ ಸಮಾಲೋಚಿಸಿ ಗೊಂದಲವಿಲ್ಲದಂತೆ ಜಾರಿಮಾಡುತ್ತೇವೆ: ಸಚಿವ ಸುಧಾಕರ್
“ಕೃಷ್ಣಪ್ಪ ಅವರ ಆದರ್ಶ ಮತ್ತು ಹೋರಾಟದ ದೃಷ್ಟಿಕೋನವನ್ನು ಉಳಿಸಿಕೊಳ್ಳುವ ಜವಬ್ದಾರಿ ದಲಿತರ ಮೇಲಿದೆ. ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸೌಲಭ್ಯ ಮತ್ತು ಒಡೆತನವನ್ನು ಧಕ್ಕಿಸಿಕೊಳ್ಳಲು ಹೋರಾಟವೇ ಪ್ರಮುಖ ಅಸ್ತ್ರ. ಹಾಗಾಗಿ ಹಲವು ಸಂಘಟನೆಗಳು ಒಗ್ಗೂಡಿ ಹೋರಾಟದ ಶಕ್ತಿಯನ್ನು ಗಟ್ಟಿಗೊಳಿಸಿಕೊಳ್ಳಬೇಕಾಗಿದೆ” ಎಂದರು.
ಕೆ ಬಿ ನಾಗರಾಜ್, ಅಂಜಿನಪ್ಪ, ಚನ್ನಿಗರಾಮಯ್ಯ, ಎನ್ ತಿಪ್ಪೇರುದ್ರಪ್ಪ, ಜಾಲಿ ಮಂಜು, ಎನ್ ಹೊನ್ನೂರಸ್ವಾಮಿ, ಡಿ.ಸೋಮಶೇಖರ್, ಹಳೇಟೌನ್ ಬದ್ರಿ, ಆರ್ ರುದ್ರಮುನಿ, ಜಗದೀಶ, ನಿಂಗರಾಜ್, ಡಿ ತಿಪ್ಪೇಸ್ವಾಮಿ, ಮಹಾಂತೇಶ್, ಎ ಮಾರುತಿ ಸೇರಿದಂತೆ ಇತರರು ಇದ್ದರು.