ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಖಲೆಗಳನ್ನು ಸರ್ಕಾರವು ಡಿಜಿಟಲೀಕರಣಗೊಳಿಸಿದ್ದು, ಮನೆಯ ಖಾಯಂ ಹಕ್ಕು ಪತ್ರವನ್ನು ಇ-ಸ್ವತ್ತು ಎಂಬ ದಾಖಲೆಗೆ ಬದಲಾಯಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗಾ ಜಿಲ್ಲಾ ಪಂಚಾಯತ್ ಸಿಇಒ ದಿವಾಕರ್ ʼಮನೆ ಬಾಗಿಲಿಗೆ ಇ-ಸ್ವತ್ತುʼ ಎಂಬ ಜನಸ್ನೇಹಿ ಕಾರ್ಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಮನೆಯನ್ನು ಹಳೆಯ ದಾಖಲೆಗಳಿಂದ ಇ-ಸ್ವತ್ತಿಗೆ ಎಲ್ಲ ಮನೆ ಮಾಲೀಕರು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಬದಲಾಯಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಇ-ಸ್ವತ್ತುಗಳನ್ನು ಪಡೆಯಲು ಗ್ರಾಮಸ್ಥರು ಪಂಚಾಯಿತಿಗೆ ಅಲೆಯಬೇಕಿತ್ತು. ಅಲ್ಲದೆ, ಗ್ರಾಮ ಪಂಚಾಯಿತಿಗಳಲ್ಲಿ ಕೆಲವೊಮ್ಮೆ ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆಯೂ ಕೇಳಿ ಬರುತ್ತಿತ್ತು. ಇಂತಹ ಭ್ರಷ್ಟಾಚಾರ ಮತ್ತು ಗ್ರಾಮಸ್ಥರ ಅಲೆದಾಟವನ್ನು ತಪ್ಪಿಸಲು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ದಿವಾಕರ್ ಮನೆ ಮನೆಗೆ ಇ-ಸ್ವತ್ತು ಕಾರ್ಯಕ್ರಮವನ್ನು ಆರಂಭಿಸಿದ್ದರು.
ಮನೆಯ ಬಾಗಿಲಿಗೆ ಹೋಗಿ ಇ-ಸ್ವತ್ತು ನೀಡಿದ್ದರು. ಇಂತಹ ಒಂದು ನೂತನ ಕಾರ್ಯಕ್ರಮ ಬಹಳಷ್ಟು ಪ್ರಶಂಸೆಗೆ ಒಳಗಾಗಿತ್ತು. ವಿಧಾನ ಸಭೆ ಚುನಾವಣೆ ಬಂದಿದ್ದರಿಂದ ಇ-ಸ್ವತ್ತು ಅಭಿಯಾನ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭಗೊಂಡಿದ್ದು, ಶುಕ್ರವಾರ ಸಿಇಒ ದಿವಾಕರ್ ಅವರು ಹೊಸದುರ್ಗದ ಸಾಣೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಇ-ಸ್ವತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮನೆ ಬಾಗಿಲಿಗೆ ಹೋಗಿ ಇ-ಸ್ವತ್ತು ಪ್ರಮಾಣ ಪತ್ರ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಭ್ರಷ್ಟ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
ಈ ಸಂದರ್ಭದಲ್ಲಿ ಹೊಸದುರ್ಗ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ್, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು, ಪಿಡಿಒ, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಇದ್ದರು.