ಇತ್ತೀಚಿನ ರೈಲು ಅಪಘಾತಗಳ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ತ್ರಿವಳಿ ರೈಲು ದುರಂತದಿಂದ 300 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಮೂರು ರೈಲುಗಳು ಒಂದೇ ಕಡೆ ಹಳಿ ತಪ್ಪಿರುವ ಬಗ್ಗೆ ಒಡಿಶಾ ಸರ್ಕಾರ ತಡರಾತ್ರಿ ಸ್ಪಷ್ಟನೆ ನೀಡಿದೆ. ಮೊದಲು ಬೆಂಗಳೂರಿನಿಂದ ಹೌರಾಗೆ ತೆರಳುತ್ತಿದ್ದ ಸೂಪರ್ಫಾಸ್ಟ್ ರೈಲು ಹಳಿ ತಪ್ಪಿ ಪಕ್ಕದ ಹಳಿಗೆ ಬೋಗಿಗಳು ಬಿದ್ದಿವೆ.
ಚೆನ್ನೈಗೆ ಬರುತ್ತಿದ್ದ ಶಾಲಿಮರ್-ಚೆನ್ನೈ ಸೆಂಟ್ರಲ್ ಕೋರಮಂಡಲ ಎಕ್ಸ್ಪ್ರೆಸ್ ರೈಲು, ಹಳಿ ತಪ್ಪಿದ್ದ ಬೆಂಗಳೂರು – ಹೌರಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕೋರಮಂಡಲ ಎಕ್ಸ್ಪ್ರೆಸ್ ರೈಲಿನ ಬೋಗಿಗಳಿಗೆ ಸರಕು ಸಾಗಾಣಿಕೆ ರೈಲು ಡಿಕ್ಕಿ ಹೊಡೆದು ತ್ರಿವಳಿ ದುರಂತ ಸಂಭವಿಸಿದೆ.
ಕೊಲ್ಕತ್ತಾದಿಂದ 250 ಕಿಲೋಮೀಟರ್ ದಕ್ಷಿಣಕ್ಕೆ, ಭುವನೇಶ್ವರದಿಂದ 170 ಕಿಲೋಮೀಟರ್ ಉತ್ತರಕ್ಕೆ ಇರುವ ಬಲಸೋರ್ ಜಿಲ್ಲೆಯ ಬಹಂಗಾ ಬಜಾರ್ ರೈಲು ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ. ಬೆಂಗಳೂರು- ಹೌರಾ ರೈಲು ಸಂಜೆ 6.55ಕ್ಕೆ ಹಳಿ ತಪ್ಪಿದ್ದರೆ ಕೋರಮಂಡಲ ರೈಲು 7 ಗಂಟೆಗೆ ಹಳಿ ತಪ್ಪಿದೆ.
ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿನ ಬೋಗಿಗಳಿಗೂ ಹಳಿ ತಪ್ಪಿದ ರೈಲಿನ ಬೋಗಿಗಳು ಡಿಕ್ಕಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಕೋರಮಂಡಲ ಎಕ್ಸ್ಪ್ರೆಸ್ ರೈಲಿನ ಪ್ರಯಾಣಿಕ ಹಾಗೂ ಅಪಘಾತದಿಂದ ಪಾರಾದ ಅನುಭವ್ ದಾಸ್ ಭಯಾನಕ ಅನುಭವವನ್ನು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
“ಕೋರಮಂಡಲ ಎಕ್ಸ್ಪ್ರೆಸ್ ರೈಲಿನ ಪ್ರಯಾಣಿಕನಾಗಿ ಅಪಾಯದಿಂದ ಪಾರಾಗಿರುವುದಕ್ಕೆ ಕೃತಜ್ಞತೆ ಹೇಳಲೇಬೇಕು. ಇತ್ತೀಚಿನ ವರ್ಷಗಳಲ್ಲಿ ಇದು ಅತಿದೊಡ್ಡ ರೈಲು ದುರಂತ. ನಿಖರವಾಗಿ ಅಲ್ಲದಿದ್ದರೂ ನಾನು 200-250 ಮಂದಿಯ ಶವ ಕಂಡಿದ್ದೇನೆ. ಇಡೀ ಕುಟುಂಬಗಳೇ ನಾಶವಾಗಿವೆ. ಕಾಲು ಮುರಿದ, ರಕ್ತಸಿಕ್ತ ದೇಹಗಳು ಹಳಿಗಳ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ದೃಶ್ಯವನ್ನು ಮರೆಯಲು ಸಾಧ್ಯವಿಲ್ಲ. ಆ ಕುಟುಂಬಗಳಿಗೆ ದೇವರೇ ನೆರವಾಗಬೇಕು.. ನನ್ನ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಒಡಿಶಾ; ಬೆಂಗಳೂರಿನಿಂದ ತೆರಳುತ್ತಿದ್ದ ಹೌರಾ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ಢಿಕ್ಕಿ; 233 ಕ್ಕೂ ಹೆಚ್ಚು ಸಾವು, 900ಕ್ಕೂ ಹೆಚ್ಚು ಮಂದಿಗೆ ಗಾಯ
ಕರ್ನಾಟಕದ 110 ಪ್ರಯಾಣಿಕರು ಸುರಕ್ಷಿತ
ಈ ನಡುವೆ ಅಪಘಾತಕ್ಕೀಡಾದ ರೈಲುಗಳಲ್ಲಿ ಒಂದಾಗಿರುವ ಕೋರಮಂಡಲ ಎಕ್ಸ್ಪ್ರೆಸ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯ 110 ಮಂದಿ ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳಸ ತಾಲೂಕಿನ ಕಳಸ, ಸಂಸೆ, ಹೊರನಾಡು ಸುತ್ತಮುತ್ತಲಿನ ಜೈನ ಸಮುದಾಯದ 110 ಮಂದಿ ಎರಡು ದಿನಗಳ ಹಿಂದೆ ಜಾರ್ಖಂಡ್ನ ಸುಮೇದ್ ಸಿಖರ್ಜಿ ಕ್ಷೇತ್ರಕ್ಕೆ ಹೊರಟಿದ್ದರು. ಈ ರೈಲು ಕಳೆದ ರಾತ್ರಿ ಬಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ. ಆದರೆ ಕಳಸ ತಾಲೂಕಿನಿಂದ ತೆರಳಿದ್ದ 110 ಮಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ
ಒಡಿಶಾದ ಬಾಲಾಸೋರ್ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದುರಂತದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟ ಸುದ್ದಿ ಕೇಳಿ ಅತೀವ ನೋವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ದುರ್ಘಟನೆಯಲ್ಲಿ ಗಾಯಗೊಂಡಿರುವವರೆಲ್ಲರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.