- ಮನೆ ಗೋಡೆ ಕುಸಿದ ಪರಿಣಾಮ ಎರಡು ಬೈಕ್ಗಳು ಜಖಂ
- ಮಳೆ ಸುರಿದಿದ್ದರಿಂದ ರೈತರಲ್ಲಿ ಸಂತಸ ಮೂಡಿದೆ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕು ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಧಾರಾಕಾರವಾಗಿ ಸುರಿದಿದೆ. ಯಳಂದೂರು ತಾಲೂಕಿನ ಕೋಮಾರನಪುರದಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ತಂದೆ, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
“ಸೋಮವಾರ ತಡರಾತ್ರಿ ಬಿರುಸಿನ ಮಳೆ ಸುರಿದಿದೆ. ಮನೆಯ ಒಳಗಡೆ ನೀರು ಸೋರಲು ಆರಂಭವಾಯಿತು. ಮಗ ಪ್ರಜ್ವಲ್ನನ್ನು ಕರೆದುಕೊಂಡು ಮನೆಯಿಂದ ಹೊರ ಬರುತ್ತಿದ್ದಂತೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿತು” ಎಂದು ಕುಮಾರನಪುರದ ಲಿಂಗಾಯತರ ಬಡಾವಣೆಯ ಪುಟ್ಟಸ್ವಾಮಿ ಹೇಳಿದ್ದಾರೆ.
ಕೊಳ್ಳೇಗಾಲದ ಮುಡಿಗುಂಡ ಬಡಾವಣೆಯ ಮಹದೇವಮ್ಮ ಎಂಬುವರ ಮನೆ ಗೋಡೆ ಕುಸಿದಿದ್ದು, ಎರಡು ಬೈಕ್ಗಳು ಜಖಂ ಆಗಿವೆ. ಮಹದೇವಮ್ಮನ ಮನೆಯಲ್ಲಿದ್ದ ಒಂಬತ್ತು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಳಂದೂರು ತಾಲೂಕು ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆಯ ನಂತರ ಧಾರಾಕಾರ ಮಳೆ ಸುರಿದಿದ್ದು, 7.15 ಸೆಂ.ಮೀ ಮಳೆಯಾಗಿದೆ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯಲ್ಲಿ 6.45 ಸೆಂ.ಮೀ ಮಳೆ ಬಿದ್ದಿದೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ, ಜಕ್ಕಳ್ಳಿ, ಜಾಗೇರಿ, ಧನಗೆರೆ, ಸರಗೂರು, ನರಿಪುರ, ಗುಂಡೇಗಾಲ, ಪಾಳ್ಯ, ಕುಣಗಳ್ಳಿ, ಕುಂತೂರು, ಕೆಂಪನಪಾಳ್ಯ, ತಿಮ್ಮರಾಜಿಪುರ, ಮಧುವನಹಳ್ಳಿ, ದೊಡ್ಡಿಂದುವಾಡಿ ಸೇರಿದಂತೆ ಅನೇಕ ಕಡೆ ಉತ್ತಮ ಮಳೆಯಾಗಿದೆ.
ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಮೂರು ತಾಸು ಮಳೆ ಸುರಿದಿದೆ. ಇದರಿಂದ ಕಾಫಿ ಬೆಳಗಾರರಲ್ಲಿ ಹರ್ಷ ಮೂಡಿಸಿದೆ.
ವಾರದಿಂದ ಅಲ್ಲಲ್ಲಿ ತುಂತುರು ಮಳೆಯಾಗುತ್ತಿತ್ತು. ಬಿತ್ತನೆ ಮಾಡಲು ರೈತರು ಸಿದ್ಧತೆಯಲ್ಲಿ ತೊಡಗಿದ್ದರು. ರಾತ್ರಿ ಸುರಿದ ಮಳೆಯಿಂದ ರೈತರಲ್ಲಿ ಸಂತಸ ಮೂಡಿದೆ. ದ್ವಿದಳ ದಾನ್ಯಗಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಚನ್ನಕೇಶವಸ್ವಾಮಿ ರಥೋತ್ಸವ: ವಿರೋಧದ ನಡುವೆಯೂ ಸೌಹಾರ್ದತೆ ಮೆರೆದ ಬೇಲೂರು
“ರಾತ್ರಿ 11ರಿಂದ ಬೆಳಗಿನ ಜಾವ ಎರಡು ಗಂಟೆಯ ತನಕ ಭರ್ಜರಿ ಮಳೆಯಾಯಿತು. ಕಾಡಂಚಿನ ಗ್ರಾಮಗಳ ರಸ್ತೆ ಸುತ್ತಮುತ್ತ ನೀರು ಹರಿದಿದ್ದು, ವಾತಾವರಣದಲ್ಲಿ ತಂಪು ತುಂಬಿದೆ” ಎಂದು ರೈತ ಶಿವರಾಜು ಸಂತಸ ವ್ಯಕ್ತಪಡಿಸಿದರು.