- ಲಿಂಗಾಯತರು, ಒಕ್ಕಲಿಗರಿಗೆ ಸಮಾನ ಪ್ರಾತಿನಿಧ್ಯ ನೀಡಿದ ಕಾಂಗ್ರೆಸ್
- ಕುರುಬ-3, ಮುಸ್ಲಿಂ-3, ಎಸ್ಸಿ ಎಡ-2, ಎಸ್ಸಿ ಬಲ-2, ಎಸ್ಟಿ-2
ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು(ಏಪ್ರಿಲ್ 06) ಬಿಡುಗಡೆಯಾಗಿದೆ. ಗಮನಾರ್ಹ ಸಂಗತಿ ಎಂದರೆ ಎರಡನೇ ಪಟ್ಟಿಯಲ್ಲಿ ವಲಸಿಗರಿಗೆ ಕಾಂಗ್ರೆಸ್ ಮಣೆ ಹಾಕಿದೆ.
2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದ್ದು, ಇನ್ನು 58 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ. ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರಿಗೆ ಸಮಾನ ಪ್ರಾತಿನಿಧ್ಯ ಕೊಡಲಾಗಿದೆ.
ಇತ್ತೀಚೆಗೆ ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಕೆಲವರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಲಾಗಿದೆ. ಮುಖ್ಯವಾಗಿ ಇತ್ತೀಚೆಗಷ್ಟೇ ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್ ವೈ ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಹಾಗೆಯೇ ಸಿದ್ದರಾಮಯ್ಯ ಅವರ ಆಪ್ತ ಎಚ್ ಆಂಜನೇಯಗೆ ಹೊಳಲ್ಕೆರೆ ಟಿಕೆಟ್ ಸಿಕ್ಕಿದೆ.
ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ಕೆ ಪಿ ವಿರೇಂದ್ರಗೆ (ಪಪ್ಪಿ) ಚಿತ್ರದುರ್ಗ ಟಿಕೆಟ್ ನೀಡಲಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲಿಸಿದೆ. ಎರಡನೇ ಪಟ್ಟಿಯಲ್ಲಿ ಒಬ್ಬ ಮಹಿಳಾ ಅಭ್ಯರ್ಥಿಗೂ ಟಿಕೆಟ್ ಕಾಂಗ್ರೆಸ್ ನೀಡಿಲ್ಲ.
ಬಾಗಲಕೋಟೆ ಜಿಲ್ಕೆಯ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಲಾಗಿದೆ. ಬಾಗಲಕೋಟೆ ಕ್ಷೇತ್ರದಿಂದ ಎಚ್ ವೈ ಮೇಟಿ, ಬೀಳಗಿ ಕ್ಷೇತ್ರದಿಂದ ಜೆ ಟಿ ಪಾಟೀಲ, ಮುಧೋಳ ಕ್ಷೇತ್ರದಿಂದ ಆರ್ ಬಿ ತಿಮ್ಮಾಪುರ ಹಾಗೂ ಬಾದಾಮಿ ಕ್ಷೇತ್ರದಿಂದ ಬಿ ಬಿ ಚಿಮ್ಮನಕಟ್ಟಿ ಅವರ ಮಗ ಭೀಮಸೇನ ಚಿಮ್ಮನಕಟ್ಟಿಗೆ ಟಿಕೆಟ್ ಕೊಡಲಾಗಿದೆ.
ಮೊದಲ ಪಟ್ಟಿಯಲ್ಲಿ ಹುನಗುಂದ, ಜಮಖಂಡಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ತೇರದಾಳ ಕ್ಷೇತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಇಲ್ಲಿ ಉಮಾಶ್ರೀ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಮುಖ್ಯಮಂತ್ರಿ ಕ್ಷೇತ್ರ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಅವರಿಗೆ ಧಾರವಾಡ ಗ್ರಾಮೀಣ ಟಿಕೆಟ್ ನೀಡಲಾಗಿದೆ. ಬೊಮ್ಮಾಯಿ ಅವರ ಶಿಗ್ಗಾಂವಿ ಸ್ಪರ್ಧೆ ಖಚಿತವಾದಲ್ಲಿ ವಿನಯ್ ಕುಲಕರ್ಣಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?
ಜಾತಿ ಲೆಕ್ಕಾಚಾರ
ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗ ಬಿಡುಗಡೆಗೊಂಡಿರುವ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಜಾತಿ ಲೆಕ್ಕಾಚಾರ ನೋಡುವುದಾದರೆ, ಲಿಂಗಾಯತ ಸಮುದಾಯದ 10 ಮಂದಿಗೆ ಟಿಕೆಟ್ ನೀಡಲಾಗಿದೆ. ಜೊತೆಗೆ ರೆಡ್ಡಿ ಲಿಂಗಾಯತರೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಇನ್ನು ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ಸೇರಿ 11 ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಲಾಗಿದೆ.
ಕುರುಬ ಸಮುದಾಯಕ್ಕೆ ಮೂರು ಮತ್ತು ಮುಸ್ಲಿಂ ಸಮುದಾಯಕ್ಕೆ ಮೂರು ಟಿಕೆಟ್ ನೀಡಲಾಗಿದೆ. ಎಸ್ಸಿ- ಎಡ, ಎಸ್ಸಿ- ಬಲ, ಎಸ್ಟಿ ಸಮುದಾಯಕ್ಕೆ ತಲಾ 2 ಟಿಕೆಟ್ ನೀಡಲಾಗಿದೆ. ಒಬಿಸಿ, ಮೊಗವೀರ, ರೆಡ್ಡಿ, ರಜಪೂತ, ಮರಾಠಿ, ನಾಯ್ಡು, ಈಡಿಗ ಸಮುದಾಯಕ್ಕೆ ತಲಾ ಒಂದು ಟಿಕೆಟ್ ನೀಡಲಾಗಿದೆ.
ಮೊದಲ ಪಟ್ಟಿಯ ಜಾತಿ ಲೆಕ್ಕಾಚಾರ
ಚುನಾವಣಾ ನೀತಿಸಂಹಿತೆ ಘೋಷಣೆಗೆ ಮುನ್ನವೇ ಕಾಂಗ್ರೆಸ್ ಬಿಡುಗಡೆ ಮಾಡಿದ್ದ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪೈಕಿ ಲಿಂಗಾಯತ- 30, ಎಸ್ಸಿ- 22, ಎಸ್ಟಿ- 10, ಒಕ್ಕಲಿಗ- 22, ಮುಸ್ಲಿಂ- 8, ಕುರುಬ- 5, ಈಡಿಗ- 6, ರೆಡ್ಡಿ- 2, ಬ್ರಾಹ್ಮಣ- 5, ಮರಾಠ- 2, ರಜಪೂತ್- 1, ಕುಂಬಾರ- 1, ಬಂಟ್ಸ್- 3, ಕ್ರಿಶ್ಚಿಯನ್- 1, ಬೆಸ್ತ- 1, ಇತರೆ- 5 ಮಂದಿಗೆ ಅವಕಾಶ ನೀಡಲಾಗಿತ್ತು.
ಇನ್ನು ಕಾಂಗ್ರೆಸ್ ಪಕ್ಷದ ಓಟ್ ಬ್ಯಾಂಕ್ ಎಂದೇ ಕರೆಯಲಾಗುವ ಪರಿಶಿಷ್ಟರ ಟಿಕೆಟ್ ಹಂಚಿಕೆಯನ್ನು ಒಳಜಾತಿಗಳಿಗೆ ಹೀಗೆ ಹಂಚಿಕೆ ಮಾಡಲಾಗಿದೆ. ಇಲ್ಲಿ ಎಡಗೈ- 5, ಬಲಗೈ- 11, ಬೋವಿ- 2, ಲಂಬಾಣಿ- 4 ರಂತೆ ನೀಡಲಾಗಿದೆ.