ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕರುನಾಡು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮತ್ತು ಗಿಲಾವ್ ಕಾರ್ಮಿಕರ ಸಂಘದ ವತಿಯಿಂದ 141ನೇ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಅಂಗವಾಗಿ ಶುಕ್ರವಾರ ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೆಂದ್ರ ಬೆಲ್ದಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಶ್ರಮಿಕ ವರ್ಗದ ನ್ಯಾಯದ ಧ್ವನಿಯಾಗಿ ಸದಾ ಕೆಲಸ ಮಾಡುತ್ತಿದ್ದೇನೆ. ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಕಾರ್ಮಿಕ ವರ್ಗದ ಬೆಂಬಲವೇ ಪ್ರಮುಖ ಕಾರಣವಾಗಿದೆ. ಘೋಢಪಳ್ಳಿ ಗ್ರಾಮದಲ್ಲಿ ಕಾರ್ಮಿಕರಿಗೆ 9–20 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದೆʼ ಎಂದರು.
ಕರಾದಸಂಸ ವಿಭಾಗೀಯ ಸಂಚಾಲಕ ಉಮೇಶಕುಮಾರ ಸೋರಳ್ಳಿಕರ ಮಾತನಾಡಿ, ʼಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕರಿಗೆ ಸಮರ್ಪಕ ವೇತನ, ವಾರದ ರಜೆ ಹಾಗೂ 8 ಗಂಟೆಗಳ ಕೆಲಸದ ಹಕ್ಕುಗಳನ್ನು ಜಾರಿಗೆ ತಂದವರು ಎಂದು ಸ್ಮರಿಸಿದ ಅವರು, ಜಿಲ್ಲೆ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಮಿಕರಿಗಾಗಿ ಸಾಂಸ್ಕೃತಿಕ ಸಭಾಂಗಣಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಮಹೇಶ ಕುಳಲಿ ಅವರು ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗಾಗಿ ಇರುವ ವಿವಿಧ ಸರ್ಕಾರಿ ಸೇವಾ ಸೌಲಭ್ಯ ಮತ್ತು ಯೋಜನೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಕಾರ್ಮಿಕರ ಮಕ್ಕಳನ್ನು ಗೌರವಿಸಲಾಯಿತು. 50 ಜನ ಹಿರಿಯ ಕಾರ್ಮಿಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವಿಕುಮಾರ್ ಅಮಲಾಪುರ ವಹಿಸಿದ್ದರು. ಸುಬ್ಬಣ್ಣ ಕರಕನಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವರಾಜ್ ತಡಪಳ್ಳಿ, ಸುನೀಲ್ ಕಡ್ಡೆ, ಶೇಷಪ್ಪ ಚಿಟ್ಟಾ, ಶಿವಾಜಿ ಮಾನಕರೆ ಅವರು ಕ್ರಾಂತಿ ಗೀತೆ ಹಾಡಿದರು. ರಘುಪ್ರಿಯಾ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ ಹೊಸ 6 ಜಿಲ್ಲೆ, 12 ತಾಲೂಕು ರಚನೆಗೆ ಒತ್ತಾಯ
ಕಾರ್ಮಿಕ ಇಲಾಖೆಯ ನಿರೀಕ್ಷಕಿ ಸುವರ್ಣ ಸೇರಿದಂತೆ ಪ್ರಮುಖರಾದ ಶಿವಕುಮಾರ್ ನಿಲಿಕಟ್ಟೆ, ಪ್ರಕಾಶ ಭಾವಿಕಟ್ಟಿ, ಗಾಲಿಬಾ ಹಶ್ಮಿ, ಅನ್ಸುನ್ ವಾಲಿ, ಶ್ರೀಕಾಂತ್ ಭವಾನಿ, ಮಹೇಶ ಗೋರನಾಳಕರ್, ವಿನಯಕುಮಾರ ಮಾಳಗೆ, ಕರುನಾಡು ಕಟ್ಟಡ ಹಾಗೂ ಇತರೆ ನಿರ್ಮಾಣ ಗಿಲಾವ್ ಕಾರ್ಮಿಕರ ಸಂಘದ ರವಿಕುಮಾರ್ ಅಮಲಾಪುರ, ನರಸಿಂಗ್ ಚಿದ್ರಿ, ಅಶೋಕ್, ಪ್ರವೀಣ, ರಮೇಶ್ ಅಮಲಾಪುರ, ಸಂಜುಕುಮಾರ ಶಿಂಧೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಮಿಕ ಸಂಘದ ಪ್ರಮುಖರು ಭಾಗವಹಿಸಿದ್ದರು.




