- 94 ಸಿ, 94 ಸಿಸಿ – ಅರ್ಹ ಫಲಾನುಭವಿಗಳಿಗೆ ಕೂಡಲೆ ಹಕ್ಕು ಪತ್ರ ವಿತರಿಸಿ
- ನಿವೇಶನ ಹಂಚಿಕೆ ಮಾಡಿ; ಮಲೆನಾಡು ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡಿ
ʼಭೂಮಿ ವಸತಿ ಕೊಡದೆ ನಮ್ಮ ಓಟು ಕೊಡೆವು, ಅರಣ್ಯ ಹಕ್ಕು ಸಿಗದೆ ನಮ್ಮ ಓಟು ಕೊಡೆವುʼ ಎಂಬ ಘೋಷ ವಾಕ್ಯದೊಂದಿಗೆ ಮಾರ್ಚ್ 28ರಂದು ಚಿಕ್ಕಮಗಳೂರಿನಲ್ಲಿ ರೈತ, ದಲಿತ, ಕೂಲಿಕಾರ್ಮಿಕ ಸಂಘಟನೆಗಳ ವತಿಯಿಂದ ಜನಜಾಗೃತಿ ಜಾಥಾ ಮತ್ತು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
‘ಚುನಾವಣೆ ಹಿನ್ನೆಲೆ ರಾಜಕಾರಣಿಗಳ ವಿನಮ್ರತೆಯ ನಾಟಕ ಪ್ರಾರಂಭವಾಗಲಿದೆ. ಈ ಬಾರಿ ಮಲೆನಾಡಿಗರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಬೇಡಿಕೆಗಳನ್ನು ಈಡೇರಿಸದ ಹೊರತು ನಮ್ಮ ಮತ ನೀಡುವುದಿಲ್ಲ’ ಎಂದು ಪ್ರತಿಭಟನೆಗೆ ಕರೆ ನೀಡಿರುವ ರೈತ, ದಲಿತ ಮತ್ತು ಕೂಲಿಕಾರ್ಮಿಕ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಗೆದ್ದು ಹೋದವರು ನಮ್ಮತ್ತ ತಿರುಗಿ ನೋಡಿದ್ದಾರೆಯೇ? ಬಡ ಜನರಿಗೆ ಸೂರು ಸಿಕ್ಕಿದೆಯೆ? ಅರಣ್ಯ ಕಾಯಿದೆಗಳ ಭಯದಿಂದ ನಮಗೆ ಮುಕ್ತಿ ಸಿಕ್ಕಿದೆಯಾ? ಕನಿಷ್ಟ ಒಂದು ಒಳ್ಳೆಯ ಸರ್ಕಾರಿ ಆಸ್ಪತ್ರೆಯಾದರೂ ಇದೆಯಾ? ಹೀಗಿರುವಾಗ ನಾವು ಅವರಿಗೆ ಏಕೆ ಮತ ಹಾಕಬೇಕು” ಎಂದು ಪ್ರಶ್ನಿಸಿದ್ದಾರೆ.
“ವಸತಿ ಹಕ್ಕಿಗಾಗಿ 94 ಸಿ, 94 ಸಿಸಿ ಅಡಿಯಲ್ಲಿ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದು, ಅರ್ಹ ಫಲಾನುಭವಿಗಳಿಗೆ ಕೂಡಲೆ ಹಕ್ಕು ಪತ್ರ ವಿತರಿಸಬೇಕು. ಗ್ರಾಮ ಪಂಚಾಯಿತಿಗಳು ನಿವೇಶನಗಳಿಗೆ ಮೀಸಲಿಟ್ಟಿರುವ ಜಾಗಗಳನ್ನು ಕೂಡಲೆ ನಿವೇಶನ ರಹಿತರನ್ನು ಗುರುತಿಸಿ ವಂಚಿತರಿಗೆ ಹಂಚಿಕೆ ಮಾಡಿ, ಮನೆಗಳನ್ನು ನಿರ್ಮಿಸಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಟಿಕೆಟ್ ಕೈ ತಪ್ಪುವ ಭೀತಿ; ಸಿದ್ದರಾಮಯ್ಯ ಭೇಟಿ ಮಾಡಿದ ಕೈ ಮುಖಂಡರು
“ಬದುಕಿಗಾಗಿ ವ್ಯವಸಾಯ ಮಾಡುತ್ತಿರುವ ಮಲೆನಾಡಿನ ರೈತರ ಸಾಗುವಳಿ ಭೂಮಿಗೆ ಹಕ್ಕು ಪತ್ರ ನೀಡಬೇಕು. ಮಲೆನಾಡಿನ ರೈತಾಪಿ ವರ್ಗವನ್ನು ಬಾದಿಸುತ್ತಿರುವ ತೊಂಡೆರೋಗ, ಕೊಳೆ ರೋಗ, ಎಲೆಚುಕ್ಕಿ ರೋಗದ ಬಗ್ಗೆ ಸಂಶೋಧನೆಗಳು ತೀವ್ರಗೊಳಿಸಿ, ಬಾಧಿತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕೂಲಿಕಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಪರಿಸರ ಸ್ನೇಹಿ ಸಾರ್ವಜನಿಕ ಹಿತಾಸಕ್ತಿಯ ಅಭಿವೃದ್ಧಿಗಾಗಿ ಹಾಗೂ ಭೂಮಿ, ವಸತಿ ಸಮಸ್ಯೆ ಬಗೆಹರಿಸಲು ತೊಡಕಾಗಿರುವ ಸೆಕ್ಷನ್ 4, 1 ಮತ್ತು ಇತರೆ ಜನ ವಿರೋಧಿ ಅರಣ್ಯ ಕಾಯಿದೆಗಳನ್ನು ರದ್ದು ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.