- ತಮ್ಮ ಬಣದ ಶಾಸಕರನ್ನು ಆಯ್ಕೆ ಮಾಡಿಕೊಳ್ಳಲು ಸಿದ್ದರಾಮಯ್ಯ, ಡಿಕೆಶಿ ನಡುವೆ ಪೈಪೋಟಿ
- ಈ ಬಾರಿ ಕನಿಷ್ಠ 20 ಮಂದಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ
ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕುರಿತು ಹೈಕಮಾಂಡ್ ಜೊತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು (ಮೆ 24) ಸಂಜೆ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ಈಗಾಗಲೇ ಮೊದಲ ಹಂತದಲ್ಲಿ ಎಂಟು ಮಂದಿ ಸಚಿವರ ಜೊತೆ ಇಬ್ಬರು ನಾಯಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಾಕಿ ಇರುವ 24 ಸಚಿವ ಸ್ಥಾನಗಳಿಗೆ ಶಾಸಕರನ್ನು ಆಯ್ಕೆ ಮಾಡಿಕೊಳ್ಳಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ಈ ಬಾರಿ ಕನಿಷ್ಠ 20 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೊದಲ ಹಂತದ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ. ಡಿಕೆ ಶಿವಕುಮಾರ್ ಬಣದಿಂದಲೂ ನಾಲ್ಕು ಮಂದಿ ಸಂಪುಟದಲ್ಲಿದ್ದಾರೆ.
ಮೂಲಗಳ ಪ್ರಕಾರ ಇಬ್ಬರೂ ನಾಯಕರು ತಮ್ಮವರಿಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಸಂಭವನೀಯ ಪಟ್ಟಿ ಸಿದ್ಧಪಡಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ತಲುಪಿಸಿದ್ದಾರೆ ಎನ್ನಲಾಗಿದೆ. ಎರಡೂ ಬಣದಿಂದಲೂ ಕನಿಷ್ಠ 20 ಮಂದಿಯ ಹೆಸರುಗಳು ಹೈಕಮಾಂಡ್ ಅಂಗಳಕ್ಕೆ ತಲುಪಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್ ಕರ್ನಾಟಕಕ್ಕೆ ಕನಿಷ್ಠ 4ರಿಂದ 5 ಸ್ಥಾನಗಳು ದೊರೆಯಲಿವೆ ಎಂದು ಸೋಮವಾರ ಕಲಬುರಗಿಯಲ್ಲಿ ಹೇಳಿದ್ದಾರೆ. ಖರ್ಗೆ ಅವರು ಸೂಚಿಸಿದ 5ರಿಂದ 6 ಮಂದಿ ಸಚಿವರಾಗುವುದು ಬಹುತೇಕ ಖಚಿತವಾಗಿದೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಸೇರಿ 19 ವಿಪಕ್ಷಗಳಿಂದ ನೂತನ ಸಂಸತ್ ಭವನದ ಉದ್ಘಾಟನೆ ಬಹಿಷ್ಕಾರ
ಉಳಿದಂತೆ ಕರಾವಳಿ ಭಾಗದಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಏಕೈಕ ಶಾಸಕ ಯು ಟಿ ಖಾದರ್ ಅವರನ್ನು ವಿಧಾನಸಭಾಧ್ಯಕ್ಷರನ್ನಾಗಿ ಮಾಡಲಾಗಿದೆ. ಹೀಗಾಗಿ ಆ ಎರಡು ಜಿಲ್ಲೆಗಳಿಗೆ ಸಂಪುಟದಲ್ಲಿ ಆದ್ಯತೆ ಸದ್ಯಕ್ಕೆ ಸಿಗುವ ಲಕ್ಷಣ ಕಾಣುತ್ತಿಲ್ಲ.
ಕರಾವಳಿ ಮೂಲದ ಬಿ ಕೆ ಹರಿಪ್ರಸಾದ್ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಹಾಗೆಯೇ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಮತ್ತೋರ್ವ ವಿಧಾನಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡಬೇಕೆಂಬ ಚರ್ಚೆಗಳು ನಡೆದಿವೆ.
ತುಮಕೂರು ಜಿಲ್ಲೆಯಲ್ಲಿನ ಸಚಿವ ಸ್ಥಾನದ ಹಂಚಿಕೆ ಪಕ್ಷಕ್ಕೆ ಸವಾಲಾಗಿದೆ. ಹಾಸನ ಜಿಲ್ಲೆಯಿಂದ ಕಳೆದ ಚುನಾವಣೆಯಲ್ಲಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಕೆ ಎಂ ಶಿವಲಿಂಗೇಗೌಡ ಮಾತ್ರ ಗೆದ್ದಿದು, ವಲಸಿಗರಿಗೆ ಮೊದಲ ಬಾರಿಗೆ ಅವಕಾಶ ನಿಡಬೇಕೋ ಬೇಡವೋ ಎಂಬ ಜಿಜ್ಞಾಸೆ ಕಾಡುತ್ತಿದೆ.
ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲೂ ಹೆಚ್ಚು ಶಾಸಕರಿದ್ದು, ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡುವ ಮೂಲಕ ವಿವಾದಗಳಿಗೆ ಆಸ್ಪದ ನೀಡದಿರಲು ಹೈಕಮಾಂಡ್ ಚಿಂತಿಸುತ್ತಿದೆ. ಆದರೆ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ನಲ್ಲಿ ಅಸಮಾಧಾನಗಳು ಹೆಚ್ಚಾಗುವುದು ಶತಸಿದ್ಧ ಎಂಬ ಪರಿಸ್ಥಿತಿ ಕಂಡುಬರುತ್ತಿದೆ.
ಸಂಭವನೀಯ ಸಚಿವರ ಪಟ್ಟಿ ಇಲ್ಲಿದೆ?
ಆರ್ ವಿ ದೇಶಪಾಂಡೆ
ಬಿ ಕೆ ಹರಿಪ್ರಸಾದ್
ಸಲೀಂ ಅಹಮದ್
ಎಂ ಕೃಷ್ಣಪ್ಪ
ಕೃಷ್ಣ ಬೈರೇಗೌಡ
ಬೈರತಿ ಸುರೇಶ್
ದಿನೇಶ್ ಗುಂಡೂರಾವ್
ಮಧು ಬಂಗಾರಪ್ಪ
ಶಿವಾನಂದ ಪಾಟೀಲ್
ಶಿವರಾಜ ತಂಗಡಗಿ
ಕೆ ಎನ್ ರಾಜಣ್ಣ
ಬಸವರಾಜ ರಾಯರೆಡ್ಡಿ
ಲಕ್ಷ್ಮೀ ಹೆಬ್ಬಾಳಕರ್
ಲಕ್ಷ್ಮಣ ಸವದಿ
ರಾಘವೇಂದ್ರ ಹಿಟ್ನಾಳ್
ಎಚ್ ಕೆ ಪಾಟೀಲ್
ರಹೀಂ ಖಾನ್
ಎಚ್ ಸಿ ಮಹದೇವಪ್ಪ
ಈಶ್ವರ್ ಖಂಡ್ರೆ
ಚೆಲುವರಾಯಸ್ವಾಮಿ
ಎಸ್ ಎಸ್ ಮಲ್ಲಿಕಾರ್ಜುನ್
ವಿನಯ್ ಕುಲಕರ್ಣಿ
ಸಂತೋಷ್ ಲಾಡ್