ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ವಿರೋಧಿಸಿ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾ ಬುಧವಾರ ನಗರದಲ್ಲಿ ವಿವಿಧೆಡೆ ಬೀದಿ ಸಭೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.
ರಾಜ್ಯದ ವಿವಿಧ ಭಾಗಗಳಿಂದ ಹೊರಟಿರುವ ಜಾಥಾಗಳ ಪೈಕಿ ಉಡುಪಿಯಿಂದ ಆರಂಭವಾಗಿ ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿಕೊಂಡು ಬಂದ ಪ್ರೊ. ವಿ.ಎಸ್. ಶ್ರೀಧರ್ ನೇತೃತ್ವದ ಜಾಥಾವನ್ನು ನಗರದ ಪ್ರವೇಶ ಕಮಾನಿನ ಬಳಿ ಸ್ವಾಗತಿಸಲಾಯಿತು. ಬಳಿಕ ಚಾಮರಾಜೇಶ್ವರ ಪಾರ್ಕ್ ಮುಂಭಾಗ ಕ್ರಾಂತಿ ಗೀತೆಗಳನ್ನು ಹಾಡಿ ಎಸ್ಐಆರ್ ವಿರೋಧಿ ಘೋಷಣೆಗಳನ್ನು ಕೂಗಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರೊ. ವಿ.ಎಸ್. ಶ್ರೀಧರ್, ಚುನಾವಣಾ ಆಯೋಗವು ಈ ಹಿಂದೆ ಎಲ್ಲ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಕಾರ್ಯ ಮಾಡುತ್ತಿತ್ತು. ಆದರೆ ಎಸ್ಐಆರ್ ಪ್ರಕ್ರಿಯೆ ಮೂಲಕ ಅಲ್ಪಸಂಖ್ಯಾತರು, ಆದಿವಾಸಿಗಳು, ಅಲೆಮಾರಿಗಳು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿದರು. ಮತದಾರರು ತಮ್ಮ ಹೆಸರು ಪಟ್ಟಿಯಿಂದ ಕೈಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ಜಾಥಾ ಪಚ್ಚಪ್ಪ ವೃತ್ತ, ಗುಂಡ್ಲುಪೇಟೆ ವೃತ್ತ ಹಾಗೂ ಟಿಪ್ಪು ವೃತ್ತ ಮಾರ್ಗವಾಗಿ ಸಂಚರಿಸಿತು. ಈ ವೇಳೆ ಸಂಘಟನೆಯ ಕೆ. ವೆಂಕಟರಾಜು ಹಾಗೂ ಎಸ್ಡಿಪಿಐನ ಅಬ್ರಾರ್ ಅಹಮ್ಮದ್ ಎಸ್ಐಆರ್ ಕುರಿತು ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ವಿದ್ಯುತ್ ವಿತರಣಾ ಪರವಾನಿಗೆ ವಿರೋಧಿಸಿ ಜೂ.18ರಂದು ರಾಜ್ಯಾದ್ಯಂತ ರೈತ ಸಂಘ ಪ್ರತಿಭಟನೆ

ಜಾಥಾದಲ್ಲಿ ವೀರಭದ್ರ ನಾಯಕ, ಅಬ್ರಹಾಂ ಡಿ. ಸಿಲ್ವಾ, ಹೇಮಂತ ಕುಮಾರ, ಉಮೇಶ್, ಮಮತಾ, ಸವಿತಾ, ಮಂಜುಳ, ರಮೇಶ್, ಸೋಲಿಗ ಸಂಘದ ಮುತ್ತಯ್ಯ, ಗಿರೀಶ್ ಕುಮಾರ್, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಸಂಘಸೇನಾ, ಎಸ್. ಬಂಗಾರಸ್ವಾಮಿ, ಆರೀಫ್, ಇರ್ಫಾನ್ ಖಲೀಲ್, ನಸ್ರುಲ್ಲಾ, ಖಲೀಮುಲ್ಲಾ, ಅಮೀಖ್ ಮಹೇಶ್, ರಾಜೇಶ್ವರಿ, ಸಾಕಮ್ಮ, ಕಾವ್ಯ, ಭಾಗ್ಯ, ಚಂದ್ರು, ಮಹೇಂದ್ರ, ಕವಿತಾ, ಮನುಜ, ಪ್ರಿಯಾ ಸೇರಿದಂತೆ ಹಲವರು ಇದ್ದರು.




