ಬೀದರ್ ಮಹಾನಗರದ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿರುವ ಗುಂಡಿಗಳು ವಾಹನ ಸವಾರರ ಸಂಚಾರಕ್ಕೆ ಸವಾಲಾಗಿದೆ. ನಗರದ ಪ್ರಮುಖ ರಸ್ತೆಗಳಿಂದ ಹಿಡಿದು, ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಓಣಿಯ ಒಳ ರಸ್ತೆಗಳಲ್ಲೂ ಮೊಳಕಾಲುದ್ದದ ಗುಂಡಿಗಳು ಜನರ ನೆಮ್ಮದಿ ಕೆಡಿಸಿದ್ದು ಅಷ್ಟೇ ಅಲ್ಲದೆ ನಗರದ ಅಂದ ಕಸಿದಿವೆ.
ಈ ರಸ್ತೆಗಳಲ್ಲೇ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹಲವು ಕಡೆ ದೊಡ್ಡ ಗಾತ್ರದ ತಗ್ಗು, ಗುಂಡಿಯಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ʼರಸ್ತೆ ಮೇಲೆ ಗುಂಡಿಯೊ ಗುಂಡಿಯಲ್ಲಿ ರಸ್ತೆಯೊʼ ಎಂಬಂತಾಗಿ ಸಾರ್ವಜನಿಕರು ʼಗುಂಡಿಗಳು ಸಾರ್ ಗುಂಡಿಗಳುʼ ಎಂದು ಹಾಸ್ಯ ಮಾಡುತ್ತಿದ್ದಾರೆ.
ಸ್ವಲ್ಪ ಮಳೆಯಾದರೆ ಸಾಕು ಮುಖ್ಯರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ರಸ್ತೆ ಮೇಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನು ಕೆಲವೆಡೆ ಅವೈಜ್ಞಾನಿಕವಾಗಿ ನಡೆದ ಕಾಮಗಾರಿಯ ಪರಿಣಾಮವಾಗಿ ಇಂತಹ ದುಸ್ಥಿತಿ ನಿರ್ಮಾಣವಾಗುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಈಚೆಗೆ ಸತತವಾಗಿ ಮಳೆಯಾದ ವೇಳೆ ʼಈದಿನʼ ತಂಡ ನಗರಾದ್ಯಂತ ಸುತ್ತಾಡಿ ʼರಿಯಾಲಿಟಿ ಚೆಕ್ʼ ನಡೆಸಿತು. ಈ ತಗ್ಗು, ಗುಂಡಿಮಯ ರಸ್ತೆಗಳ ಅಧ್ವಾನ ಕಣ್ಣಿಗೆ ರಾಚುವಂತಿತ್ತು. ಈ ಕೆಳಗಿನ ಆಯ್ದ ಚಿತ್ರಗಳು ಮಹಾನಗರದ ಸೌಂದರ್ಯ ಹಾಳುಗೆಡುವಂತಿವೆ.
ಇದನ್ನು ಕ್ಷೇತ್ರದ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಮಳೆಗಾಲಕ್ಕೂ ಮುನ್ನವೇ ಗುಂಡಿ ಮುಚ್ಚುವ ಕೆಲಸ ಆಗಿದ್ದರೆ ಇಂತಹ ಅವ್ಯವಸ್ಥೆ ಕಾಣುತ್ತಿರಲಿಲ್ಲ, ಇನ್ನು ಅನೇಕ ಕಡೆ ರಸ್ತೆ, ಚರಂಡಿಗಳ ಸೂಕ್ತ ನಿರ್ವಹಣೆ ಕೊರತೆಯೂ ಎದ್ದು ಕಾಣುತ್ತಿದೆ.
ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಸ್ಟೀಲ್ ಮಿರರ್ಗಳನ್ನು (ಕನ್ನಡಿ) ಅಳವಡಿಸುವ ಹೊಸ ದಾರಿ ಕಂಡುಕೊಂಡಿರುವ ಮಹಾನಗರ ಪಾಲಿಕೆಯು ನಗರದ ಮುಖ್ಯರಸ್ತೆಗಳಲ್ಲಿ ಸೃಷ್ಟಿಯಾದ ಆಳವಾದ ತಗ್ಗು, ಗುಂಡಿ, ಮಳೆ ನೀರು ಸಂಗ್ರಹದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಿದೆ. ಮಳೆಯಾದರೆ ಸಾರ್ವಜನಿಕರು ಅನುಭವಿಸುತ್ತಿರುವ ತಾಪತ್ರಯಗಳು ಮನಗಾಣಬೇಕಿದೆ. ಅದಕ್ಕೆ ವೈಜ್ಞಾನಿಕ ಮಾದರಿಯ ಕಾಮಗಾರಿಗಳನ್ನು ತತ್ಕ್ಷಣ ಕೈಗೊಂಡು ಪರಿಹಾರವೂ ಕಂಡುಕೊಳ್ಳುವುದು ಈಗಿನ ಅಗತ್ಯ.
















ಇದನ್ನೂ ಓದಿ : ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ




