- ‘ರಾಷ್ಟ್ರ ರಕ್ಷಣಾ ಪಡೆ’ಯ ಹೆಸರಲ್ಲಿ ದಾಳಿ ನಡೆಸುತ್ತಿದ್ದ ತಂಡ
- ಆನ್ಲೈನ್ ಪೇಮೆಂಟ್ ಮೂಲಕ ಹಣ ಸಂಗ್ರಹ ಮಾಡುತ್ತಿದ್ದ ಪುನೀತ್ ಕೆರೆಹಳ್ಳಿ
ರಾಮನಗರ ಜಿಲ್ಲೆಯ ಸಾತನೂರಿನಲ್ಲಿ ಇದ್ರೀಸ್ ಪಾಷಾ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪ್ರಮುಖ ಆರೋಪಿ ಪುನೀತ್ ಕೆರೆಹಳ್ಳಿ, ಗೋ ಸಾಗಾಟದ ವಾಹನಗಳನ್ನು ತಡೆದ ನಂತರ ಅದರಲ್ಲಿದ್ದವರಿಗೆ ಸ್ಟನ್ ಗನ್ ಬಳಸಿ ಅಮಾನವೀಯವಾಗಿ ದೌರ್ಜನ್ಯ ನಡೆಸುತ್ತಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
‘ರಾಷ್ಟ್ರ ರಕ್ಷಣಾ ಪಡೆ’ಯ ಹೆಸರನ್ನಿಟ್ಟುಕೊಂಡು ಪುನೀತ್ ಕೆರೆಹಳ್ಳಿ ನೇತೃತ್ವದ ದುಷ್ಕರ್ಮಿಗಳ ಗುಂಪು, ಕನಕಪುರ ತಾಲೂಕಿನ ಸಾತನೂರು ಬಳಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ದಾಳಿ ನಡೆಸಿದ್ದರು. ಆ ಬಳಿಕ ಜಾನುವಾರು ವ್ಯಾಪಾರಿ ಇದ್ರೀಸ್ ಪಾಷಾ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದರು. ಈ ಘಟನೆಗೆ ಸಂಬಂಧಿಸಿ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು.
ಇದಾದ ಬಳಿಕ ಅಮಾನುಷ ದೌರ್ಜನ್ಯ ನಡೆಸಿರುವ ಆರೋಪಿ ಪುನೀತ್ ಕೆರೆಹಳ್ಳಿ, ದೇಶದಲ್ಲಿ ನಿಷೇಧಕ್ಕೊಳಪಟ್ಟಿರುವ ಸ್ಟನ್ ಗನ್(ಕರೆಂಟ್ ಶಾಕ್ ಅನುಭವ ಕೊಡುವ ಗನ್) ಅನ್ನು ಬಳಸಿ, ‘ಇಂಥವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇವರಿಗೆ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಡಬೇಕು’ ಎಂದು ಹೇಳುತ್ತಾ ಸ್ಟನ್ ಗನ್ ಬಳಸುತ್ತಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ.
ಈ ವಿಡಿಯೋವನ್ನು ಸ್ವತಃ ಪುನೀತ್ ಕೆರೆಹಳ್ಳಿ ತಂಡವೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದು ಯಾವಾಗಿನ ವಿಡಿಯೋ ಎಂದು ಇನ್ನೂ ತಿಳಿದುಬಂದಿಲ್ಲ. ಇದು ಈಗ ವೈರಲ್ ಆಗುತ್ತಿದ್ದು, ಇಂತಹ ದುಷ್ಕರ್ಮಿಗಳ ವಿರುದ್ಧ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿರುವುದೇ ಇವರು ಕೊಲೆ ಮಾಡುವ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆನ್ಲೈನ್ ಪೇಮೆಂಟ್ ಮೂಲಕ ಹಣ ಸಂಗ್ರಹ
‘ರಾಷ್ಟ್ರ ರಕ್ಷಣಾ ಪಡೆ’ಯ ಹೆಸರನ್ನಿಟ್ಟುಕೊಂಡಿದ್ದ ಪುನೀತ್ ಕೆರೆಹಳ್ಳಿ ನೇತೃತ್ವದ ಗುಂಪು, ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಸಂಗ್ರಹ ಮಾಡುತ್ತಿದ್ದರು ಎಂಬ ಅಂಶಗಳು ತಿಳಿದುಬಂದಿದೆ.
https://www.facebook.com/100077742295476/videos/892176041841361
ಯಾರು ಈ ಪುನೀತ್ ಕೆರೆಹಳ್ಳಿ?
ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾದ ಪುನೀತ್ ಕೆರೆಹಳ್ಳಿ ಸೂಲಿಬೆಲೆಯ ಶಿಷ್ಯ. ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ನನ್ನ ಗುರುಗಳು ಅಂತ ಆತನೇ ಹಲವೆಡೆ ಹೇಳಿಕೊಂಡಿರುವುದು ಕಂಡುಬಂದಿದೆ. ಅದಕ್ಕೆ ಪೂರಕ ಎಂಬಂತೆ, ಕೆಲ ತಿಂಗಳ ಹಿಂದೆ ಈತನ ‘ಅಧ್ವ’ ಯೂಟ್ಯೂಬ್ ಚಾನೆಲಿನ ಲಾಂಛನವನ್ನು ಕೂಡ ಬಿಡುಗಡೆ ಮಾಡಿದ್ದರು.
ಹಲಾಲ್-ಜಟ್ಕಾ ವಿವಾದದ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಕರಪತ್ರ ಹಂಚಿ ಕೂಡ ಸುದ್ದಿಯಾಗಿದ್ದ ಈತ, ಹೆದ್ದಾರಿಗಳಲ್ಲಿ ಬಡಿಗೆ, ಬ್ಯಾಟು ಹಿಡಿದು ದಾಳಿ ನಡೆಸುತ್ತಿದ್ದ. ಪರವಾನಿಗೆ ಇದ್ದೂ ಕೂಡ ಗೋ ಸಾಗಣೆ ಮಾಡುವವವರ ಮೇಲೆ ದಾಳಿ ಮಾಡಿ ಅದರ ವಿಡಿಯೋವನ್ನು ಫೇಸ್ಬುಕ್ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ. ಅಲ್ಲದೇ, ಇದನ್ನೇ ಬಳಸಿಕೊಂಡು ಹಣ ಕೂಡ ಗಳಿಸುತ್ತಿದ್ದ ಎಂಬ ಆರೋಪ ಕೂಡ ಕೇಳಿಬಂದಿದೆ. ಬಿಜೆಪಿ ನಾಯಕರೊಂದಿಗೆ ಹತ್ತಿರದ ಸಂಬಂಧ ಹೊಂದಿದ್ದ ಎಂಬುದಕ್ಕೆ ಪುರಾವೆ ಒದಗಿಸುವ ಫೋಟೋಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಕಾರಣವಾಗಿದೆ.