- ಟಿಕೆಟ್ ತಪ್ಪಲು ಕಾರಣವಾದ ಸಭ್ಯವಲ್ಲದ ಹಳೆಯ ಫೋಟೊಗಳು
- ಮಾಜಿ ಸಚಿವ ಎಚ್ ಆಂಜನೇಯ ಅಳಿಯ ಬಸವಂತಪ್ಪ ವಿರುದ್ಧ ಕೇಸ್
ದುರುದ್ದೇಶದಿಂದ ನನ್ನ ಹಳೆಯ ಖಾಸಗಿ ಫೋಟೊಗಳನ್ನು ವೈರಲ್ ಮಾಡಿ, ಕಾಂಗ್ರೆಸ್ ಟಿಕೆಟ್ ತಪ್ಪಿಸಲಾಗಿದೆ ಎಂದು ಮನನೊಂದ ಟಿಕೆಟ್ ಆಕಾಂಕ್ಷಿ ಸುದ್ದಿಗೋಷ್ಠಿಯಲ್ಲಿಯೇ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಮಾಯಕೊಂಡ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಅವರು ಸುದ್ದಿಗೋಷ್ಠಿ ನಡೆಸಿದ್ದು, “ಅಧಿಕಾರದ ಆಸೆಗಾಗಿ ತಮ್ಮ ಚಾರಿತ್ರ್ಯವಧೆ ಮಾಡಲಾಗಿದೆ” ಎಂದು ಆರೋಪಿಸಿದ್ದಾರೆ.
“ಜನಸೇವೆಗಾಗಿ ಬಂದಿರುವ ನಾನು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಇದು ನನ್ನ ಕ್ಷೇತ್ರದ ಜನರ ಅಪೇಕ್ಷೆ” ಎಂದಿದ್ದಾರೆ.
“ನನ್ನ ತೇಜೋವಧೆಯಿಂದ ಕುಟುಂಬಕ್ಕೆ ತುಂಬಾ ನೋವುಂಟಾಗಿದೆ. ‘ಇದೆಲ್ಲ ನಿನಗೆ ಬೇಕಿತ್ತಾ’ ಎಂದು ಜಗಳವಾಗಿದೆ. ನಮ್ಮಲ್ಲಿ ಹೆಣ್ಣನ್ನು ದೇವರಿಗೆ ಹೋಲಿಸುತ್ತಾರೆ. ಕೇವಲ ಒಂದು ಟಿಕೆಟ್ಗಾಗಿ ಹೆಣ್ಣನ್ನು ಅಶ್ಲೀಲವಾಗಿ ಬಿಂಬಿಸುವುದು ಸರಿಯಲ್ಲ” ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
“ನನಗೆ ಇತರೆ ಪಕ್ಷಗಳು ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ. ನಾನು ಪಕ್ಷೇತರಳಾಗಿ ಸ್ಪರ್ಧಿಸಲು ಯೋಚಿಸಿದ್ದೇನೆ” ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರ ತಾಯಿ ಚಂದ್ರಿ ಬಾಯಿ, ಪತಿ ನಿತಿನ್, ಸುನೀಲ್, ತೇಜಸ್ ಇದ್ದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕಾಂಗ್ರೆಸ್ನ ಎರಡನೇ ಪಟ್ಟಿ ಬಿಡುಗಡೆ: ಘೋಷಣೆಯಾಗದ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರು
ಹಿನ್ನೆಲೆ ಏನು?
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ನಿವಾಸಿ ಸವಿತಾ ಬಾಯಿ ಅವರು ಕೆಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರಾಜ್ಯ ಮಟ್ಟದ ಕಾಂಗ್ರೆಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಹಠಕ್ಕೆ ಬಿದ್ದು, ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು ಹೋದಲ್ಲಿ ಬಂದಲ್ಲಿ ಜನ ಸಾಗರವೇ ಸೇರುತ್ತಿತ್ತು.
ಈ ಮಧ್ಯೆ, ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದ ಮಾಜಿ ಸಚಿವ ಎಚ್ ಆಂಜನೇಯ ಅವರ ಅಳಿಯ ಬಸವಂತಪ್ಪ ಅವರಿಗೆ ಮಾಯಕೊಂಡ ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.
ಕಾಂಗ್ರೆಸ್ ಟಿಕೆಟ್ ಪಡೆದ ಬಸವಂತಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಸವಿತಾ ಬಾಯಿ ಅವರ ಸಭ್ಯವಲ್ಲದ ಫೋಟೊಗಳನ್ನು ವೈರಲ್ ಮಾಡಿದ್ದರು. ಈ ಸಂಬಂಧ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬಸವಂತಪ್ಪ ವಿರುದ್ಧ ಪ್ರಕರಣ ಕೇಸ್ ಕೂಡಾ ದಾಖಲಾಗಿದೆ.
ಇಂತಹ ಕೀಳು ರಾಜಕೀಯದಿಂದ ತಮ್ಮ ಕುಟುಂಬ ನೊಂದಿದೆ. ನನಗೆ ನ್ಯಾಯಬೇಕು. ಮೇಲಾಗಿ ಬಸವಂತಪ್ಪ ಅವರು ತಮ್ಮ ಬಗ್ಗೆ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ ಎಂದು ಬೇಸರಗೊಂಡಿರುವ ಸವಿತಾ ಬಾಯಿ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಮುಂದಾಗಿದ್ದಾರೆ.