ನೋಟರಿ ವಕೀಲರನ್ನು ನೇಮಕ ಮಾಡಲು ₹50,000 ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ ₹25,000 ಪಡೆಯುತ್ತಿದ್ದ ಆರೋಪದಡಿ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ವ್ಯವಹಾರ ವಿಭಾಗದ ಹೆಚ್ಚುವರಿ ಕಾನೂನು ಸಲಹೆಗಾರ ಟಿ.ಕೆ. ಮಲಿಕ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
“ಕೇಂದ್ರ ಸರ್ಕಾರದ ನೋಟರಿ ವಕೀಲರ ನೇಮಕ ಮಾಡುವ ಜವಾಬ್ದಾರಿಯನ್ನು ಕಾನೂನು ವ್ಯವಹಾರ ವಿಭಾಗಕ್ಕೆ ನೀಡಲಾಗಿದೆ. ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡುವ ಮಲಿಕ್, ಅಧಿಕಾರ ದುರುಪಯೋಗಪಡಿಸಿಕೊಂಡು ಲಂಚ ಪಡೆದು ನೋಟರಿ ನೀಡುತ್ತಿದ್ದರು. ಇದಕ್ಕೆ ಸಹಕರಿಸುತ್ತಿದ್ದ ಬೆಂಗಳೂರಿನ ವಕೀಲೆ ಜಿ.ಕೆ ವಾಣಿ ಎಂಬುವವರನ್ನೂ ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
“₹25,000 ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಮಲಿಕ್ನನ್ನು ಬಂಧಿಸಲಾಗಿದೆ. ಇದೇ ವೇಳೆ ಈತನ ಬಳಿ ₹4.32 ಲಕ್ಷ ನಗದು ಸಿಕ್ಕಿದ್ದು, ಅದೂ ಕೂಡ ಲಂಚದ ಹಣವಾಗಿರುವ ಮಾಹಿತಿ ಇದೆ. ಜೊತೆಗೆ, ಬೆಂಗಳೂರು ಹಾಗೂ ಗಾಜಿಯಾದಾಬ್ನಲ್ಲಿರುವ ಆರೋಪಿಗೆ ಸೇರಿದ್ದ ಎರಡು ಸ್ಥಳಗಳ ಮೇಲೂ ದಾಳಿ ಮಾಡಿ, ₹34 ಲಕ್ಷ ಜಪ್ತಿ ಮಾಡಲಾಗಿದೆ. ಆರೋಪಿ ನೀಡಿದ್ದ ಮಾಹಿತಿಯಂತೆ ಬೆಂಗಳೂರಿನಲ್ಲಿ ವಾಣಿ ಅವರನ್ನು ಬಂಧಿಸಲಾಗಿದೆ” ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹುಲಿಗೆಮ್ಮ ಜಾತ್ರೆ; ಅನಿಷ್ಠ ದೇವದಾಸಿ ಪದ್ದತಿ ತಡೆಗಟ್ಟುವಲ್ಲಿ ಯಶಸ್ವಿ
“ಮಹತ್ವದ ಪ್ರಕರಣಗಳಲ್ಲಿ ಎದುರಾಳಿ ವಕೀಲರ ಜೊತೆಗೂ ಮಲಿಕ್ ಒಡನಾಟವಿಟ್ಟುಕೊಂಡು, ಪ್ರಕರಣ ಗೆಲ್ಲಲು ಸಹಕಾರ ನೀಡುತ್ತಿದ್ದ ಬಗ್ಗೆ ಮಾಹಿತಿ ಇದೆ. ದೇಶದ ಹಲವು ರಾಜ್ಯಗಳ ವಕೀಲರಿಗೆ ಅಕ್ರಮವಾಗಿ ನೋಟರಿ ನೀಡಿರುವ ಸಂಶಯವೂ ಇದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.